ADVERTISEMENT

ಬಿಎಸ್‌ವೈ ಮನೆಗೆ ಯುವ ಕಾಂಗ್ರೆಸ್‌ ಮುತ್ತಿಗೆ

ರಾಷ್ಟ್ರೀಕೃತ ಬ್ಯಾಂಕ್‌ಗಳ ರೈತರ ಸಾಲಮನ್ನಾ ಮಾಡಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2017, 6:31 IST
Last Updated 11 ಜುಲೈ 2017, 6:31 IST

ಶಿವಮೊಗ್ಗ: ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಯುವ ಕಾಂಗ್ರೆಸ್‌ನ ಎರಡು ಬಣಗಳ (ರಂಗನಾಥ್ ಬಣ ಮತ್ತು ಮಧುಸೂದನ್ ಬಣ) ಕಾರ್ಯಕರ್ತರು ಸೋಮವಾರ ಸಂಸತ್ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರ ವಿನೋಬನಗರ ನಿವಾಸಕ್ಕೆ ಪ್ರತ್ಯೇಕವಾಗಿ ಮುತ್ತಿಗೆ ಹಾಕಿ ಪ್ರತಿಭಟನೆ
ನಡೆಸಿದರು.

ತಂಡ ತಂಡವಾಗಿ ಬಂದು ಮುತ್ತಿಗೆ ಹಾಕಲು ಯತ್ನಿಸಿದ 100ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆ ಮಾಡಿದರು.

ರಾಜ್ಯದಲ್ಲಿ ಮೂರ್‍ನಾಲ್ಕು ವರ್ಷ ಗಳಿಂದ ತೀವ್ರ ಬರಗಾಲ ಆವರಿಸಿದೆ. ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳೆಗಾಗಿ ಮಾಡಿದ ಸಾಲ ತೀರಿಸಲಾಗದೆ ರೈತರು ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ ಎಂದು ಆರೋಪಿಸಿದರು.

ADVERTISEMENT

ರಾಜ್ಯ ಸರ್ಕಾರ ರೈತರ ಸಹಕಾರಿ ಬ್ಯಾಂಕ್‌ಗಳಲ್ಲಿನ ₹ 8,165 ಕೋಟಿ ಸಾಲ ಮನ್ನಾ ಮಾಡಿದೆ.  22,27,506 ರೈತರಿಗೆ ಅನುಕೂಲವಾಗಿದೆ. ಆದರೂ, ರೈತರ ಸಂಕಷ್ಟಕ್ಕೆ ಪರಿಹಾರ ಸಿಗುತ್ತಿಲ್ಲ. ಹಾಗಾಗಿ, ಕೇಂದ್ರ ಸರ್ಕಾರ ತಕ್ಷಣವೇ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಮೊದಲು ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು. ನಂತರ ಕೇಂದ್ರ ಸರ್ಕಾರ ಮನ್ನಾ ಮಾಡುತ್ತದೆ ಎಂದು ಹೇಳಿಕೆ ನೀಡುತ್ತಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಈಗ ಸಾಲಮನ್ನಾ ವಿಚಾರವನ್ನೇ ಎತ್ತುತ್ತಿಲ್ಲ. ಇತರ ನಾಯಕರೂ ಮೌನ ವಹಿಸಿದ್ದಾರೆ ಎಂದು ಟೀಕಿಸಿದರು.

ಬಿಜೆಪಿಯ 19 ಸಂಸದರು ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ. ಅವರು ರಾಜ್ಯದ ಬರ ಪರಿಸ್ಥಿತಿ ಕುರಿತು ಕೇಂದ್ರದ ಗಮನ ಸೆಳೆಯುವಲ್ಲಿ ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಜಿ. ಮಧುಸೂದನ್, ನಗರ ಘಟಕದ ಅಧ್ಯಕ್ಷ ಶರತ್, ಗಿರೀಶ್, ಎಸ್.ಭರತ್, ಮಹಮ್ಮದ್ ಆರೀಫ್‌ ಉಲ್ಲಾ, ಮಹಮ್ಮದ್ ನಿಹಾಲ್, ಪುರಲೆ ಮಂಜು, ಮಧುಸೂದನ್‌ ಬಣದ ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪ್ರವೀಣ್ ಕುಮಾರ್, ಎಚ್.ಪಿ. ಗಿರೀಶ್, ತಂಗರಾಜ್, ಆರ್. ಕಿರಣ್, ಟಿ.ವಿ. ರಂಜಿತ್, ಇ.ಟಿ. ನಿತಿನ್,  ವಿನೋದ್, ಲೋಕೇಶ್, ರಾಹುಲ್, ಪ್ರವೀಣ್ ಗಣೇಶ್, ಪ್ರಜ್ವಲ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.