ಶಿವಮೊಗ್ಗ: ಜಿಲ್ಲೆಯಾದ್ಯಂತ ಮಂಗಳವಾರ ಉತ್ತಮ ಮಳೆಯಾಗಿದ್ದು, ಮಲೆನಾಡಿನಲ್ಲಿ ಮುಂಗಾರು ತುಸು ಚುರುಕು ಪಡೆದಿದೆ.
ಉತ್ತಮ ಮಳೆ
ತೀರ್ಥಹಳ್ಳಿ: ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು ರೈತರಲ್ಲಿ ಸಂತಸ ಮೂಡಿಸಿದೆ. ಆಗುಂಬೆ ಭಾಗದ ಘಟ್ಟಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಮಳೆ ಬಿರುಸಾಗಿದೆ. ಪ್ರಮುಖ ನದಿಗಳಾದ ತುಂಗಾ, ಮಾಲತಿ, ಕುಶಾವತಿ ನದಿಗಳಲ್ಲಿ ನೀರಿನ ಪ್ರಮಾಣ ಏರಿಕೆ ಕಂಡಿದೆ. ಜೂನ್ ತಿಂಗಳಲ್ಲಿ ಮಳೆ ಕ್ಷೀಣಿಸಿದ್ದರಿಂದಾಗಿ ರೈತರು ಆತಂಕಕ್ಕೆ ಒಳಗಾಗಿದ್ದರು. ಜುಲೈ ಎರಡನೇ ವಾರ ಮಳೆ ಚುರುಕಾಗಿದ್ದು, ಕೃಷಿ ಚಟುವಟಿಕೆಗೆ ಚಾಲನೆ ಸಿಗಲಿದೆ.
ಸೋಮವಾರ (ಜುಲೈ 17) ಆಗುಂಬೆಯಲ್ಲಿ 23.2 ಮಿ.ಮೀ ಹಾಗೂ ತೀರ್ಥಹಳ್ಳಿಯಲ್ಲಿ 26.6 ಮಿ.ಮೀ ಮಳೆ ಸುರಿದಿದೆ. ಮಂಗಳವಾರ ತೀರ್ಥಹಳ್ಳಿ ಯಲ್ಲಿ 17.6 ಹಾಗೂ ಆಗುಂಬೆಯಲ್ಲಿ 74.2 ಮಿ.ಮೀ ಮಳೆಯಾಗಿದೆ.
ಸಾಗರ: ಮನೆ ಗೋಡೆ ಕುಸಿತ
ಸಾಗರ: ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಮಂಗಳವಾರ ಭಾರಿ ಪ್ರಮಾಣದಲ್ಲಿ ಮಳೆಯಾಗಿದೆ. ನೆಹರೂ ನಗರ ಬಡಾವಣೆಯ ಮನೆಯೊಂದರ ಗೋಡೆ ಕುಸಿದಿದೆ. ಆದರೆ, ಯಾವುದೇ ಅನಾಹುತ ಸಂಭವಿಸಿಲ್ಲ. ನಗರಸಭೆ ಅಧ್ಯಕ್ಷೆ ಎನ್.ಉಷಾ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜೂರ್ ಆಲಿಖಾನ್ ಸ್ಥಳಕ್ಕೆ ಭೇಟಿ ನೀಡಿದ್ದರು.
ಮಧ್ಯಾಹ್ನದ ನಂತರ ಗಾಳಿ ಸಮೇತ ಮಳೆಯಾಗಿದ್ದು, ಕೆಲವೆಡೆ ವಿದ್ಯುತ್ ತಂತಿಗಳು ಹರಿದು ಬಿದ್ದಿವೆ. ಈ ಮಳೆಗಾಲದಲ್ಲಿ ಇದೇ ಮೊದಲ ಬಾರಿಗೆ ಧಾರಾಕಾರ ಮಳೆಯಾಗಿರುವುದು ನಾಗರಿಕರಲ್ಲಿ ಸಂತಸ ತಂದಿದೆ.
ಜಲಾಶಯ ಮಟ್ಟ
4ಮಂಗಳವಾರ ಭದ್ರಾ ಜಲಾಶಯದ ನೀರಿನಮಟ್ಟ 128.8 ಅಡಿ.
ಒಳಹರಿವು 3,321 ಕ್ಯುಸೆಕ್. ಹೊರಹರಿವು 150 ಕ್ಯುಸೆಕ್.
4ಲಿಂಗನಮಕ್ಕಿ ಜಲಾಶಯದ ನೀರಿನಮಟ್ಟ 1766.80 ಅಡಿ. ಒಳಹರಿವು 13,828 ಕ್ಯುಸೆಕ್. ಹೊರಹರಿವು 1,277 ಕ್ಯುಸೆಕ್.
4ಮಾಣಿ ಜಲಾಶಯದ ನೀರಿನಮಟ್ಟ 578.12 ಮೀಟರ್. ಒಳಹರಿವು 2,123 ಕ್ಯುಸೆಕ್. ಹೊರಹರಿವು ಶೂನ್ಯ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.