ADVERTISEMENT

ಮಳೆ ನೀರು ಸಂಗ್ರಹಿಸಿ: ಜಿಲ್ಲಾಧಿಕಾರಿ

‘ನಮ್ಮ ನೆಲ– ನಮ್ಮ ಜೀವನ’ ಕುರಿತು ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 30 ಜನವರಿ 2015, 6:07 IST
Last Updated 30 ಜನವರಿ 2015, 6:07 IST

ಶಿವಮೊಗ್ಗ: ವಾಡಿಕೆಗಿಂತ ಹೆಚ್ಚಿನ ಪ್ರಮಾಣದ ಮಳೆ ಬೀಳುವ ಪ್ರದೇಶದಲ್ಲಿ ಮಳೆ ನೀರನ್ನು ಸಂಗ್ರಹಿಸುವ ಪರಿಣಾಮಕಾರಿ ವಿಧಾನವನ್ನು ಸಾರ್ವಜನಿಕರು ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ಸಲಹೆ ಮಾಡಿದರು.

ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯ್ತಿ ವತಿಯಿಂದ ಗುರುವಾರ ನಗರದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ‘ನಮ್ಮ ಜಲ ; ನಮ್ಮ ಜೀವನ’ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಭೂಮಿಯ ಮೇಲಿನ ನೈಸರ್ಗಿಕ ಸಂಪತ್ತು ಜೀವ ವಿಕಾಸಕ್ಕೆ ಸಹಕಾರಿಯಾಗಿದೆ. ಆದ್ದರಿಂದ ನಮಗೆ ದೊರೆತಿರುವ ಪ್ರಾಕೃತಿಕ ಸಂಪತ್ತನ್ನು ಉಳಿಸಲು ಎಲ್ಲರೂ ಮುಂದಾಗಬೇಕು’ ಎಂದು ಸಲಹೆ ನೀಡಿದರು.

ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕಲಗೋಡು ರತ್ನಾಕರ, ‘ಮನುಷ್ಯ ವಿಲಾಸಿ ಜೀವನ ನಿರ್ವಹಣೆಗಾಗಿ ಸಹಜವಾದ ಪ್ರಾಕೃತಿಕ ಸಂಪತ್ತನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾನೆ. ಅದರಲ್ಲೂ  ಜಲಮೂಲಗಳನ್ನು ನಾಶಗೊಳಿಸಲು ಆತ ಮುಂದಾಗಿರುವುದು ದುರಂತ’ ಎಂದು ಬೇಸರ ವ್ಯಕ್ತಪಡಿಸಿದರು.

ನೀರಿನ ಮಿತಬಳಕೆ ಸಾಧಿಸದಿದ್ದರೆ ಭವಿಷ್ಯದಲ್ಲಿ ಅನೇಕ ಸಮಸ್ಯೆ ಎದುರಿಸಬೇಕಾಗುತ್ತದೆ. ಅದರಲ್ಲೂ ಬೆಂಗಳೂರಿನಂತಹ ಮಹಾನಗರಗಳಲ್ಲಿ ಜನಜೀವನ ದುಸ್ತರಗೊಳ್ಳಲಿದೆ. ಪ್ರತಿ ಹನಿ ನೀರು ಕೂಡ ಅಮೂಲ್ಯವಾಗಿದ್ದು, ಅದನ್ನು ಸದ್ವಿನಿಯೋಗಪಡಿಸಿಕೊಳ್ಳಬೇಕು ಎಂದರು.

ನಿಸರ್ಗದಲ್ಲಿ ದೊರೆಯುವ ಅಮೂಲ್ಯ ನೀರನ್ನು ಮಿತವಾಗಿ ಬಳಸಬೇಕು. ಹೊಸ ಕಾಡನ್ನು ಬೆಳೆಸುವುದರ ಜತೆಗೆ ಇರುವ ಕಾಡನ್ನು ಉಳಿಸಿ-, ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ. ನೀರಿನ ಮಿತಬಳಕೆ ಮತ್ತು ಪರಿಸರ ಸಂರಕ್ಷಿಸುವ ಬಗ್ಗೆ ಪರಸ್ಪರ ವಿಷಯ ವಿನಿಮಯ ಮಾಡಿಕೊಳ್ಳಬೇಕು ಎಂದರು.

ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಉಪನ್ಯಾಸಕ ಡಾ.ಪರಿಸರ ನಾಗರಾಜ್ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ‘ಜೀವಜಲ’ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ಜಿ.ಪಂ ಸಿಇಒ ಬಿ.ರಾಮು, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಗಾಯಿತ್ರಿ ಷಣ್ಮುಖಪ್ಪ, ಜಿ.ಪಂ ಸದಸ್ಯ ದಾನೇರ ರುದ್ರಪ್ಪ ಉಪಸ್ಥಿತರಿದ್ದರು.

ಕಸ್ತೂರಬಾ ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಚ್.ಆರ್.ರಾಜಪ್ಪ ಸ್ವಾಗತಿಸಿದರು. ಕಾಶಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.