ಶಿಕಾರಿಪುರ: ‘ಮುಗ್ದ ರೈತರನ್ನು ವಂಚಿಸುವ ಕಾರ್ಯವನ್ನು ರಸ ಗೊಬ್ಬರ ಕಂಪೆನಿಗಳು ಮಾಡದೇ ಗುಣಮಟ್ಟದ ರಸಗೊಬ್ಬರ ಉತ್ಪನ್ನವನ್ನು ಸರಬರಾಜು ಮಾಡಬೇಕು’ ಎಂದು ಶಾಸಕ ಬಿ.ವೈ.ರಾಘವೇಂದ್ರ ಕಿವಿಮಾತು ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ಸಹಕಾರ ಇಲಾಖೆ ಸಾಗರ ವಿಭಾಗ, ಇಫ್ಕೊ ಹಾಗೂ ಟಿಎಪಿಸಿಎಂಎಸ್ ಆಯೋಜಿಸಿದ್ದ ಸಹಕಾರಿ ರಸಗೊಬ್ಬರ ಮಾರಾಟ ಗಾರರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
‘ಗೊಬ್ಬರ ತಯಾರಿಸಿರುವ ಕಂಪೆನಿಗಳು ವ್ಯಾಪಾರದ ಜತೆ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ರೈತರಿಗೆ ಮೋಸ ಆಗದಂತೆ ಕಂಪೆನಿಗಳು ಹಾಗೂ ಅಧಿಕಾರಿಗಳು ಎಚ್ಚರ ವಹಿಸಬೇಕು. ಸಹಕಾರಿ ಸಂಘದ ಸದಸ್ಯರಿಂದ ಸ್ಥಾಪನೆ ಯಾದ ಇಫ್ಕೊ ಸಂಸ್ಥೆ ರೈತರ ಸೇವೆಗೆ ಆದ್ಯತೆ ನೀಡುತ್ತಿದೆ. ಸಂಸ್ಥೆ ಶೇ 20ರಷ್ಟು ಲಾಭಂಶವನ್ನು ಸದಸ್ಯರಿಗೆ ನೀಡುತ್ತಿದೆ’ ಎಂದು ಶ್ಲಾಘಿಸಿದರು.
ಕೇಂದ್ರ ಸರ್ಕಾರ ರಸಗೊಬ್ಬರ ದರವನ್ನು ಕಡಿಮೆ ಮಾಡುವ ಮೂಲಕ ಕೃಷಿ ಕ್ಷೇತ್ರಕ್ಕೆ ಆದ್ಯತೆ ನೀಡುತ್ತಿದೆ. ಮಾರಾಟಗಾರರು ಹಾಗೂ ಅಧಿಕಾರಿಗಳು ಕೇಂದ್ರ ಸರ್ಕಾರ ನಿಗಧಿ ಮಾಡಿದ ದರದಂತೆ ಗೊಬ್ಬರವನ್ನು ವಿತರಿಸಬೇಕು. ಮಾರಾಟಗಾರರು ತೂಕದಲ್ಲಿ ವ್ಯತ್ಯಾಸ ಮಾಡಬಾರದು. ಕಳಪೆ ಗೊಬ್ಬರ ವಿತರಿಸಬಾರದು ಎಂದು ಕಿವಿಮಾತು ಹೇಳಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎನ್.ಪ್ರಭಾಕರ್, ಟಿಎಪಿಸಿ ಎಂಎಸ್ ಅಧ್ಯಕ್ಷ ಹಾಲಪ್ಪ, ನಿರ್ದೇಶಕರಾದ ಬಿ.ಡಿ.ಭೂಕಾಂತ್, ಹಳ್ಳೂರು ಪರಮೇಶ್ವರಪ್ಪ, ಇಫ್ಕೊ ಆರ್ಜಿಬಿ ಸದಸ್ಯ ಪಿ.ಎನ್. ಸುಬ್ಬರಾವ್, ಇಫ್ಕೊ ಹಾಸನ ಮುಖ್ಯ ಪ್ರಾದೇಶಿಕ ವ್ಯವಸ್ಥಾಪಕ ಎಸ್.ಡಿ. ಮುಖರ್ತಿ ಹಾಳ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಬಿ.ಚನ್ನ ವೀರಪ್ಪ, ನಾಗರಾಜಗೌಡ ಹಾಗೂ ಅವರೂ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.