ರಿಪ್ಪನ್ಪೇಟೆ: ದೀಪಾವಳಿಯ ಬಲಿ ಪಾಡ್ಯಮಿ ದಿನವಾದ ಶುಕ್ರವಾರ ಎಲ್ಲೆಡೆ ಸಡಗರ ಸಂಭ್ರಮದಿಂದ ಗೋಪೂಜೆ ಆಚರಿಸಲಾಯಿತು. ಮನೆಯ ಗೋಶಾಲೆಯಲ್ಲಿ ಬಾಳೆಕಂದು, ಕಬ್ಬಿನ ಸುಳಿ, ಬಣ್ಣ ಬಣ್ಣದ ರಂಗೋಲಿಯ ಚಿತ್ತಾರಗಳಿಂದ ಅಲಂಕರಿಸಲಾಗಿತ್ತು. ಗೋವುಗಳಿಗೆ ಚಂಡು ಹೂ, ಚಪ್ಪೆ ರೊಟ್ಟಿ, ಕಾಯಿಕಡಿ, ಪಚ್ಚೆತೆನೆ, ಬಣ್ಣಗಳೊಂದಿಗೆ ಶೃಂಗರಿಸಿ ವಿಶೇಷ ಪೂಜೆ ಸಲ್ಲಿಸಿದರು.
ಕಾರ್ತೀಕ ಮಾಸದ ಪಾಡ್ಯದಿಂದ ತದಿಗೆವರೆಗೆ ಭೂಲೋಕದಲ್ಲಿ ತುಳಸಿ ಬೃಂದಾವನದ ಬಲಬದಿಯಲ್ಲಿ ದೀಪಾರಾಧನೆ ಮೂಲಕ ಪೂಜೆಗೆ ವಿಷ್ಣುವಿನಿಂದ ವರ ಪಡೆದ ಬಲಿ ಚಕ್ರವರ್ತಿ ಮುಕ್ತಿ ಪಡೆದ ದಿನವನ್ನು ಬಲಿಪಾಡ್ಯಮಿಯಾಗಿ ಆಚರಿಸುತ್ತಾರೆ.
ಮಲೆನಾಡಿನ ಈ ಭಾಗದಲ್ಲಿ ಮಂಗಳವಾರ ಸಂಜೆ ಗಂಗೆಗೆ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಬುಧವಾರ ಎಣ್ಣೆಹಚ್ಚಿಕೊಂಡು ಸ್ನಾನ ಮಾಡಿ, ನಂತರ ಹೊಸ ಬಟ್ಟೆಗಳನ್ನು ಧರಿಸಿ ಪಟಾಕಿ ಸಿಡಿಸಿ ಚಿಣ್ಣರು ಸಂಭ್ರಮಿಸಿದರು.
ಕಾರ್ತಿಕ ಮಾಸದ ಅಮಾವಾಸ್ಯೆದಿನ ಗುರುವಾರ ವರ್ತಕರು ತಮ್ಮ ಅಂಗಡಿಗಳಲ್ಲಿ ಧನಲಕ್ಷ್ಮೀ ಪೂಜೆ ನೆರವೇರಿಸಿದರು. ಗ್ರಾಮೀಣ ರೈತರು ಬಹು ಹಿಂದಿನಿಂದಲೂ ಕೃಷಿ ಪರಿಕರಗಳನ್ನು ಮತ್ತು ವರ್ಷವಿಡಿ ಶ್ರಮದ ಫಲವಾಗಿ ತಾವು ಬೆಳೆದ ಆಹಾರ ಧಾನ್ಯಗಳಿಗೆ ಪೂಜಿಸುವ ಸಂಪ್ರದಾಯವನ್ನು ಧಾನ್ಯಲಕ್ಷ್ಮಿ ಪೂಜೆಯೊಂದಿಗೆ ಆಚರಿಸಿದರು.
ಶನಿವಾರ ಕರಿ ದಿನವಾಗಿ ಆಚರಿಸಲಾಗುತ್ತದೆ. ಭಾನುವಾರ ಹೊಸ ಪೈರಿನ ಬತ್ತದ ಕದಿರುಗಳನ್ನು ತಂದು ಮನೆ ತುಂಬಿಸಿಕೊಂಡು ವಿಶೇಷ ಪೂಜೆ ಸಲ್ಲಿಸಿ ಸಿಹಿ ಅಡುಗೆ ಮಾಡಿ ಉಣ ಬಡಿಸುವುದರೊಂದಿಗೆ ದೀಪಾವಳಿ ಹಬ್ಬಕ್ಕೆ ತೆರೆ ಬೀಳಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.