ADVERTISEMENT

ವಚನಕಾರರದ್ದು ಕಾಯಕ ನಿಷ್ಠೆಯ ಬದುಕು

​ಪ್ರಜಾವಾಣಿ ವಾರ್ತೆ
Published 22 ಮೇ 2017, 5:27 IST
Last Updated 22 ಮೇ 2017, 5:27 IST

ಶಿವಮೊಗ್ಗ: ‘12ನೇ ಶತಮಾನದಲ್ಲಿ ಶರಣರು ವೇಶ್ಯೆಯರಿಗೆ ಹೊಸ ಬದುಕು ನೀಡಿದ ಬಗ್ಗೆ ಇಂದಿನ ಮಡಿವಂತಿಕೆಯ ಮನಸುಗಳು ಮೌನ ವಹಿಸಿವೆ’ ಎಂದು   ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ. ಸಿದ್ದರಾಮಯ್ಯ ವಿಷಾದಿಸಿದರು.

ಅಹರ್ನಿಶಿ ಚಾವಡಿಯಲ್ಲಿ ಶನಿವಾರ ಆಯೋಜಿಸಿದ್ದ ನುಡಿನೋಟ- ಕಾರ್ಯಕ್ರಮದಲ್ಲಿ ಅವರು ‘ವಚನಗಳಲ್ಲಿ ಪರಿಭಾಷೆ’ ಕುರಿತು ಮಾತನಾಡಿದರು. ‘ಪುಣ್ಯಸ್ತ್ರೀ ಎಂಬ ಪ್ರಸ್ತಾವ ವಚನಗಳಲ್ಲಿದೆ. ಆದರೆ, ಎಲ್ಲಾ ಸ್ತ್ರೀಯರನ್ನೂ ಹೀಗೆ ಸಂಬೋಧನೆ ಮಾಡುತ್ತಿರಲಿಲ್ಲ. ಕೆಲವರನ್ನು ಮಾತ್ರ ಪುಣ್ಯಸ್ತ್ರೀ ಎನ್ನಲಾಗುತ್ತಿತ್ತು’ ಎಂದು ಹೇಳಿದರು.

‘ಸಾಂಸಾರಿಕ ಬದುಕಿಗೆ ಪ್ರವೇಶಿಸಿದ್ದವರನ್ನು  ಪುಣ್ಯಸ್ತ್ರೀ ಎಂದಿದ್ದಾರೆ. ಇನ್ನು ಕೆಲವರನ್ನು ಪಣ್ಯಸ್ತ್ರೀ ಎಂದಿದ್ದಾರೆ. ಪಣ ಎಂದರೆ ಹಣ. ಹಣವನ್ನು ಪಡೆಯುವ ಸ್ತ್ರೀ ಎಂದರೆ ವಾರಾಂಗನೆ ಎಂದರ್ಥ’ ಎಂದರು.

ADVERTISEMENT

‘ವಚನಕಾರರು ವೃತ್ತಿ ಧಾರ್ಮಿಕ ವ್ರತಾಚರಣೆ, ವ್ಯಕ್ತಿನಿಷ್ಠೆಯ ಪರಿಭಾಷೆಗಳು ಹೇಗೆ ನೈತಿಕ ಮೌಲ್ಯ ಒಳಗೊಳ್ಳುತ್ತವೆ ಎಂಬುದನ್ನು ತಿಳಿಸಿದ್ದಾರೆ. ಒಂದು ರೀತಿ ಅಧ್ಯಯನ ಯೋಗ್ಯ ಚಳವಳಿಯಲ್ಲಿ ತೊಡಗಿಸಿಕೊಂಡ ವಚನಕಾರರು, ಸತ್ಯ, ಶುದ್ಧ ಕಾಯಕ ನಿಷ್ಠೆಯ ಬದುಕು ಕಟ್ಟಿಕೊಂಡು, ಅದರ ಮೂಲಕ ವಚನ ಸಾಹಿತ್ಯ ಸೃಷ್ಟಿಸಿದ್ದಾರೆ’  ಎಂದು ವಿಶ್ಲೇಷಿಸಿದರು.  ಅಹರ್ನಿಶಿ ಪ್ರಕಾಶನದ ಅಕ್ಷತಾ ಹುಂಚದಕಟ್ಟೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.