ಹೊಸನಗರ: ‘ಕೃಷಿ ಕಾರ್ಮಿಕ ಮಹಿಳೆಯರ ಸ್ವರಚಿತ ನಟ್ಟಿ ಹಾಡು, ಕೊಯ್ಲು ಹಾಡು ಸೇರಿದಂತೆ ಹಳ್ಳಿಯ ಶ್ರಮಿಕ ವರ್ಗದ ಸಾಹಿತ್ಯವನ್ನು ಪುಸ್ತಕ
ರೂಪದಲ್ಲಿ ದಾಖಲಿಸುವ ಕೆಲಸಕ್ಕೆ ಸಾಹಿತ್ಯ ಪರಿಷತ್ತು ಮುಂದಾಗಬೇಕು’ ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯ ಬಿ.ಜಿ.ಚಂದ್ರಮೌಳಿ ಮನವಿ ಮಾಡಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶರಣ ಸಾಹಿತ್ಯ ಪರಿಷತ್ತು ಸಂಯುಕ್ತ ಆಶ್ರಯದಲ್ಲಿ ಸಮೀಪದ ಮುಳುಗುಡ್ಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯ ತಲೆಮಾರಿನವರ ಅನೇಕ ಬಗೆಯ ಹಾಡುಗಳು ಅವರ ಜತೆಯಲ್ಲೇ ಮರೆಯಾಗುತ್ತಿವೆ. ಇವುಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸ ಮಾಡುವಂತೆ ಕೋರಿದರು.
ಕೆ.ಮಹಾಬಲ ಐತಾಳ್ ದತ್ತಿನಿಧಿಯಲ್ಲಿ ‘ಸಾಹಿತ್ಯದಲ್ಲಿ ಮಹಿಳೆಯರ ಪಾತ್ರ’ ಹಾಗೂ ಎಚ್.ಎಂ.ಮರುಳಾರಾಧ್ಯ ದತ್ತಿಯಲ್ಲಿ ‘ಅಲ್ಲಮ ಪ್ರಭುವಿನ ಕಾಯಕ ನಿಷ್ಠೆಯ ಮಹತ್ವ’ ಕುರಿತಂತೆ ಶಿಕ್ಷಕ ಕೆ.ಪಿ.ಶ್ರೀಧರ್ ಉಪನ್ಯಾಸ ನೀಡಿದರು.
ಕೀಳಂಬಿ ಕೆ.ಆರ್.ಸುಬ್ಬರಾವ್ ದತ್ತಿನಿಧಿಯಲ್ಲಿ ಸಾವಯವ ಕೃಷಿ ಮಹತ್ವ ಹಾಗೂ ಭಾಗಸಾಲೆ ಗಡ್ಲಪ್ಪ ಗೌಡ ದತ್ತಿನಿಧಿಯಲ್ಲಿ ಅಕ್ಕಮಹಾದೇವಿ ವಚನ
ಗಳು ಆಧುನಿಕತೆಯ ಜೀವನಕ್ಕೆ ದಾರಿ ಕುರಿತಂತೆ ಜೆ.ಲಿಂಗರಾಜ್ ಉಪನ್ಯಾಸ ನೀಡಿದರು.
ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ವಿ.ರೇವಣಪ್ಪ ಗೌಡ, ಖಜಾಂಚಿ ಮಲ್ಲಿಕಾರ್ಜನಸ್ವಾಮಿ, ಗ್ರಾಮ ಪಂಚಾಯ್ತಿ ಸದಸ್ಯ ಹರೀಶ್ ಕಲ್ಯಾಣಪ್ಪ ಗೌಡ, ಶಾಲೆ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಸತೀಶ್, ಗ್ರಾಮದ ಹಿರಿಯ ಶೀನಪ್ಪ ಹಾಜರಿದ್ದರು.
ಶಿಕ್ಷಕಿ ದಾಕ್ಷಾಯಿಣಿ ಹಾಲಗದ್ದೆ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಗಂಗಾಧರಯ್ಯ ಕಾರ್ಯಕ್ರಮ ನಿರೂಪಿಸಿದರು. ಉಮೇಶ್ ಚೊಟ್ಟಣ್ಣನವರ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.