ADVERTISEMENT

ಅಕ್ರಮ ಮದ್ಯ ಮಾರಾಟ ತಡೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2017, 9:03 IST
Last Updated 3 ಸೆಪ್ಟೆಂಬರ್ 2017, 9:03 IST

ಶಿರಾ: ತಾಲ್ಲೂಕಿನ ಅಗ್ರಹಾರ ಗ್ರಾಮದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಗುರುವಾರ ರಾತ್ರಿ ಅಗ್ರಹಾರ ಗ್ರಾಮದ ಮಹಿಳೆಯರು ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆ ಬಳಿ ಬಂದು ಮನವಿ ಮಾಡಿದರು.

‘ಕೂಲಿ ಮಾಡಿ ಕಷ್ಟ ಪಟ್ಟು ದುಡಿದಂತಹ ಹಣವನ್ನು ಸಂಸಾರ ನಿರ್ವಹಣೆಗೆ ಹೆಂಡತಿ ಮತ್ತು ಮಕ್ಕಳಿಗೆ ನೀಡದೆ ಕುಡಿತಕ್ಕೆ ಖರ್ಚು ಮಾಡುತ್ತಿದ್ದಾರೆ. ಇದರಿಂದಾಗಿ ಬಡವರು ಮತ್ತು ಮಧ್ಯಮ ವರ್ಗದ ಜನರು ಹಾಳಾಗುತ್ತಿದ್ದಾರೆ. ತಕ್ಷಣ ಮದ್ಯ ಮಾರಾಟ ನಿಲ್ಲಿಸುವಂತೆ’ ಸ್ತ್ರೀಶಕ್ತಿ ಸಂಘದ ಸದಸ್ಯರು ಪಟ್ಟನಾಯಕನಹಳ್ಳಿ ಠಾಣೆಯ ಪೊಲೀಸರಿಗೆ ಮನವಿ ಮಾಡಿದರು.

ಸ್ತ್ರೀಶಕ್ತಿ ಸಂಘಗಳ ಪ್ರತಿನಿಧಿ ಪಂಕಜ ಮಾತನಾಡಿ ‘ಅಗ್ರಹಾರ ಗ್ರಾಮದಲ್ಲಿ 5 ಕಡೆ ಚಿಲ್ಲರೆ ಅಂಗಡಿ ಮತ್ತು ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಅಬಕಾರಿ ಅಧಿಕಾರಿಗಳಿಗೆ ದೂರು ನೀಡಿದ ಸಮಯದಲ್ಲಿ ಅಕ್ರಮ ಮಧ್ಯ ಮಾರಾಟ ಕೇಂದ್ರಗಳ ಮೇಲೆ ದಾಳಿ ಮಾಡಿ ಮದ್ಯ ಮಾರಾಟ ನಿಲ್ಲಿಸಿದ್ದರು. ಮೂರ್ಖಣ್ಣಪ್ಪ ಎಂಬುವರ ವಿರುದ್ಧ ಎಫ್‌ಐಅರ್ ಸಹ ದಾಖಲು ಮಾಡಲಾಗಿತ್ತು’ ಎಂದು ತಿಳಿಸಿದರು.

ADVERTISEMENT

‘ಪ್ರತಿಭಟನೆ ಮಾಡಿ ನನ್ನ ವ್ಯವಹಾರ ನಿಲ್ಲಿಸಿದ್ದಾರೆ ಎಂದು ಕುಪಿತವಾಗಿರುವ ಮೂರ್ಖಣಪ್ಪ ನಮ್ಮ ಮಕ್ಕಳಾದ ಮಣಿಕಂಠ ಮತ್ತು ಕಿರಣ್ ಮೇಲೆ ಪೋಲೀಸ್ ಠಾಣೆಗೆ ದೂರು ನೀಡಿ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡುತ್ತೇನೆ ಎಂದು ದಮಕಿ ಹಾಕುತ್ತಿದ್ದಾನೆ. ಈ ಬಗ್ಗೆ ಪೋಲೀಸರು ಸೂಕ್ತ ತನಿಖೆ ನಡೆಸಿ ಮಹಿಳೆಯರು ಮತ್ತು ವಿದ್ಯಾರ್ಥಿಗಳ ಮೇಲೆ ಯಾವುದೇ ಪ್ರಕರಣ ದಾಖಲಿಸದೆ. ಅಗ್ರಹಾರ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಶಾಶ್ವತವಾಗಿ ನಿಲ್ಲಿಸುವಂತೆ’ ಮನವಿ ಮಾಡಿದರು. ಸ್ತ್ರೀಶಕ್ತಿ ಸಂಘದ ಶಾರದಮ್ಮ, ಸಾಕಮ್ಮ, ರೇಣುಕಮ್ಮ, ಲಕ್ಷ್ಮಕ್ಕ, ರಂಗಮ್ಮ, ಕಾಂತಮ್ಮ, ಭಾಗ್ಯಮ್ಮ, ತಿಮ್ಮಪ್ಪ, ಮಣಿಕಂಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.