ಪಾವಗಡ: ತಾಲ್ಲೂಕಿನ ಚಿಕ್ಕ ತಿಮ್ಮನಹಟ್ಟಿ ಸರ್ಕಾರಿ ಪ್ರಾಥಮಿಕ ಪಾಠ ಶಾಲೆ ಅಪಾಯದ ಕೇಂದ್ರ ಸ್ಥಾನವಾಗಿ ಪರಿಣಮಿಸಿದೆ.
ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯಲ್ಲಿ ಮುಖ್ಯ ಶಿಕ್ಷಕರ ಕಚೇರಿ ಸೇರಿದಂತೆ 3 ಕೊಠಡಿಗಳಿವೆ. ಉಳಿದಂತೆ ಎರಡು ಪಾಳು ಬಿದ್ದ ಕೊಠಡಿಗಳಿವೆ. ಎರಡು ಕೊಠಡಿಗಳನ್ನು ಹುತ್ತಗಳು ಆವರಿಸಿಕೊಂಡಿವೆ. ಹಾಳು ಬಿದ್ದ ಕೊಠಡಿಗಳಿಗೆ ಹೊದಿಸಲಾದ ಮರದ ತೀರು, ಹೆಂಚುಗಳು ಮೇಲೆ ಬೀಳುತ್ತವೆ ಎಂಭ ಭಯ ಒಂದೆಡೆಯಾದರೆ, ಹುತ್ತದಲ್ಲಿ ಆಗಾಗ ದರ್ಶನ ಕೊಡುವ ಹಾವುಗಳ ಭೀತಿ ಮತ್ತೊಂದೆಡೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸುತ್ತಿವೆ.
ಶಾಲೆಗೆ 23 ಮಂದಿ ಮಕ್ಕಳು ದಾಖಲಾಗಿದ್ದಾರೆ. ಇಬ್ಬರು ಶಿಕ್ಷಕರಿದ್ದಾರೆ. ಮಕ್ಕಳು, ಕೆಲಸ ಮಾಡುವ ಸಿಬ್ಬಂದಿಯೂ ಸದಾ ಅಪಾಯದ ಅಂಚಿನಲ್ಲಿ ಕಾರ್ಯ ನಿರ್ವಹಿಸಬೇಕಿದೆ.
ಕಳೆದ ಕೆಲ ದಿನಗಳ ಹಿಂದೆ ಹುತ್ತದಿಂದ ಹಾವುಗಳು ಬಂದಿರುವುದನ್ನು ಗ್ರಾಮಸ್ಥರು ಕಂಡು ಹೌಹಾರಿದ್ದಾರೆ. ಎರಡು ಹಾವುಗಳು ನಿರ್ಭೀತಿಯಿಂದ ಶಾಲೆಯ ಆವರಣದಲ್ಲಿ ಅಡ್ಡಾಡುತ್ತಿದ್ದವು, ಹತ್ತಾರು ಮಂದಿ ಗ್ರಾಮಸ್ಥರು ನೋಡಿದ್ದಾರೆ. ಅಂದು ಭಾನುವಾರ ವಾದ್ದರಿಂದ ಮಕ್ಕಳು ಶಾಲೆಗೆ ಬಂದಿರಲಿಲ್ಲ. ಹೀಗಾಗಿ ಯಾವುದೇ ಅವಘಡ ಸಂಭವಿಸಿಲ್ಲ ಎಂದು ಗ್ರಾಮದ ಮುಖಂಡ ಗೋಪಿ ಕೆಲ ದಿನಗಳ ಹಿಂದೆ ನಡೆದಿದ್ದ ಸಂದರ್ಭವನ್ನು ಮೆಲುಕು ಹಾಕಿದರು.
ಇಷ್ಟು ಸಾಲದು ಎಂಬಂತೆ ಈ ಹಿಂದೆ ಶಾಲಾ ಆವರಣಕ್ಕೆ ಬಳಸಿದ್ದ ಕಲ್ಲಿನ ಚಪ್ಪಡಿಗಳನ್ನು ಶಾಲಾ ಕೊಠಡಿ ಗೋಡೆ ಬಳಿ ಶೇಖರಿಸಿಡಲಾಗಿದೆ. ಆವರಣದಲ್ಲಿ ಸ್ವಚ್ಛತೆ ಇಲ್ಲದಿರುವುದರಿಂದ ಹುಳು, ಹುಪ್ಪಟೆಗಳು ಚಪ್ಪಡಿಗಳಡಿ ಸೇರಿಕೊಳ್ಳಲು ಅವಕಾಶವಿದೆ.
ಆವರಣದ ಗೋಡೆ ಸರಿಯಿಲ್ಲದ ಕಾರಣ ಬಿಡಾಡಿ ದನಗಳು ಶಾಲೆಯೊಳಗೆ ನುಗ್ಗುತ್ತವೆ. ಮಳೆ ಬಂದಾಗ ಕೆಲವರು ಶಿಥಿಲವಾಗಿರುವ ಕೊಠಡಿಗಳಲ್ಲಿ ದನಗಳನ್ನು ಕೂಡಿಹಾಕುತ್ತಾರೆ. ಇದರಿಂದ ಶಾಲಾ ಪರಿಸರ ಹಾಳಾಗುತ್ತಿದೆ ಎಂಬುದು ಗ್ರಾಮದ ಕೆಲ ಯುವಕರ ಆರೋಪ.
ಅವಘಡಗಳು ಸಂಭವಿಸುವ ಮುನ್ನ ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳನ್ನು ನೆಲಸಮ ಮಾಡಬೇಕು. ಶಾಲಾ ಆವರಣವನ್ನು ಸರಿಪಡಿಸಿ, ಸ್ವಚ್ಛತೆ ಕಾಪಾಡಬೇಕು ಎಂಬುದು ಗ್ರಾಮಸ್ಥರ ಒತ್ತಾಸೆ.
**
ಅಧಿಕಾರಿಗಳು ಹಾಳು ಬಿದ್ದ ಕೊಠಡಿಗಳನ್ನು ತೆರವುಗೆಳಿಸಿ ಮುಂದಾಗುವ ಅನಾಹುತ ತಪ್ಪಿಸಬೇಕು
ಏಕಾಂತೇಶ್ವರ, ಸಿ.ಟಿ.ಹಟ್ಟಿ.
**
ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳನ್ನು ನೆಲ ಸಮಗೊಳಿಸಲು ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ತಾತ್ಕಾಲಿಕವಾಗಿ ಯಾವುದೇ ಅವಘಡ ನಡೆಯದಂತೆ ಎಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗುವುದು.
ರಂಗನಾಥ್, ಸಮೂಹ ಸಂಪನ್ಮೂಲ ವ್ಯಕ್ತಿ.(ಸಿ.ಆರ್.ಪಿ)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.