ತುಮಕೂರು: ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವಂತೆ ಆಗ್ರಹಿಸಿ ಆಲ್ ಇಂಡಿಯ ಡೆಮಾಕ್ರೆಟಿಕ್ ಸ್ಟೂಡೆಂಟ್ ಆರ್ಗನೈಸೆಷನ್ (ಎಐಡಿಎಸ್ಒ) ಹಾಗೂ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ (ಎಐಎಂಎಸ್ಎಸ್) ಸಂಘಟನೆಗಳ ನೇತೃತ್ವದಲ್ಲಿ ವಿದ್ಯಾರ್ಥಿಗಳು ಶನಿವಾರ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಪ್ರತಿಭಟಿಸಿದರು.
ಎಐಡಿಎಸ್ಒ ಜಿಲ್ಲಾ ಘಟಲದ ಅಧ್ಯಕ್ಷ ಎಸ್.ಕೆ.ಮಾದಪ್ಪ ಮಾತನಾಡಿ, ‘ಈಗಿನ ಸಮ್ಮಿಶ್ರ ಸರ್ಕಾರದ ಭಾಗವಾದ ಕಾಂಗ್ರೆಸ್ ಪಕ್ಷವು, ಹಿಂದಿನ ಆಡಳಿತಾವಧಿಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡುವುದಾಗಿ ಬಜೆಟ್ ನಲ್ಲಿ ಘೋಷಿಸಿತ್ತು’ ಎಂದರು.
19.60 ಲಕ್ಷ ವಿದ್ಯಾರ್ಥಿಗಳ ಉಚಿತ ಬಸ್ಪಾಸ್ ಗೆ ₹ 836.98 ಕೋಟಿ ಅನುದಾನ ಅಗತ್ಯ. ಇದನ್ನು ಈ ಹಿಂದಿನ ರಾಜ್ಯ ಸರ್ಕಾರ ನಿಗದಿಗೊಳಿಸಿತ್ತು. ಆದರೆ ಈ ಮೊತ್ತ ಸಾಕಾಗುವುದಿಲ್ಲ ಎಂದು ಸಾರಿಗೆ ಇಲಾಖೆಯು ಹೆಚ್ಚುವರಿಯಾಗಿ ₹ 629.32 ಕೋಟಿ ನೀಡಲು ಕೋರಿದೆ. ಮೀಸಲಿರಿಸಿರುವ ಹಣವನ್ನು ಬಸ್ಪಾಸ್ಗೆ ಬಳಸಬೇಕು ಎಂದು ಒತ್ತಾಯಿಸಿದರು.
ತುಮಕೂರು ಸಾರಿಗೆ ಇಲಾಖೆಯ ವಿಭಾಗೀಯ ಭದ್ರತಾ ನಿರೀಕ್ಷಕ ಜಿ.ರಘು ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.
ಜಿ.ರಘು ಮಾತನಾಡಿ, ‘ಬೇಡಿಕೆಗಳನ್ನು ಈಡೇರಿಸಲು ಮೇಲಧಿಕಾರಿಗೆ ಮನವಿ ತಲುಪಿಸುತ್ತೇನೆ. ಇದು ರಾಜ್ಯ ಮಟ್ಟದ ವಿಷಯವಾಗಿದ್ದು ಸರ್ಕಾರದ ಆದೇಶಕ್ಕೆ ಬದ್ಧರಾಗಿರುತ್ತೇವೆ’ ಎಂದರು.
ಎಐಎಂಎಸ್ಎಸ್ ಜಿಲ್ಲಾ ಸಂಘಟಕಿ ಎಂ.ವಿ ಕಲ್ಯಾಣಿ ಮಾತನಾಡಿದರು. ಜಿಲ್ಲಾ ಸಂಘಟಕರಾದ ಮಂಜುಳಾ ಗೋನವಾರ, ರತ್ಮಮ್ಮ, ಅಶ್ವಿನಿ ಕಾಲೇಜು ವಿದ್ಯಾರ್ಥಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.