ADVERTISEMENT

ಕಾರು ಅಡ್ಡಗಟ್ಟಿ ₹ 13 ಲಕ್ಷ ದರೋಡೆ

ಕುಣಿಗಲ್ ಪಟ್ಟಣದ ಹಳೇ ರಾಷ್ಟ್ರೀಯ ಹೆದ್ದಾರಿ 48ರ ಬಳಿಯ ಗೋಕುಲ ಡೇರಿ ಹತ್ತಿರ ದುಷ್ಕರ್ಮಿಗಳ ಕೃತ್ಯ

​ಪ್ರಜಾವಾಣಿ ವಾರ್ತೆ
Published 11 ಜೂನ್ 2018, 5:34 IST
Last Updated 11 ಜೂನ್ 2018, 5:34 IST

ಕುಣಿಗಲ್: ಪಟ್ಟಣದ ಹೊರವಲಯದ ಬಿದನಗೆರೆ ಸತ್ಯ ಶನೇಶ್ವರಸ್ವಾಮಿ ದೇವಾಲಯದ ಧರ್ಮದರ್ಶಿ ಧನಂಜಯಸ್ವಾಮಿ ಅವರ ಕಾರು ಅಡ್ಡಗಟ್ಟಿ ₹ 13 ಲಕ್ಷ ನಗದನ್ನು ಶನಿವಾರ ರಾತ್ರಿ ದುಷ್ಕರ್ಮಿಗಳು ದರೋಡೆ ಮಾಡಿದ್ದಾರೆ.

ಪಟ್ಟಣದ ಹಳೇ ರಾಷ್ಟ್ರೀಯ ಹೆದ್ದಾರಿ 48ರ ಬಳಿಯ ಗೋಕುಲ ಡೇರಿ ಹತ್ತಿರ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ರಾತ್ರಿ 11ರವೇಳೆಗೆ ದೇವಾಲಯದಲ್ಲಿ ಪೂಜೆ ಮುಗಿದ ಬಳಿಕ ಧನಂಜಯಸ್ವಾಮಿ ಅವರು ದೇವಾಲಯ ಸಮೀಪದ ಅಂಗಡಿಯ ನಯಾಜ್ ಪಾಷಾ ಅವರ ಜತೆ ಕಾರಿನಲ್ಲಿ ತೆರಳುತ್ತಿದ್ದರು.

‘ಹೊಸ ಕಾರು ಪೂಜೆ ಮಾಡಿಸುವ ನೆಪದಲ್ಲಿ ದುಷ್ಕರ್ಮಿಗಳು ಕಾರು ತಡೆದಿದ್ದಾರೆ. ಧನಂಜಯಸ್ವಾಮಿ ಅವರ ಮುಖಕ್ಕೆ ಪೆಪ್ಪರೇ ಸ್ಪ್ರೇ ಮಾಡಿದ್ದಾರೆ. ಜತೆಗಿದ್ದ ಕಾರು ಚಾಲಕ ಶ್ರೀಧರ್ ಮತ್ತು ನಯಾಜ್ ಅವರಿಗೆ ಮಾರಕಾಸ್ತ್ರಗಳಿಂದ ಬೆದರಿಸಿ ₹ 13 ಲಕ್ಷ ಮತ್ತು ಕಾರಿನೊಂದಿಗೆ ಪರಾರಿಯಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಘಟನೆ ಬಳಿಕ ಧನಂಜಯಸ್ವಾಮಿ ಅವರು ದೇವಾಲಯದ ಹತ್ತಿರ ಬಂದು ಭಕ್ತರ ಸಹಕಾರದೊಂದಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದರು. ಬಳಿಕ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮರಳಿದ್ದಾರೆ. ಬೆಳ್ಳೂರು ಕ್ರಾಸ್ ಬಳಿ ಧನಂಜಯ ಸ್ವಾಮಿ ಅವರ ಕಾರು ಪತ್ತೆಯಾಗಿದ್ದು. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಧಿಕಾರಿಗಳ ಭೇಟಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್ ಡಿವೈಎಸ್‌ಪಿ ವೆಂಕಟೇಶ್, ಸಿಪಿಐ ಅಶೋಕ್‌ ಕುಮಾರ್ ಸ್ಥಳಕ್ಕೆ  ಪರಿಶೀಲಿಸಿದರು.

ಬೆಚ್ಚಿ ಬಿದ್ದ ಜನ

ಪಟ್ಟಣದ ಹೊರವಲಯದಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಮೂರು ದರೋಡೆ ಪ್ರಕರಣಗಳು ನಡೆದಿರುವುದು ಪಟ್ಟಣದ ಜನರನ್ನು ಬೆಚ್ಚಿ ಬೀಳಿಸಿದೆ. ಕಳೆದ ತಿಂಗಳಷ್ಟೇ ಪೆಟ್ರೋಲ್ ಬಂಕ್ ದರೋಡೆ ನಡೆದಿತ್ತು. ಕಳೆದ ವಾರ ಕಾಮತ್ ಹೋಟೆಲ್ ಶೌಚಾಲಯ ಕಿಟಕಿಯನ್ನು ದುಷ್ಕರ್ಮಿಗಳು ಸ್ಪೋಟಿಸಿದ್ದರು.

ಈಗ ಧನಂಜಯಸ್ವಾಮಿ ಅವರ ಕಾರು ಅಡ್ಡಗಟ್ಟಿ ದರೋಡೆ ಪ್ರಕರಣ ನಡೆದಿದೆ. ಇಂತಹ ಕೃತ್ಯಗಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ಪೊಲೀಸರು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರವರ್ಧಮಾನಕ್ಕೆ ಬಂದ ದೇವಾಲಯ

ಬಿದನಗೆರೆ ಸತ್ಯ ಶನೇಶ್ವರ ಸ್ವಾಮಿ ದೇವಾಲಯ ಈಚೆಗೆ ಪ್ರವರ್ಧಮಾನಕ್ಕೆ ಬರುತ್ತಿದೆ. ಪ್ರತಿ ಶನಿವಾರ, ಭಾನುವಾರ ಮತ್ತು ಸೋಮವಾರ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಇಲ್ಲಿಗೆ ಬರುತ್ತಾರೆ. ಇದರಿಂದ ದೇವಾಲಯದ ಆದಾಯ ಏರಿಕೆಯಾಗುತ್ತಿದೆ. 150 ಅಡಿ ಎತ್ತರದ ಪಂಚಮುಖಿ ಆಂಜನೇಯ ವಿಗ್ರಹ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.

ಪುಸಲಾಯಿಸಿದ ದುಷ್ಕರ್ಮಿಗಳು

ತಾವು ಹೊಸ ಕಾರು ಖರೀದಿಸಿದ್ದು, ನಿಮ್ಮಿಂದಲೇ ಕಾರು ಪೂಜೆಯಾಗಬೇಕು. ದಯವಿಟ್ಟು ಪೂಜೆ ಮಾಡಬೇಕು ಎಂದು ದುಷ್ಕರ್ಮಿಗಳು ಮನವಿ ಮಾಡಿದ್ದಾರೆ. ಧನಂಜಯ ಸ್ವಾಮಿ ಇದಕ್ಕೆ ನಿರಾಕರಿಸಿದಾಗ ಸ್ವಾಮೀಜಿಗೆ ಪುಸಲಾಯಿಸಿದ್ದಾರೆ. ಕೊನೆಗೆ ಕಾರು ಇಳಿಯುತ್ತಿದ್ದಂತೆಯೇ ಬೆದರಿಸಿದ್ದಾರೆ.

ಪ್ರವರ್ಧಮಾನಕ್ಕೆ ಬಂದ ದೇವಾಲಯ

ಬಿದನಗೆರೆ ಸತ್ಯ ಶನೇಶ್ವರ ಸ್ವಾಮಿ ದೇವಾಲಯ ಈಚೆಗೆ ಪ್ರವರ್ಧಮಾನಕ್ಕೆ ಬರುತ್ತಿದೆ. ಪ್ರತಿ ಶನಿವಾರ, ಭಾನುವಾರ ಮತ್ತು ಸೋಮವಾರ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಇಲ್ಲಿಗೆ ಬರುತ್ತಾರೆ. ಇದರಿಂದ ದೇವಾಲಯದ ಆದಾಯ ಏರಿಕೆಯಾಗುತ್ತಿದೆ. 150 ಅಡಿ ಎತ್ತರದ ಪಂಚಮುಖಿ ಆಂಜನೇಯ ವಿಗ್ರಹ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.