ADVERTISEMENT

ಖುರ್ಚಿಗಳು ಖಾಲಿ, ಖಾಲಿ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2017, 8:48 IST
Last Updated 24 ನವೆಂಬರ್ 2017, 8:48 IST
ಪ್ರಗತಿ ಪರಿಶೀಲನಾ ಸಭೆಯಲ್ಲಿ ಖಾಲಿ ಖಾಲಿಯಾಗಿದ್ದ ಖುರ್ಚಿಗಳು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಹೊನ್ನಮ್ಮ, ಉಪಾಧ್ಯಕ್ಷ ಆಲದಕಟ್ಟೆ ತಿಮ್ಮಯ್ಯ, ಚೇತನ ಗಂಗಾಧರ್, ಪ್ರಸನ್ನಕುಮಾರ್, ಕಲ್ಯಾಣಿಬಾಯಿ ಇದ್ದರು
ಪ್ರಗತಿ ಪರಿಶೀಲನಾ ಸಭೆಯಲ್ಲಿ ಖಾಲಿ ಖಾಲಿಯಾಗಿದ್ದ ಖುರ್ಚಿಗಳು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಹೊನ್ನಮ್ಮ, ಉಪಾಧ್ಯಕ್ಷ ಆಲದಕಟ್ಟೆ ತಿಮ್ಮಯ್ಯ, ಚೇತನ ಗಂಗಾಧರ್, ಪ್ರಸನ್ನಕುಮಾರ್, ಕಲ್ಯಾಣಿಬಾಯಿ ಇದ್ದರು   

ಚಿಕ್ಕನಾಯಕನಹಳ್ಳಿ: ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಕರೆಯಲಾಗಿದ್ದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಗೆ ತಾಲ್ಲೂಕು ಪಂಚಾಯ್ತಿ ಸದಸ್ಯರ ಗೈರುಹಾಜರಿ ಎದ್ದು ಕಾಣಿಸಿತು.

ಸಭೆಗೆ ಕೇವಲ 8 ಸದಸ್ಯರು ಮಾತ್ರ ಹಾಜರಾಗಿದ್ದರು. ಅದರಲ್ಲೂ ವಿರೋಧ ಪಕ್ಷ ಬಿಜೆಪಿ ಸದಸ್ಯೆ ಇಂದಿರಾಕುಮಾರಿ, ಮಧು ಮಾತ್ರ ಸಭೆಗೆ ಹಾಜರಾಗಿದ್ದರು. ಅಧ್ಯಕ್ಷೆ ಹೊನ್ನಮ್ಮ, ಉಪಾಧ್ಯಕ್ಷ ಆಲದಕಟ್ಟೆ ತಿಮ್ಮಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಹುಳಿಯಾರ್‌ ಕುಮಾರ್‌, ಸದಸ್ಯೆ ಚೇತನಗಂಗಾಧರ್, ಪ್ರಸನ್ನಕುಮಾರ್, ಕಲ್ಯಾಣಿಬಾಯಿ ಹಾಜರಿದ್ದರು.

ತಾಲ್ಲೂಕಿನ ಗ್ರಾಮ ಪಂಚಾಯ್ತಿಗಳಲ್ಲಿ ನಡೆಯುವ ಅಭಿವೃದ್ದಿ ಹಾಗೂ ಸಮಸ್ಯೆಗಳ ಬಗ್ಗೆ ನಡೆಯುವ ಪ್ರಗತಿ ಸಭೆಗೆ ಸದಸ್ಯರೇ ಹಾಜರಾಗದಿದ್ದರೆ ಪಂಚಾಯ್ತಿಗಳಲ್ಲಿ ಏನು ನಡೆಯುತ್ತದೆ? ಅಭಿವೃದ್ದಿ ಏನಾಗಿದೆ? ಎಂದು ತಿಳಿದುಕೊಳ್ಳುವುದು ಹೇಗೆ?, ಹಾಗೂ ಪಂಚಾಯ್ತಿ ಮಟ್ಟದ ಅಧಿಕಾರಿಗಳನ್ನು ಪ್ರಶ್ನಿಸುವ ನೈತಿಕತೆ ಜನಪ್ರತಿನಿಧಿಗಳಿಗೆ ಎಲ್ಲಿ ಇರುತ್ತದೆ ಎಂಬುದು ಸಾರ್ವಜನಿಕರ ಪ್ರಶ್ನೆ.

ADVERTISEMENT

ತಾಲ್ಲೂಕಿನ ಗ್ರಾಮಗಳ ಅಭಿವೃದ್ದಿ ಬಗ್ಗೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಹೊನ್ನಮ್ಮಶೇಷಯ್ಯರವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬೆಳಗ್ಗೆ 10ಗಂಟೆಗೆ ಸಭೆ ಕರೆಯಲಾಗಿತ್ತು ಆದರೆ ಸಭೆಯು ಸಹ ನಿಗಧಿತ ವೇಳೆಗೆ ನಡೆಯದೆ ಮಧ್ಯಾಹ್ನ 12ಗಂಟೆಗೆ ಆರಂಭವಾಯಿತು. ಕೆಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಭೆಗೆ ಹಾಜರಾಗಿರಲಿಲ್ಲ.

ಉಪಾಧ್ಯಕ್ಷ ಆಲದಕಟ್ಟೆ ತಿಮ್ಮಯ್ಯ ಮಾತನಾಡಿ, ತಾಲ್ಲೂಕಿನ 28 ಪಂಚಾಯಿತಿಗಳ ಭಿವೃದ್ಧಿ ಅಧಿಕಾರಿಗಳೂ ತಮ್ಮ ಪಂಚಾಯಿತಿಯ ಕಾರ್ಯಗಳ ಪೂರ್ಣ ಮಾಹಿತಿ ಸಲ್ಲಿಸಬೇಕು. ಪಂಚಾಯಿತಿ ವ್ಯಾಪ್ತಿಯಲ್ಲಿರುವ ನಿವೇಶನ ರಹಿತ, ವಸತಿ ರಹಿತರಪಟ್ಟಿ, ಸರ್ಕಾರಿ ಜಾಗ ಗುರುತಿಸಿ ನಿವೇಶನ ಕಲ್ಪಿಸಲು ತಯಾರಿ ಮಾಡಿಕೊಂಡಿರುವ ವರದಿ ನೀಡಬೇಕು ಎಂದರು.

ನಮ್ಮ ಗ್ರಾಮ, ನಮ್ಮ ರಸ್ತೆ ಯೋಜನೆಯಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಹಾಗೂ ಸಕರ್ಾರದಿಂದ ಬಂದಿರುವಂತಹ ಯೋಜನೆಗಳಾದ, ಶೌಚಾಲಯ, ಎನ್.ಆರ್.ಇ.ಜಿ ಯೋಜನೆಯ ಕಾಮಗಾರಿಗಳಲ್ಲಿ ಫಲಾನುಭವಿಗಳ ಪರಿಶೀಲನಾ ಪಟ್ಟಿಯನ್ನು ಸಿದ್ಧಪಡಿಸಿ ಮುಂದಿನ ಸಭೆಯಲ್ಲಿ ಎಲ್ಲಾ ದಾಖಲೆಗಳನ್ನು ಸಭೆ ಮುಂದೆ ಇಡಬೇಕಾಗುತ್ತದೆ ಎಂದು ಎಚ್ಚರಿಸಿದರು ಹಾಗೂ ಸದಸ್ಯರಿಗೆ ಮಾಹಿತಿ ನೀಡಿ ಸಭೆಗೆ ಬರುವಂತೆ ನೋಡಿಕೊಳ್ಳಿ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣನಾಯ್ಕ ಅವರಿಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.