ತುಮಕೂರು: ತುಮಕೂರು ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶ್ಗೌಡ ವಿರುದ್ಧ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಚನ್ನಿಗಪ್ಪ ಅವಾಚ್ಯವಾಗಿ ನಿಂದಿಸಿ ವಾಗ್ದಾಳಿ ನಡೆಸಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎಂದು ಈಚೆಗೆ ಮಾಜಿ ಶಾಸಕ ಸುರೇಶ್ ಗೌಡ ಅವರ ಆರೋಪದ ಬಗ್ಗೆ ಹರಿಹಾಯ್ದಿದ್ದಾರೆ.
‘ಸುರೇಶ್ಗೌಡ ಏನು ಬೇಕಾದರೂ ಹೇಳುತ್ತಾನೆ. ನಾವು ಯಾವುದೇ ಪ್ರಕರಣವನ್ನು ಬಿಜೆಪಿ ಕಾರ್ಯಕರ್ತರ ವಿರುದ್ಧ ದಾಖಲಿಸಿಲ್ಲ. ಬದಲಾಗಿ
ಆತನೇ ಶಾಸಕನಾಗಿದ್ದಾಗ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾನೆ. ಜನರಿಂದ ಲಂಚ ಪಡೆದಿದ್ದಾನೆ. ಆತ ಸೋತಿದ್ದು, ಸುಮ್ಮನೆ ಇರಬೇಕು. ಸರ್ಕಾರಿ ಜೂನಿಯರ್ ಕಾಲೇಜು ಮೈದಾನಕ್ಕೆ ಬರಲಿ. 50 ಸಾವಿರ ಜನರನ್ನು ಸೇರಿಸುತ್ತೇನೆ. ಆತನೂ ಮಾತನಾಡಲಿ. ನಾನೂ ಮಾತನಾಡುತ್ತೇನೆ’ ಎಂದು ಬಹಿರಂಗ ಸವಾಲು ಹಾಕಿರುವ ವಿಡಿಯೊ ಹರಿದಾಡುತ್ತಿದೆ.
ಬಾಯಿ ಹೊಲಸು ಮಾಡಿಕೊಳ್ಳುವುದಿಲ್ಲ:
ಚನ್ನಿಗಪ್ಪ ಅವರು ಉದುರಿಸಿರುವ ನುಡಿಮುತ್ತುಗಳು ಕ್ಷೇತ್ರದ ಮತದಾರರನ್ನು ಅಣಕಿಸುವಂತೆ ಇದೆ ಎಂದು ಮಾಜಿ ಶಾಸಕ ಬಿ.ಸುರೇಶ್ಗೌಡ ತಿರುಗೇಟು ನೀಡಿದ್ದಾರೆ.
ಕ್ಷೇತ್ರದ ಜನರು ಮತ ನೀಡಿದ್ದಾರೆ. ಅವರ ಕೆಲಸ ಮಾಡಿ ಋಣ ತೀರಿಸುವುದು ಬಿಟ್ಟು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುವುದು, ನನ್ನ ತಂದೆ ತಾಯಿಯ ಬಗ್ಗೆ ಹಾಗೂ ವೈಯಕ್ತಿಕವಾಗಿ ಸಲ್ಲದ ಆರೋಪ ಮಾಡಿ ತೇಜೋವಧೆ ಮಾಡಲು ಹೊರಟಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.
‘ಚನ್ನಿಗಪ್ಪ ಏನು ಎಂಬುದು ರಾಜ್ಯದ ಜನರಿಗೇ ಗೊತ್ತಿದೆ. ಚುನಾವಣೆ ಬಳಿಕ ಒಂದೇ ವಾರದಲ್ಲಿ ಅಪ್ಪ ಮಕ್ಕಳ ಆರ್ಭಟ ಏನು ಎಂಬುದನ್ನು ಕ್ಷೇತ್ರದ ಜನರಿಗೆ ಗೊತ್ತಾಗುತ್ತಿದೆ. ಜನಪ್ರತಿನಿಧಿ ಆಗಿರುವವರು ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗುವ ಮನೋಭಾವ ಹೊಂದಿರಬೇಕು. ಆದರೆ, ಇವರಿಗೆ ಮನೋಭಾವ ಇಲ್ಲ. ಇಂತಹವರ ಬಗ್ಗೆ ಮಾತನಾಡಿ ಬಾಯಿ ಹೊಲಸು ಮಾಡಿಕೊಳ್ಳುವುದಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ. ‘ನನ್ನ ತಂದೆ ತಾಯಿ ಇಬ್ಬರೂ ಇಲ್ಲ. ಅವರ ಬಗ್ಗೆ ಮಾತನಾಡಿರುವ ಚನ್ನಿಗಪ್ಪ ಅವರಿಗೆ ದೇವರು ಒಳ್ಳೆಯದು ಮಾಡಲಿ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.