ADVERTISEMENT

ಜನ ಸಾಮಾನ್ಯರಿಗೆ ತಲುಪದ ಯೋಜನೆ

ಗಂಗಾ ಕುಡಿಯುವ ನೀರು ಯೋಜನೆ ಉದ್ಘಾಟನಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 8 ಮೇ 2017, 6:43 IST
Last Updated 8 ಮೇ 2017, 6:43 IST
ಪಾವಗಡ: ‘ಸಣ್ಣ–ಪುಟ್ಟ ಲೋಪದೋಷಗಳಿಂದಾಗಿ ಸರ್ಕಾರದ ಯೋಜನೆಗಳು ಸಾಮಾನ್ಯ ಜನರಿಗೆ ತಲುಪುತ್ತಿಲ್ಲ’ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥಶೆಟ್ಟಿ ತಿಳಿಸಿದರು.
 
ಪಟ್ಟಣದ ಸ್ವಾಮಿ ವಿವೇಕಾನಂದ ಸಂಘಟಿತ ಆರೋಗ್ಯ ಕೇಂದ್ರದಲ್ಲಿ ಶನಿವಾರ ನಡೆದ ಪಾವನ ಗಂಗಾ ಕುಡಿಯುವ ನೀರಿನ ಯೋಜನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
 
‘ಸರ್ಕಾರದ ಮಹತ್ತರ ಯೋಜನೆಗಳು ವಿಫಲವಾಗಲು ಕೆಲ ನ್ಯೂನತೆಗಳು ಕಾರಣ. ಅಂತಹ ಲೋಪಗಳನ್ನು ಸರಿಪಡಿಸುವುದು ಲೋಕಾಯುಕ್ತ ಅಧಿಕಾರಿಗಳ ಜವಾಬ್ದಾರಿ’ ಎಂದರು.
 
ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದಜಿ ಮಾತನಾಡಿ, ‘ಪಕ್ಕದ ಆಂಧ್ರಕ್ಕೆ ಸೇರಿದ ಗ್ರಾಮಗಳಿಗೆ ಕೃಷಿಗಾಗಿ ಕೃಷ್ಣ, ತುಂಗಭದ್ರಾ ನೀರು ಹರಿಸಲಾಗುತ್ತಿದೆ. ಆದರೆ ತಾಲ್ಲೂಕಿನ ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ.
 
ಬಿಸಿಲಿನ ತಾಪ, ಮೇವಿನ ಅಭಾವ, ಕುಡಿಯುವ ನೀರಿನ ತತ್ವಾರದಿಂದ ತಾಲ್ಲೂಕಿನ ಜನರು  ಸತ್ತು ಬದುಕುತ್ತಿದ್ದಾರೆ. ಇಷ್ಟಾದರೂ ಸರ್ಕಾರ ತಾಲ್ಲೂಕನ್ನು ನಿರ್ಲಕ್ಷಿಸುತ್ತಿದೆ’ ಎಂದರು.
 
ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ, ‘ಕಳೆದ ವರ್ಷ ಮಳೆ ಕೈಕೊಟ್ಟ ಕಾರಣ ನೀರಿನ ಸಮಸ್ಯೆ ತೀವ್ರಗೊಂಡಿದೆ. ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಕೊಳವೆ ಬಾವಿಗಳು ಬತ್ತಿವೆ. ಬರವನ್ನು ಎದುರಿಸುವ ಸಲುವಾಗಿ ಸಾಕಷ್ಟು ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಳಾಗಿದೆ.
 
4 ಗೋಶಾಲೆಗಳನ್ನು ಆರಂಭಿಸಿದ್ದು, ಕೆ.ಟಿ.ಹಳ್ಳಿ, ವದನಕಲ್ಲು ಗ್ರಾಮಗಳಲ್ಲಿ ಮೇವು ವಿತರಣಾ ಕೇಂದ್ರ ಸ್ಥಾಪಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ’ ಎಂದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಂ. ಲತಾ ರವಿಕುಮಾರ್, ಪುರಸಭೆ ಅಧ್ಯಕ್ಷೆ ಸುಮಾ ಅನಿಲ್ ಮಾತನಾಡಿದರು.
 
ತಹಶೀಲ್ದಾರ್ ಟಿ.ಕೆ.ತಿಪ್ಪೂರಾವ್, ಐ.ಎಂ.ಎ ಅಧ್ಯಕ್ಷ ಡಾ. ವೆಂಕಟರಾಮಯ್ಯ, ಪುರಸಭೆ ಮುಖ್ಯಾಧಿಕಾರಿ ಮಾರುತಿಶಂಕರ್, ಸದಸ್ಯ ಸುದೇಶ್ ಬಾಬು, ಮನು, ನಾಗೇಂದ್ರ, ಡಾ.ವೆಂಕಟಶೇಷು, ರೈತ ಮುಖಂಡ ನರಸಿಂಹರೆಡ್ಡಿ, ನಾಗಭೂಷಣರೆಡ್ಡಿ, ನಾರಾಯಣಪ್ಪ, ವಕೀಲ ನಾಗೆಂದ್ರಪ್ಪ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.