ADVERTISEMENT

ಜಿ.ಪಂ ಸದಸ್ಯರಿಗೆ ನೀಡುವ ಅನುದಾನ ಭಿಕ್ಷೆಯೇ?

​ಪ್ರಜಾವಾಣಿ ವಾರ್ತೆ
Published 28 ಮೇ 2017, 5:54 IST
Last Updated 28 ಮೇ 2017, 5:54 IST

ಗುಬ್ಬಿ: ‘ಜಿಲ್ಲಾ ಪಂಚಾಯಿತಿ ಅನುದಾನದ ಅಲಭ್ಯತೆಯಿಂದ ಸಾರ್ವಜನಿಕರ ಭರವಸೆಯನ್ನು ಈಡೇರಿಸಲಾಗುತ್ತಿಲ್ಲ. ಆದ್ದರಿಂದ ಸ್ವಂತ ಖರ್ಚಿನಲ್ಲಿ ಕಡಬ ಜಿಲ್ಲಾ ಪಂಚಾಯಿತಿ ಕ್ಷೇತ್ರದ 20ಹಳ್ಳಿಗಳಲ್ಲಿ ಹೈಮಾಸ್ಟ್‌ ದೀಪಗಳನ್ನು ಅಳವಡಿಸಲಾಗುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಟಿ.ಕೃಷ್ಣಪ್ಪ ತಿಳಿಸಿದರು.

ಪಟ್ಟಣದಲ್ಲಿ ಈಚೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘₹ 20 ಲಕ್ಷ ವೆಚ್ಚದಲ್ಲಿ ಮೊದಲ ಹಂತದಲ್ಲಿ ಕಡೇಕೋಡಿ, ಕೊಪ, ಬ್ಯಾಡಿಗೆರೆ, ಯಲಚಿಹಳ್ಳಿ, ದೊಡ್ಡಕುನ್ನಾಲ, ಚಿಕ್ಕಕುನ್ನಾಲ, ಲಿಂಗಮ್ಮನಹಳ್ಳಿ, ದಾದುಬಾಯ್ ಪಾಳ್ಯ, ಕೋಣೆ ಮಾದೇಹಳ್ಳಿಯಲ್ಲಿ ಹೈಮಾಸ್ಟ್‌ ದೀಪಗಳನ್ನು ಹಾಕಿಸಲಾಗುವುದು’ ಎಂದು ಹೇಳಿದರು.

‘ಎರಡನೇ ಹಂತದಲ್ಲಿ ಕುಣಾಘಟ್ಟ, ಬೋಚಿಹಳ್ಳಿ, ವರಹಸಂದ್ರ, ಪೆದ್ದನಹಳ್ಳಿ, ಮೆಳೇಕಲ್ಲಹಳ್ಳಿ, ಮಂಚಿಹಳ್ಳಿ, ಗಂಗಸಂದ್ರ, ಬ್ಯಾಲಹಳ್ಳಿ, ಇಸ್ಲಾಂನಗರ, , ಕೋಣನಕೆರೆಯಲ್ಲಿ ಅಳವಡಿಸಲು ತೀರ್ಮಾನಿಸಲಾಗಿದ್ದು, ಸ್ಥಳೀಯರು ಸಹಕರಿಸಬೇಕು’ ಎಂದರು.

ADVERTISEMENT

‘ಕಡಬ ಗ್ರಾಮದ ಉದ್ಯಾನದ ಜಾಗದ ವಿವಾದ ಜಿಲ್ಲಾ ಪಂಚಾಯಿತಿಯಲ್ಲಿದ್ದು, ತೀರ್ಮಾನವಾದ ನಂತರ ಕಾಮಗಾರಿ ಪ್ರಾರಂಭಿಸಲಾಗುವುದು. ಕಡಬ ಗ್ರಾಮದಲ್ಲಿ ನೆಟ್ಟಿದ್ದ ಸಸಿಗಳನ್ನು ಯಾರೋ ಕುತಂತ್ರಿಗಳು ಬೇರು ಸಮೇತ ಕಿತ್ತು ಹಾಕಿದ್ದಾರೆ’ ಎಂದು ಆರೋಪಿಸಿದರು. 

‘ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸದಸ್ಯರು ₹ 10 ಲಕ್ಷ ಅನುದಾನ ಪಡೆಯುತ್ತಿದ್ದು, ಆದರೆ ನನ್ನ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಅಭಿವೃದ್ಧಿಗೆ ₹ 5 ಲಕ್ಷ ನೀಡಿದ್ದಾರೆ. ಇದು ಭಿಕ್ಷೆ ಕೊಟ್ಟಂತಾಗಿದೆ. ಇದರಿಂದ ನಮ್ಮ  ಕ್ಷೇತ್ರದ ಅಭಿವೃದ್ಧಿ ಮಾಡುವುದು ಹೇಗೆ? ಎಂದು ಪ್ರಶ್ನಿಸಿದರು.

ಉಚಿತ ಆರೋಗ್ಯ ಶಿಬಿರ
ಗುಬ್ಬಿ ತಾಲ್ಲೂಕು ಚೇಳೂರು ಹೋಬಳಿ ಬಿದರೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಮೇ 31ರಂದು ಉಚಿತ ಆರೋಗ್ಯ ಶಿಬಿರ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಣ್ಣಿನ ಪರೀಕ್ಷೆ ನಡೆಸಿ, ಅವಶ್ಯಕತೆ ಇದ್ದವರಿಗೆ ಉಚಿತ ಚಿಕಿತ್ಸೆ ಹಾಗೂ. ಕನ್ನಡಕಗಳನ್ನು ವಿತರಿಸಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಟಿ.ಕೃಷ್ಣಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.