ಮಧುಗಿರಿ: ಜೀತ ವಿಮುಕ್ತರಿಗೆ ಸಮಗ್ರ ಪುನರ್ವವಸತಿ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ಜೀವಿಕ ಸಂಘಟನೆ ಪದಾಧಿಕಾರಿಗಳು ಪವಿಭಾಗಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ 2011-12 ರ ಸಾಲಿನಲ್ಲಿ ಬಿಡುಗಡೆಗೊಂಡಿರುವ 916 ಮಂದಿ ಜೀತ ವಿಮುಕ್ತರಲ್ಲಿ 190 ಜನರಿಗೆ ಸಮಗ್ರ ಪುನರ್ವವಸತಿ ಕಲ್ಪಿಸಬೇಕು, ಜೀತ ವಿಮುಕ್ತರ ಮಕ್ಕಳಿಗೆ ವಿಶೇಷ ಶಾಲೆಗಳನ್ನು ತೆರೆದು ವಿದ್ಯಾಭ್ಯಾಸ ನೀಡಬೇಕು, ಜೀತ ವಿಮುಕ್ತಗಾಗಿ ಶ್ರಮಿಸುತ್ತಿರುವ ಜೀವಿಕ ಸಂಘಟನೆಗೆ ಪುರಸಭೆ ವ್ಯಾಪ್ತಿಯಲ್ಲಿ ನಿವೇಶನ ನೀಡಬೇಕು, ಅಂಬೇಡ್ಕರ್ ಅಭಿವೃದ್ಧಿ ಹಾಗೂ ದೇವರಾಜು ಅರಸು ನಿಗಮಗಳಿಂದ ಜೀತ ವಿಮುಕ್ತರಿಗೆ ಹೈನುಗಾರಿಕೆಗೆ ವಿಶೇಷ ಪ್ಯಾಕೇಜ್ ಮೂಲಕ ಸಹಾಯಧನ ನೀಡಬೇಕು.
ರಾಜ್ಯದ ಮಟ್ಟದ ಜೀತ ಪದ್ಧತಿ ಪರಿಶೀಲನಾ ಸಮಿತಿಯ 22 ಶಿಫಾರಸುಗಳನ್ನು ಜಾರಿಗೊಳಿಸಬೇಕು, ತಾಲ್ಲೂಕಿನ ಜೀತ ವಿಮುಕ್ತರಿಗೆ ಬಗರ್ ಹುಕ್ಕುಂ ಕಮಿಟಿಯಲ್ಲಿ ತಲಾ 5 ಎಕರೆ ಜಮೀನು ಮಂಜೂರು ಮಾಡಬೇಕು ಹಾಗೂ ರಂಟವಳಲು ಗ್ರಾಮದ ಗಡಿಯಲ್ಲಿ ಸೀಮಾಂಧ್ರದವರು ಅಕ್ರಮವಾಗಿ ಹೊಂದಿರುವ ಸರ್ಕಾರ ಜಮೀನನ್ನು ಕೂಡಲೇ ಜೀತ ವಿಮುಕ್ತರಿಗೆ ಹಂಚಬೇಕು, ಗುಬ್ಬಿ ತಾಲ್ಲೂಕಿನಲ್ಲಿ ಹಲ್ಲೆಗೊಳಗಾಗಿರುವ ದಲಿತ ಯುವಕ ಅಭಿಷೇಕ್ ಅವರಿಗೆ ಕೂಡಲೇ ಸೂಕ್ತ ರಕ್ಷಣೆ ಮತ್ತು ಆರ್ಥಿಕ ಭದ್ರತೆ ಒದಗಿಸಬೇಕು ಹಾಗೂ ತಪ್ಪತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜೀವಿಕ ಸಂಘಟನೆ ಪದಾಧಿಕಾರಿಗಳು ಆಗ್ರಹಿಸಿದರು.
ತಾಲ್ಲೂಕು ಜೀವಿಕ ಸಂಘಟನೆಯ ಅಧ್ಯಕ್ಷ ಗಂಗಾಧರಪ್ಪ, ಕಾರ್ಯದರ್ಶಿ ಎನ್. ಮುನೇಂದ್ರ, ಸಂಚಾಲಕ ಎನ್. ಮಂಜುನಾಥ, ಮಹಿಳಾ ಸಂಚಾಲಕಿ ಚಿಕ್ಕಮ್ಮ, ಪದಾಧಿಕಾರಿಗಳಾದ ಹನುಮಂತರಾಯಪ್ಪ, ದೊಡ್ಡೇರಿ ರಾಮಣ್ಣ, ಲಲಿತಾ, ಮುದ್ದಪ್ಪ, ತಿಮ್ಮಯ್ಯ ಇತರರು ಪ್ರತಿಭಟನೆಯಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.