ತುರುವೇಕೆರೆ: ಕಾಂಗ್ರೆಸ್ಗೆ ಮತ ಹಾಕಿದರೆ ಪರೋಕ್ಷವಾಗಿ ಬಿಜೆಪಿ ಗೆಲುವಿಗೆ ಅನುಕೂಲವಾಗಲಿದೆ ಎಂದು ಮುಸ್ಲಿಮರಿಗೆ ಶಾಸಕ ಎಂ.ಟಿ.ಕೃಷ್ಣಪ್ಪ ಕಿವಿಮಾತು ಹೇಳಿದರು. ಪಟ್ಟಣದಲ್ಲಿ ಶಾಸಕರ ನಿವಾಸದೆದುರು ಹಮ್ಮಿಕೊಂಡಿದ್ದ ಮುಸ್ಲಿಮ್ ಮುಖಂಡರು ಮತ್ತು ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಮುಸ್ಲಿಮರ ಮೂಲ ಹಕ್ಕುಗಳ ರಕ್ಷಣೆ ಜೆಡಿಎಸ್ ನಿಂದ ಮಾತ್ರ ಸಾಧ್ಯ ಎಂದರು.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ವೇಳೆ ಹುಬ್ಬಳ್ಳಿಯ ಈದ್ಗಾ ಮೈದಾನದ ಸಮಸ್ಯೆಯನ್ನು ಕೆಲವೇ ಕ್ಷಣಗಳಲ್ಲಿ ಬಗೆಹರಿಸಿದರು. ಪ್ರಧಾನ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದರು ಎಂದು ವಿವರಿಸಿದರು.
ಬಿಜೆಪಿಯವರದ್ದು ಒಡೆದಾಳುವ ನೀತಿ. ಅವರು ಸಮಾಜ ನೆಮ್ಮದಿಯಾಗಿ ಇರಲು ಬಿಡರು. ಕಾಂಗ್ರೆಸ್ನವರದ್ದು ಮೊಸಳೆ ಕಣ್ಣೀರು. ಕಾಂಗ್ರೆಸ್ಸಿಗರು ಮುಸ್ಲಿಮರನ್ನು ಮತ ಬ್ಯಾಂಕ್ ಆಗಿ ಪರಿಗಣಿಸಿದರೇ ವಿನಾ ಅವರ ಅಭಿವೃದ್ಧಿಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ತಾಲ್ಲೂಕಿನಲ್ಲಿ ಜೆಡಿಎಸ್ಗೆ ಬಿಜೆಪಿಯೇ ಎದುರಾಳಿಯಾಗಿದ್ದು. ಕ್ಷೇತ್ರದಲ್ಲಿ ಕಾಂಗ್ರೆಸ್ ಶೂನ್ಯ. ಕಾಂಗ್ರೆಸ್ ಗೆಲುವು ಸಾಧಿಸಲು ಸಾಧ್ಯವೇ ಇಲ್ಲ. ರಾಜ್ಯದಲ್ಲಿ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಇರುವ ತನಕ ಮುಸ್ಲಿಮರು ಆತಂಕಪಡುವ ಪ್ರಮೇಯವೇ ಇಲ್ಲ ಎಂದರು.
ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಸಿ.ವಿ.ಮಹಲಿಂಗಯ್ಯ, ಪಟ್ಟಣ ಪಂಚಾಯಿತಿ ಸದಸ್ಯ ವಿಜಯೇಂದ್ರ, ಎಪಿಎಂಸಿ ಅಧ್ಯಕ್ಷ ಹಿಂಡುಮಾರನಹಳ್ಳಿ ನಾಗರಾಜು, ಮಾಜಿ ಅಧ್ಯಕ್ಷ ಮಂಗಿಕುಪ್ಪೆ ಬಸವರಾಜು, ಮಣೆಚಂಡೂರು ಬಸವರಾಜು, ಗುಡ್ಡೇನಹಳ್ಳಿ ಉಮೇಶ್, ಜಫ್ರುಲ್ಲಾ ಖಾನ್, ಯೂಸುಫ್, ಇಫ್ರಾನ್, ಛೋಟಾ ಸಾಬ್, ಅಶ್ವಕ್ ಪಾಷಾ, ಮುದಾಪೀರ್ ಹುಸೇನ್, ಇಸ್ಮಾಯಿಲ್ ಸಾಬ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.