ತುಮಕೂರು: ಜೆಡಿಎಸ್ ನಗರ ವಿಧಾನಸಭಾ ಕ್ಷೇತ್ರ ಘಟಕದ ವತಿಯಿಂದ ‘ಮನೆ ಮನೆಗೆ ಕುಮಾರಣ್ಣ’ ಹೆಸರಿನಲ್ಲಿ ಪಕ್ಷದ ಪ್ರಚಾರ ಕಾರ್ಯಕ್ರಮವನ್ನು ಶುಕ್ರವಾರ ಸಿದ್ಧಗಂಗಾ ಮಠದಲ್ಲಿ ಆರಂಭಿಸಲಾಯಿತು. ಶಿವಕುಮಾರ ಸ್ವಾಮೀಜಿ ಅವರಿಗೆ ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್.ಗೋವಿಂದರಾಜು ಅವರು ಕರಪತ್ರವನ್ನು ನೀಡಿ, ಆಶೀರ್ವಾದ ಪಡೆದರು.
ಬಳಿಕ ಮಾತನಾಡಿದ ಅವರು, ‘ರಾಜ್ಯದಲ್ಲಿ 20 ತಿಂಗಳು ಆಡಳಿತ ನಡೆಸಿದ ಕುಮಾರಸ್ವಾಮಿ ಮತ್ತು ಪ್ರಧಾನಿಯಾಗಿ 10 ತಿಂಗಳು ಆಡಳಿತ ನಡೆಸಿದ ಎಚ್.ಡಿ.ದೇವೆಗೌಡ ಅವರ ಸಾಧನೆಗಳನ್ನು ತಿಳಿಸುವ ಕರಪತ್ರಗಳನ್ನು ಮನೆ ಮನೆಗೆ ಹಂಚಲಿದ್ದೇವೆ’ ಎಂದರು.
‘ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಜೆಡಿಎಸ್ ಪಕ್ಷಕ್ಕೆ ಜನರಿಂದ ಅಭೂತಪೂರ್ವ ಬೆಂಬಲ ಕಂಡುಬರುತ್ತಿದೆ. ಹಲವು ವರ್ಷಗಳ ಕಾಲ ನಗರದಲ್ಲಿ ಅಸ್ತಿತ್ವದಲ್ಲಿದ್ದ ಪಕ್ಷಗಳಿಂದ ಯಾವುದೇ ಕೆಲಸಗಳು ನಡೆಯದೇ ಇರುವ ಸಂದರ್ಭದಲ್ಲಿ ಜನರು ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡುವುದು ಖಚಿತವಾಗಿದೆ’ ಎಂದರು.
ಮೇಯರ್ ಎಚ್.ರವಿಕುಮಾರ್ ಮಾತನಾಡಿ, ‘ಕ್ಷೇತ್ರದಲ್ಲಿ ಅಭ್ಯರ್ಥಿ ಯಾರು ಎನ್ನುವುದು ಇದುವರೆಗೂ ಖಚಿತವಾಗಿಲ್ಲ. ಪಕ್ಷ ಸೂಚಿಸಿದ ಅಭ್ಯರ್ಥಿಯ ಗೆಲುವಿಗೆ ಎಲ್ಲರೂ ಶ್ರಮಿಸಲಿದ್ದೇವೆ. ಪಕ್ಷದ ಜನಹಿತ ಕೆಲಸಗಳನ್ನು ಮನೆ ಮನೆಗೆ ಮುಟ್ಟಿಸುವ ಮೂಲಕ ಜನರಲ್ಲಿ ವಿಶ್ವಾಸ ಮೂಡಿಸಲಿದ್ದೇವೆ’ ಎಂದರು.
‘ರಾಜ್ಯದಲ್ಲಿ ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗಬೇಕು. 120ರಿಂದ 130 ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲಬೇಕು ಎನ್ನುವ ಉದ್ದೇಶವನ್ನಿಟ್ಟುಕೊಂಡು ಈ ಕಾರ್ಯಕ್ರಮವನ್ನು ಆರಂಭಿಸಲಾಗಿದೆ’ ಎಂದರು. ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಂತಿಯಾಜ್ ಅಹಮದ್, ಮಹಾನಗರ ಪಾಲಿಕೆ ಸದಸ್ಯ ಟಿ.ಎಚ್.ಬಾಲಕೃಷ್ಣ, ರಾಮಕೃಷ್ಣ, ಪ್ರೆಸ್ ರಾಜಣ್ಣ, ಟಿ.ಎಚ್.ವಾಸುದೇವ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.