ಹುಳಿಯಾರು: ಸಮೀಪದ ಅವಳಗೆರೆಯಿಂದ ಬೆಳಗುಲಿವರೆಗೆ ಖಾಸಗಿ ದೂರವಾಣಿ ಕಂಪೆನಿಯವರು ತೆಗೆದ ಪೈಪ್ಲೈನ್ ಮಣ್ಣು ರಸ್ತೆಗೆ ಹಾಕಿರುವುದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ತಿಪಟೂರು ಪಟ್ಟಣದಿಂದ ರಾಷ್ಟ್ರೀಯ ಹೆದ್ದಾರಿ 150ಎ ಹೊಂದಿಕೊಂಡಿರುವ ಅವಳಗೆರೆ ಗ್ರಾಮದ ಬಳಿ ಸಂಪರ್ಕ ನೀಡಲು ರಿಲೆಯನ್ಸ್ ಕಂಪೆನಿಯಿಂದ ಪೈಪ್ಲೈನ್ ಕಾಮಗಾರಿ ನಡೆಯುತ್ತಿದೆ. ಜಿಯೋ ಸಂಪರ್ಕ ನೀಡಲು ರಸ್ತೆ ಬದಿ ಆಳವಾಗಿ ಚರಂಡಿ ತೋಡಲಾಗುತ್ತಿದೆ. ಅವಳಗೆರೆ ಗ್ರಾಮದಿಂದ ಬೆಳಗುಲಿವರೆಗೆ ಚರಂಡಿ ಮಣ್ಣನ್ನು ಸಂಪೂರ್ಣವಾಗಿ ರಸ್ತೆಗೆ ಹಾಕಲಾಗಿದೆ. ಮಣ್ಣು ಜಲ್ಲಿ ಮಿಶ್ರಿತವಾಗಿರುವುದರಿಂದ ದ್ವಿಚಕ್ರ ವಾಹನಗಳ ಸವಾರರು ಆಯತಪ್ಪಿ ಬೀಳುವಂತಾಗಿದೆ ಎಂದು ಆರೋಪಿಸಿದರು.
ಸೋಮವಾರ ಬೆಳುಗುಲಿ ಗ್ರಾಮದ ಯುವಕರಿಬ್ಬರು ಇದೇ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಬರುವ ವೇಳೆ ಬಿದ್ದು, ಗಾಯಗೊಂಡಿದ್ದಾರೆ. ಚರಂಡಿಯಿಂದ ತೆಗೆದ ಮಣ್ಣನ್ನು ಮುಚ್ಚದ ಪರಿಣಾಮ ಇಂತಹ ಅವಘಡಗಳು ಸಂಭವಿಸುತ್ತಿವೆ ಎಂದು ಶಶಿಭೂಷಣ್ ದೂರಿದ್ದಾರೆ.
ಇನ್ನೂ ಹೆಚ್ಚಿನ ಅವಘಡಗಳು ಸಂಭವಿಸುವ ಮುನ್ನ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ದೂರವಾಣಿ ಕಂಪೆನಿ ಮೇಲೆ ಕ್ರಮ ಜರುಗಿಸಿ ಆಗುತ್ತಿರುವ ಅನಾಹುತ ತಪ್ಪಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.