ADVERTISEMENT

ನೀರಿನ ಸಮಸ್ಯೆ ಬಗೆಹರಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2017, 9:55 IST
Last Updated 6 ಏಪ್ರಿಲ್ 2017, 9:55 IST
ನೀರಿನ ಸಮಸ್ಯೆ ಬಗೆಹರಿಸಲು ಮನವಿ
ನೀರಿನ ಸಮಸ್ಯೆ ಬಗೆಹರಿಸಲು ಮನವಿ   

ಮಧುಗಿರಿ: ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ತಕ್ಷಣ ನೀರಿನ ಸಮಸ್ಯೆ ಬಗೆ ಹರಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಸದಸ್ಯರು ಶಾಸಕ ಕೆ.ಎನ್.ರಾಜಣ್ಣ ಅವರಿಗೆ ಮನವಿ ಮಾಡಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ನೀರಿನ ಸಮಸ್ಯೆ ಬಗೆ ಹರಿಸಲು ತಕ್ಷಣ ಕೊಳವೆ ಬಾವಿ ಕೊರೆಸಿ ಜನರಿಗೆ ನೀರು ಕೊಡಬೇಕು.  ಹೊಸಕೆರೆ ಬಸವನಹಳ್ಳಿ, ಮಲ್ಲನಾಯಕನಹಳ್ಳಿ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿದ್ದು, ವಾರದೊಳಗೆ ದುರಸ್ತಿ ಕಾರ್ಯ ಮುಗಿಸಬೇಕು. ಕೆಲವು ಶುದ್ಧ ನೀರಿನ ಘಟಕಗಳಲ್ಲಿ ನೀರಿನ ಶುದ್ಧತೆ ಬಗ್ಗೆ ಅನುಮಾನಗಳಿದ್ದು, ಪ್ರಯೋಗಾಲಯದಲ್ಲಿ ಪರೀಕ್ಷಿಸಿದ ನಂತರವಷ್ಟೇ ಸಾರ್ವಜನಿಕರಿಗೆ ನೀರು ವಿತರಿಸುವಂತೆ ಗ್ರಾಮೀಣ ನೀರು ಸರಬರಾಜು ಇಲಾಖೆ ಸೂಚಿಸವಂತೆ ಒತ್ತಾಯಿಸಿದರು.

ವಿದ್ಯಾರ್ಥಿ ಜ್ಯೋತಿ ಯೋಜನೆಯಡಿ ಗುರುತಿಸಿರುವ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮನೆಗಳಿಗೆ ತಾಲ್ಲೂಕು ಪಂಚಾಯಿತಿ ವತಿಯಿಂದ ಶೌಚಾಲಯದ ವ್ಯವಸ್ಥೆ ಕಲ್ಪಿಸಿ ಕೊಡಬೇಕಾಗಿದ್ದು, ಇದಕ್ಕೆ ಪೂರಕವಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಒಗಳು ಸ್ಪಂದಿಸುವಂತೆ ಶಾಸಕರು ತಾಕೀತು ಮಾಡಿದರು.

ADVERTISEMENT

ವಿದ್ಯುತ್ ವಂಚಿತ ವಿದ್ಯಾರ್ಥಿಗಳ ಮನೆಗಳಿಗೆ ಈಗಾಗಲೇ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು, ಅಂತಹ ಮನೆಗಳಿಗೆ ಶೌಚಾಲಯವನ್ನು ನಿರ್ಮಿಸಿಕೊಡುವಂತೆ ತಾಲ್ಲೂಕು ಪಂಚಾಯಿತಿ ಇಒಗೆ ಸೂಚಿಸಲಾಗಿತ್ತು, ಅದರ ಪ್ರಗತಿ ಬಗ್ಗೆ ಕೇಳಿದಾಗ ಇಒ ಶೌಚಾಲಯಗಳು ನಿರ್ಮಾಣವಾಗಿದೆ ಎಂದು ಹಾರಿಕೆ ಉತ್ತರ ನೀಡಲು ಮುಂದಾದಾಗ ಸುಳ್ಳು ಹೇಳುವುದನ್ನು ಬಿಡಿ ಎಂದರು.

ದೀನ್ ದಯಾಳ್ ಉಪಾಧ್ಯಾಯ ಯೋಜನೆಯಡಿ ತಾಲ್ಲೂಕಿನ 4 ಸಾವಿರ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಮಂಜೂರಾತಿ ದೊರೆತಿದ. ಈ ಸಂಬಂಧ ವಿದ್ಯುತ್ ವಂಚಿತ 5800 ಮನೆ ಗುರುತಿಸಲಾಗಿದ್ದು, ಈ ಯೋಜನೆಯನ್ನು ಆಗಸ್ಟ್ ನೊಳಗೆ ಪೂರ್ಣಗೊಳಿಸುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಕನ್ನಡ ಭವನ ಕಟ್ಟಡದ ಕಾಮಗಾರಿಯನ್ನು ಪೂರ್ಣಗೊಳಿಸಿ ಮುಂದಿನ ಕನ್ನಡ ರಾಜ್ಯೋತ್ಸವದ ವೇಳೆಗೆ ಲೋಕಾರ್ಪಣೆ ಗೊಳಿಸಬೇಕು, ನಿರ್ಮಿತಿ ಕೇಂದ್ರದವರು ಉಳಿದ ಕಾಮಗಾರಿಗೆ ಅವಶ್ಯವಿರುವ ಹಣದ ಬಗ್ಗೆ
ಮಾಹಿತಿ ನೀಡುವಂತೆ ಸೂಚಿಸಿದರಲ್ಲದೆ ತುಮಕೂರು ಮತ್ತು ಮಧುಗಿರಿಯ ಕನ್ನಡ ಭವನಗಳ ನಿರ್ಮಾಣಕ್ಕೆ ಅಪೆಕ್ಸ್ ಬ್ಯಾಂಕ್ ಆರ್ಥಿಕ ನೆರವು ನೀಡಲಿದೆ ಎಂದರು.

ಏ. 8 ರಂದು ಪಟ್ಟಣದ ಕನ್ನಡ ಭವನಕ್ಕೆ ಕಸಾಪ ರಾಜ್ಯ ಘಟಕದ ಅಧ್ಯಕ್ಷ ಮನು ಬಳಿಗಾರ್ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಲಿದ್ದಾರೆ ಎಂದು ಶಾಸಕರು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಲಕ್ಷ್ಮಿನರಸಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಸೊಸೈಟಿ ರಾಮಣ್ಣ, ಇಒ ಎಚ್.ಡಿ.ಮಹಾಲಿಂಗಯ್ಯ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.