ADVERTISEMENT

ಮಧುಗಿರಿ ಶೈಕ್ಷಣಿಕ ಜಿಲ್ಲೆ ಬಾಲಕರು ರಾಜ್ಯ ಮಟ್ಟಕ್ಕೆ

ರವಿ ಉತ್ತಮ ದಾಳಿಕಾರ, ಹರೀಶ್ ರಕ್ಷಣಾ ಆಟಗಾರ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2014, 9:19 IST
Last Updated 16 ಸೆಪ್ಟೆಂಬರ್ 2014, 9:19 IST

ಮಧುಗಿರಿ: ಎರಡು ದಿನದಿಂದ ಪಟ್ಟಣದ ರಾಜೀವಗಾಂಧಿ ಕ್ರೀಡಾಂಗಣದಲ್ಲಿ ನಡೆದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ವಿಭಾಗ ಮಟ್ಟದ ಕೊಕ್ಕೊ ಪಂದ್ಯಾವಳಿಯಲ್ಲಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಹಿರಿಯ ಪ್ರಾಥಮಿಕ ಬಾಲಕರ ತಂಡ ರಾಜ್ಯಮಟ್ಟಕ್ಕೆ ಆಯ್ಕೆಯಾಯಿತು.

ಅಂತಿಮ ಪಂದ್ಯದಲ್ಲಿ ತುಮಕೂರು ಶೈಕ್ಷಣಿಕ ಜಿಲ್ಲೆ ತಂಡದ ವಿರುದ್ಧ 6–10 ಅಂಕಗಳೊಂದಿಗೆ ಇನ್ನಿಂಗ್ಸ್ ಮುನ್ನಡೆ ಪಡೆದ ತಂಡ ನಿರಾಯಾಸವಾಗಿ ಗೆಲುವು ಪಡೆಯಿತು. ರವಿ ಉತ್ತಮ ದಾಳಿಕಾರರಾಗಿ, ಹರೀಶ್ ಉತ್ತಮ ರಕ್ಷಣಾ ಆಟಗಾರರಾಗಿ ಗಮನ ಸೆಳೆದರು.

ಹಿರಿಯ ಪ್ರಾಥಮಿಕ ಬಾಲಕಿಯರ ವಿಭಾಗದ ಅಂತಿಮ ಪಂದ್ಯದಲ್ಲಿ ಬೆಂಗಳೂರು ಗ್ರಾಮಾಂತರ ತಂಡದ ವಿರುದ್ಧ ಶಿವಮೊಗ್ಗ ತಂಡ 5–7 ಅಂಕಗಳಿಂದ ಜಯ ಸಾಧಿಸಿತು. ಈ ಪಂದ್ಯದಲ್ಲಿ ದಾಳಿಗಾರ್ತಿಯಾಗಿ ಪ್ರೀತಿ ಮತ್ತು ಹಿಡಿತಗಾರ್ತಿಯಾಗಿ ಹೇಮಾ­ವತಿ ಉತ್ತಮ ಆಟ ಪ್ರದರ್ಶಿಸಿದರು.

ಪ್ರೌಢಶಾಲಾ ಬಾಲಕರ ವಿಭಾಗದ ಕೊನೆ ಪಂದ್ಯದಲ್ಲಿ ಬೆಂಗಳೂರು ದಕ್ಷಿಣದ ವಿರುದ್ಧ ದಾವಣಗೆರೆ ತಂಡ 12–20 ಅಂಕಗಳಿಂದ ಜಯಗಳಿಸುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾ­ಯಿತು. ರಕ್ಷಣಾ ಆಟಗಾರನಾಗಿ ಬಾಹುಬಲಿ ಹಾಗೂ ಪತನೀರಜ್ ಆಲ್‌ರೌಂಡ್ ಪ್ರದರ್ಶನ ನೀಡಿದರು.

ಪ್ರೌಢಶಾಲಾ ಬಾಲಕಿಯರ ವಿಭಾಗ­ದಲ್ಲಿ ತುಮಕೂರು ವಿರುದ್ಧ ಚಿಕ್ಕಬಳ್ಳಾ­ಪುರ ತಂಡ 7–9 ಅಂಕಳಿಂದ ವಿಜಯ ಸಾಧಿಸಿ ರಾಜ್ಯ ಮಟ್ಟಕ್ಕೆ ತಲುಪಿತು. ಉತ್ತಮ ರಕ್ಷಣಾಗಾರ್ತಿಯಾಗಿ ಪಿ.ನಳಿನಾ, ಕೆ.ಎನ್.ವಿನುತಾ ಆಲ್ ರೌಂಡ್ ಪ್ರದರ್ಶನ ತೋರಿದರು.

ರಾಜ್ಯ ಮಟ್ಟಕ್ಕೆ ಆಯ್ಕೆಯಾದ ತಂಡಗಳಿಗೆ ಹಾಗೂ ರನ್ನರ್ ಅಪ್‌ ಆದವರಿಗೆ ಟ್ರೋಫಿ, ಉತ್ತಮ ಪ್ರದರ್ಶನ ನೀಡಿದ ಕ್ರೀಡಾಪಟುಗಳಿಗೆ ಬಹುಮಾನ, ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.

ಇದೇ ಮೊದಲ ಬಾರಿಗೆ ವಿಭಾಗ ಮಟ್ಟದ ಕ್ರೀಡಾಕೂಟ ಹೊನಲು–ಬೆಳಕಿನಲ್ಲಿ ಆಯೋಜಿಸಲಾಗಿತ್ತು. ಜನರು ತಂಡೋಪ ತಂಡವಾಗಿ ಬಂದು, ಪಂದ್ಯಗಳನ್ನು ವೀಕ್ಷಿಸಿದರು. ಜಿಲ್ಲೆಯ ಮಕ್ಕಳ ಜತೆಗೆ ಹೊರ ಜಿಲ್ಲೆಯ ಮಕ್ಕಳ ಆಟವನ್ನೂ ಕೇಕೆ ಮತ್ತು ಚಪ್ಪಾಳೆ ತಟ್ಟಿ ಕ್ರೀಡಾ ಸ್ಫೂರ್ತಿ ಮೆರೆದರು.

ಕ್ರೀಡಾಕೂಟದಲ್ಲಿ ಪಾಲ್ಗೊಂಡ ಎಲ್ಲ ಮಕ್ಕಳಿಗೂ ತಾಲ್ಲೂಕು ಆಡಳಿತ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ವತಿ­ಯಿಂದ  ಊಟ ಮತ್ತು ವಸತಿ ಸೌಲಭ್ಯ ಕಲ್ಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.