ADVERTISEMENT

ಮಹಿಷಿ ವರದಿ ಜಾರಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2017, 10:29 IST
Last Updated 15 ನವೆಂಬರ್ 2017, 10:29 IST

ತುಮಕೂರು: ಡಾ.ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಇ.ರಘುರಾಮ್‌ ಮಾತನಾಡಿ, ‘ಕಳೆದ ಒಂದು ದಶಕದಿಂದ ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವಂತೆ ಒತ್ತಾಯಿಸುತ್ತಾ ಬರುತ್ತಿದ್ದೇವೆ. ಕರ್ನಾಟಕದಲ್ಲಿ ಕನ್ನಡಿಗರೇ ಪರಕೀಯರಂತೆ ಜೀವನ ನಡೆಸುವ ಅನಿವಾರ್ಯತೆ ಎದುರಾಗಿದ್ದು, ಇಲ್ಲಿನ ಮಣ್ಣಿನ ಮಕ್ಕಳು ಕೆಲಸವಿಲ್ಲದೆ ಪರದಾಡುವ ದಯನೀಯ ಸ್ಥಿತಿ ಇದೆ’ ಎಂದರು.

ಇಲ್ಲಿನ ಸಕಲ ಸವಲತ್ತುಗಳನ್ನು ಬಳಸಿಕೊಳ್ಳುವ ಉದ್ಯಮಿಗಳು ಕೆಲಸ ಕೊಡುವುದರಲ್ಲಿ ಮಾತ್ರ ನಿರಾಸಕ್ತಿ ಹೊಂದಿ ಇಲ್ಲಿನ ಮಣ್ಣಿನ ಮಕ್ಕಳಿಗೆ ದ್ರೋಹವೆಸಗುತ್ತಿವೆ. ಕನ್ನಡಿಗರು ಉದ್ಯೋಗಕ್ಕಾಗಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಭೂಮಿ ಕಳೆದುಕೊಂಡ ರೈತ ವ್ಯವಸಾಯ ಮಾಡಲು ಭೂಮಿ ಇಲ್ಲದೆ, ಮಾಡಲು ಕೆಲಸವಿಲ್ಲದೆ ಉದ್ಯಮಿಗಳ ಮನೆ ಬಾಗಿಲು ಕಾಯುವ ಸ್ಥಿತಿಯಲ್ಲಿದ್ದಾರೆ ಎಂದರು.

1986ರಿಂದ ಬಂದ ಸರ್ಕಾರಗಳು ಮಹಿಷಿ ವರದಿ ಜಾರಿಗೊಳಿಸದೆ ನಿರ್ಲಕ್ಷ್ಯ ವಹಿಸಿವೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ತುರ್ತಾಗಿ ಡಾ.ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಿ ಮಹಿಷಿ ವರದಿಯನ್ವಯ ಕನ್ನಡಿಗರಿಗೆ ಖಾಸಗಿ ಕ್ಷೇತ್ರ ಹಾಗೂ ಸರ್ಕಾರಿ ಇಲಾಖೆಗಳಲ್ಲಿ ಶೇ 70ರಷ್ಟು ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಜಿಲ್ಲಾ ಘಟಕದ ಅಧ್ಯಕ್ಷ ಟಿ.ಇ.ರಘುರಾಮ್, ಪ್ರಧಾನ ಕಾರ್ಯದರ್ಶಿ ಸಂತೋಷ್ ಕಬ್ಬಿಕೆರೆ, ನಗರ ಘಟಕದ ಅಧ್ಯಕ್ಷ ಮುಬಾರಕ್, ಯುವ ಘಟಕದ ಅಧ್ಯಕ್ಷ ವಿಜಯ್, ಕಾರ್ಮಿಕ ಘಟಕದ ಅಧ್ಯಕ್ಷ ನಾಗರಾಜು, ಗಂಗು, ಸುದೀಪ್, ಸಾಧಿಕ್ ಪಾಷ, ಮುಜಾಹಿದ್ ಶರೀಫ್, ಗಿರೀಶ್, ಚೇನತ್ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.