ADVERTISEMENT

ಶಿರಾ ಬಂದ್ ಸಂಪೂರ್ಣ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2017, 8:43 IST
Last Updated 9 ಸೆಪ್ಟೆಂಬರ್ 2017, 8:43 IST

ಶಿರಾ: ತಾಲ್ಲೂಕಿನ ನಿಗದಿ ಪಡಿಸಿರುವ ಕೆರೆಗಳಿಗೆ ಹೇಮಾವತಿ ನೀರು ಹರಿಸುವಂತೆ ಒತ್ತಾಯಿಸಿ ಶುಕ್ರವಾರ ನಡೆಸಿದ ಶಿರಾ ಬಂದ್ ಯಶಸ್ವಿಯಾಯಿತು. ತಾಲ್ಲೂಕು ಜನಪರ ಸಂಘಟನೆಗಳ ಒಕ್ಕೂಟ ಬಂದ್‌ಗೆ ಕರೆ ನೀಡಿದ್ದರು. ಇದಕ್ಕೆ ಸಾರ್ವಜನಿಕರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಬಂದ್ ಕಾರಣ ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಅಂಗಡಿ ಮುಗ್ಗಟ್ಟುಗಳು, ಹೋಟೆಲ್‌ಗಳನ್ನು ಮುಚ್ಚಿ ವರ್ತಕರು ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸಿದರು.

ಬೆಳಿಗ್ಗೆ ಸಂಚಾರ ನಡೆಸಿದ ಬಸ್‌ಗಳು 9 ಗಂಟೆ ನಂತರ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದರು. ಆಟೊಗಳ ಸಂಚಾರ ಸಹ ವಿರಳವಾಗಿತ್ತು. ಒಟ್ಟಿನಲ್ಲಿ ಸ್ವಪ್ರೇರಣೆಯಿಂದ ಬಂದ್‌ನಲ್ಲಿ ಭಾಗವಹಿಸಿ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸಿದರು.

ಬಂದ್‌ಗೆ ವಕೀಲರ ಸಂಘ ಬೆಂಬಲ ವ್ಯಕ್ತ ಪಡಿಸಿದ ಕಾರಣ ವಕೀಲರು ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದರು. ನಗರದ ಪ್ರವಾಸಿ ಮಂದಿರದ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿಲಾಯಿತು. ಪ್ರವಾಸಿ ಮಂದಿರದ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸ್ವಲ್ಪ ಕಾಲ ರಸ್ತೆ ತಡೆ ನಡೆಸಿದರು.

ADVERTISEMENT

ನಂತರ ನಗರಸಭೆ ಕಾರ್ಯಾಲಯದ ರಸ್ತೆ ಮೂಲಕ ಹಳೆ ಸರ್ಕಾರಿ ಅಸ್ಪತ್ರೆ ವೃತ್ತದಿಂದ ಮಧುಗಿರಿ ರಸ್ತೆ, ದರ್ಗಾ ವೃತ್ತದಿಂದ ತಾಲ್ಲೂಕು ಕಚೇರಿಯವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನಾ ಸಭೆ ನಡೆಸಿ ತಕ್ಷಣ ತಾಲ್ಲೂಕಿನ ಕೆರೆಗಳಿಗೆ ಹೇಮಾವತಿ ನೀರು ಹರಿಸುವಂತೆ ಒತ್ತಾಯಿಸಲಾಯಿತು. ನಂತರ ತಹಶೀಲ್ದಾರ್ ಆರ್.ಗಂಗೇಶ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನಾ ಮೆರವಣಿಗೆಯಲ್ಲಿ ಮುಖಂಡ ಬಿ.ಸತ್ಯನಾರಾಯಣ, ಶಿರಾ ನಗರಾಧಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಆರ್.ನಾಗರಾಜು, ಚಿದಾನಂದ ಎಂ.ಗೌಡ, ಆರ್.ವಿ.ಪುಟ್ಟಕಾಮಣ್ಣ, ರೈತ ಸಂಘದ ಪ್ರಧಾನ ಕಾರ್ಯದರ್ಶಿ ನಾದೂರು ಕೆಂಚಪ್ಪ, ಜಿಲ್ಲಾ ಕಾರ್ಯದರ್ಶಿ ಧನಂಜಯಾರಾಧ್ಯ, ಫರೀದ್ ಅಹಮದ್ ಖಾನ್, ಜೆ.ಎನ್.ರಾಜಸಿಂಹ, ನಗರ ಬಿಜೆಪಿ ಅಧ್ಯಕ್ಷ ಬಿ.ಗೋವಿಂದಪ್ಪ, ನಗರಸಭೆ ಸದಸ್ಯರಾದ ಎಸ್.ಜೆ.ರಾಜಣ್ಣ, ಅಬೀಬ್ ಖಾನ್, ಲಕ್ಷ್ಮಣಗೌಡ, ವಕೀಲ ಗುರುಮೂರ್ತಿ, ಸಿದ್ಧೇಶ್, ನಾಗರಾಜು, ಬಾಂಬೆರಾಜಣ್ಣ, ಲೋಕೇಶ್ವರಯ್ಯ, ತಿಪ್ಪೇಸ್ವಾಮಿ, ಮಹಮದ್ ಜಿಯಾವುಲ್ಲಾ, ಸೂರ್ಯನಾರಾಯಣ, ಶಶಿಧರ್ ಗೌಡ, ಲಿಂಗಪ್ಪ, ಜಯರಾಮಯ್ಯ, ಕನ್ಯಾಕುಮಾರಿ, ಕವಿತಾ, ಭ್ರಮರಾಂಬಿಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.