ತುಮಕೂರು: ನಗರದ ಮರಳೂರು ವಾರ್ಡ್ ಮೂಲ ಸೌಲಭ್ಯವಿಲ್ಲದೆ ನರುಳುತ್ತಿದೆ. ತುಮಕೂರು ನಗರಕ್ಕೆ ಪ್ರವೇಶ ದ್ವಾರಗಳಲ್ಲಿ ಇದು ಒಂದಾಗಿದೆ. ಆದರೆ ಇದರ ಅಭಿವೃದ್ಧಿಗೆ ಮಾತ್ರ ಪಾಲಿಕೆ ಗಮನವೆ ಕೊಟ್ಟಿಲ್ಲ.
‘ಇಲ್ಲಿಯ ಸದಸ್ಯೆ ಜಯಲಕ್ಷ್ಮಿ ವೆಂಕಟೇಶ್ ಅವರಿಗೆ ಅಭಿವೃದ್ಧಿ ಎಂಬುದೇ ಗೊತ್ತಿಲ್ಲ. ನಾವು ಹೇಳಿದರೂ ಅವರಿಗೆ ಗೊತ್ತೇ ಆಗುವುದಿಲ್ಲ. ಹೀಗಾಗಿಯೇ ಈ ವಾರ್ಡ್ಗೆ ಈ ದುರ್ಗತಿ ಬಂದಿದೆ’ ಎಂದು ಜನರು ದೂರುಗಳ ಸುರಿ ಮಳೆಯನ್ನೆ ಹರಿಸುತ್ತಾರೆ.
ರಂಗನಾಥ ನಿಲಯದಿಂದ ಬಂಜಾರ ಪ್ರೌಢಶಾಲೆ ಮುಂಭಾಗದವರೆಗೆ ದೊಡ್ಡ ದೊಡ್ಡ ಜಾಲಿ ಮರಗಳು, ಮುಳ್ಳಿನ ಪೊದೆಗಳು ಸ್ವಾಗತಿಸುತ್ತವೆ. ಮನೆಗಳ ಮುಂಭಾಗವೇ ಕಸದ ತಿಪ್ಪೆಯ ರಾಶಿಗಳಿವೆ. ಖಾಲಿ ನಿವೇಶನಗಳು ಹೆಚ್ಚಿರುವ ಕಾರಣ ಎಲ್ಲಾ ಕಡೆಯು ಪೊದೆ ಗಿಡಗಳು ಕಾಣುತ್ತವೆ. ಇಡೀ ವಾರ್ಡ್ ನಗರವೋ, ಗ್ರಾಮವೋ ಎಂಬುದು ಗೊತ್ತಾಗುವುದಿಲ್ಲ. ಗ್ರಾಮಗಳಿಗಿಂತ ಕಡೆಯಂತೆ ಗೋಚರಿಸುತ್ತದೆ.
ಸರಿಯಾದ ರಸ್ತೆ, ಚರಂಡಿ, ಬೀದಿ ದೀಪ ಮತ್ತು ನೀರಿನ ವ್ಯವಸ್ಥೆ ಇಲ್ಲವಾಗಿದೆ. ಕುಣಿಗಲ್ ರಸ್ತೆಯಿಂದ ಬಣಜಾರ ಶಾಲೆಯ ಮುಂಭಾಗ ಪಾರ್ಕ್ವರೆಗೂ ರಸ್ತೆ ಅಭಿವೃದ್ಧಿಪಡಿಸಬೇಕು. ರಸ್ತೆಯಲ್ಲಿ ಕಾಣುವ ಜಾಲಿ ಮರಗಳನ್ನು ಕಡಿಯಬೇಕು ಎಂದು ಇಲ್ಲಿನ ಜನರು ಹೇಳುತ್ತಾರೆ.
‘ಸರ್ಕಾರಿ ಶಾಲೆಯ ಸುತ್ತಲೂ ಪೊದೆ ಬೆಳೆದುಕೊಂಡಿದೆ. ಇದರಿಂದಾಗಿ ಮಕ್ಕಳು ಶಾಲೆಗೆ ಹೋಗಲು ಹೆದರುತ್ತಿದ್ದಾರೆ. ಈ ಪೊದೆಗಳು ಹಂದಿಗಳು, ನಾಯಿಗಳ ವಾಸಸ್ಥಾನವಾಗಿ ಮಾರ್ಪಟ್ಟಿವೆ. ಮಕ್ಕಳು ಶಾಲೆಯಿಂದ ಈಚೆ ಬರಲು ಸಹ ಭಯ ಬೀಳುತ್ತಾರೆ’ ಎಂದು ಪೋಷಕರೊಬ್ಬರು ಹೇಳಿದರು. ‘ನೈರ್ಮಲ್ಯ ಎಂಬುದೇ ನಮಗೆ ಗೊತ್ತಿಲ್ಲ. ಚರಂಡಿ ವ್ಯವಸ್ಥೆ ಇಲ್ಲದೆ ನೀರು ಸಂಗ್ರಹಗೊಂಡು ದುರ್ವಾಸನೆ ಬೀರುತ್ತಿದೆ’ ಎಂದು ಜಯರಾಮ್ ಹೇಳುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.