ADVERTISEMENT

ಹೋರಾಟಗಳಿಗೆ ಬೀದಿ ನಾಟಕ ಪ್ರೇರಣೆ

ಜಿಲ್ಲಾ ಬೀದಿ ನಾಟಕ ಸಂಘಗಳ ಒಕ್ಕೂಟಕ್ಕೆ ಚಾಲನೆ ನೀಡಿದ ರಮಾಕುಮಾರಿ

​ಪ್ರಜಾವಾಣಿ ವಾರ್ತೆ
Published 11 ಜೂನ್ 2018, 5:31 IST
Last Updated 11 ಜೂನ್ 2018, 5:31 IST

ತುಮಕೂರು: ಪ್ರಪಂಚದಲ್ಲಿ ನಡೆದ ಹೋರಾಟಗಳಿಗೆ ಬೀದಿ ನಾಟಕಗಳೇ ಪ್ರೇರಣೆ. ಕಲಾವಿದರು ಒಕ್ಕೂಟದ ಹೆಸರಿನಲ್ಲಿ ಒಗ್ಗೂಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆ ಬಾ.ಹ.ರಮಾಕುಮಾರಿ ತಿಳಿಸಿದರು.

ನಗರದಲ್ಲಿ ನಡೆದ ಬೆಂಗಳೂರು ವಿಭಾಗ ಮಟ್ಟದ ಬೀದಿ ನಾಟಕ ಕಲಾವಿದರ ಸಮಾಲೋಚನಾ ಸಭೆಯಲ್ಲಿ ಜಿಲ್ಲಾ ಬೀದಿ ನಾಟಕ ಸಂಘಗಳ ಒಕ್ಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸರ್ಕಾರದ ವಿವಿಧ ಯೋಜನೆಗಳು ಹಾಗೂ ಇಲಾಖೆಗಳ ಮಾಹಿತಿ, ಶಿಕ್ಷಣ ಹಾಗೂ ಸಂವಹನ ಕಾರ್ಯಕ್ರಮಗಳ ಬಗ್ಗೆ ಪ್ರತಿ ಮನೆ ಬಾಗಿಲಿಗೆ ತಲುಪಿಸುವ ಕಾರ್ಯವನ್ನು ಬೀದಿ ನಾಟಕಗಳು ಮಾಡುತ್ತಿವೆ ಎಂದರು.

ADVERTISEMENT

ಕರ್ನಾಟಕ ರಾಜ್ಯ ಬೀದಿ ನಾಟಕ ಸಂಘಗಳ ಒಕ್ಕೂಟದ ಅಧ್ಯಕ್ಷ ಗ್ಯಾರಂಟಿ ರಾಮಣ್ಣ ಮಾತನಾಡಿ, ಸರ್ಕಾರದ ಜಾಗೃತಿ ಕಾರ್ಯಕ್ರಮಗಳನ್ನು ಒಕ್ಕೂಟಕ್ಕೆ ನೀಡಿದರೆ ಒಳಿತು. ರಾಜ್ಯದಲ್ಲಿ ನೋಂದಾಯಿತವಾಗಿರುವ ಎಲ್ಲ ಸಂಘಗಳಿಗೆ ಈ ಕಾರ್ಯಕ್ರಮಗಳನ್ನು ಸಮಾನವಾಗಿ ಹಂಚಬೇಕು. ಮುಂದಿನ ತಿಂಗಳು ಮೈಸೂರಿನಲ್ಲಿ ನಡೆಯುವ ಬೀದಿ ನಾಟಕ ಕಲಾವಿದರ ರಾಜ್ಯ ಮಟ್ಟದ ಸಮಾವೇಶದಲ್ಲಿ ಈ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗುವುದು’ ಎಂದು ನುಡಿದರು.

ರಾಜ್ಯದಲ್ಲಿ 194 ನೋಂದಾಯಿತ ಬೀದಿ ನಾಟಕ ಕಲಾತಂಡಗಳು ಇವೆ. 1,800ರಿಂದ 2 ಸಾವಿರ ಕಲಾವಿದರು ಇದ್ದಾರೆ. ಆದರೆ ಸರ್ಕಾರ ಒಂದು ಜಿಲ್ಲೆಗೆ ಮೂರು ತಂಡಗಳಿಗೆ ಮಾತ್ರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ಕಾರ್ಯಕ್ರಮಗಳನ್ನು ನೀಡುತ್ತಿದೆ. ಉಳಿದ ತಂಡಗಳ ಕಲಾವಿದರು. ಗುತ್ತಿಗೆ ಪಡೆದ ತಂಡಗಳ ಬಳಿ ಕೂಲಿ ಕೆಲಸ ಮಾಡಬೇಕಾಗಿದೆ ಎಂದರು.

ಸರ್ಕಾರ ಒಕ್ಕೂಟಕ್ಕೆ ಕಾರ್ಯಕ್ರಮ ಅನುಷ್ಠಾನದ ಜವಾಬ್ದಾರಿ ನೀಡಿದರೆ, 194 ತಂಡಗಳಿಗೂ ಸಮನಾಗಿ ಕಾರ್ಯಕ್ರಮಗಳನ್ನು ನೀಡಲಾಗುವುದು. ಒಕ್ಕೂಟವನ್ನು ಶಕ್ತಿಯುತವಾಗಿ ಕಟ್ಟಲು ಸಾಧ್ಯ ಎಂದು ತಿಳಿಸಿದರು.

ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಆಂಜಿನಪ್ಪ ಲೋಕಿಕೆರೆ, ಸಂಘಟನಾ ಕಾರ್ಯದರ್ಶಿ ಡಿ.ಸಿ.ಕುಮಾರ್, ಜಿಲ್ಲಾ ಘಟಕದ
ಅಧ್ಯಕ್ಷ ಮಂಜುನಾಥ್ ದಾಸರಹಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.