ತುಮಕೂರು: ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಮಂಗಳವಾರ ಜಿಲ್ಲೆಯ 11 ಕ್ಷೇತ್ರಗಳಲ್ಲಿ ಒಟ್ಟು 90ಕ್ಕೂ ಹೆಚ್ಚು ನಾಮಪತ್ರಗಳು ಸಲ್ಲಿಕೆಯಾದವು. ಇವರಲ್ಲಿ ಪಕ್ಷೇತರರೇ ಹೆಚ್ಚಿದ್ದಾರೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ಸೇರಿ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟು 186 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿಯ ಬಹುತೇಕ ಅಭ್ಯರ್ಥಿಗಳು ನಾಮಪತ್ರ ತಿರಸ್ಕೃತವಾಗುವ ಆತಂಕದಿಂದ ಎರಡು ಸೆಟ್ಗಳಲ್ಲಿ ಉಮೇದುವಾರಿ ಸಲ್ಲಿಸಿದ್ದಾರೆ. ಕೆಲವು ಕಡೆ ಪಕ್ಷೇತರರೂ ಎರಡು ಸೆಟ್ ಸಲ್ಲಿಸಿದ್ದಾರೆ.
ಒಟ್ಟಾರೆಯಾಗಿ ಗುಬ್ಬಿ, ಶಿರಾ ಮತ್ತು ಮಧುಗಿರಿಯಲ್ಲಿ ಹೆಚ್ಚು ನಾಮಪತ್ರಗಳು ಸಲ್ಲಿಕೆಯಾಗಿವೆ. ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಕಡಿಮೆ ನಾಮಪತ್ರ ಸಲ್ಲಿಕೆ ಆಗಿದೆ.
ಮಂಗಳವಾರ ತುಮಕೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಆರ್.ರವಿಕುಮಾರ್ ಪಕ್ಷದ ಕಾರ್ಯಕರ್ತರ ಜತೆ ಉಮೇದುವಾರಿಕೆ ಸಲ್ಲಿಸಿದರು. ನಗರದ ಟೌನ್ಹಾಲ್ ಸರ್ಕಲ್ನಿಂದ ಎಂ.ಜಿ.ರಸ್ತೆ ಮಾರ್ಗವಾಗಿ ಮೆರವಣಿಗೆಯಲ್ಲಿ ಬಂದ ನಾಮಪತ್ರ ಸಲ್ಲಿಸಿದರು. ಬಯಲುಸೀಮೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕಲ್ಲಹಳ್ಳಿ ದೇವರಾಜ್ ಹಾಗೂ ಇತರ ಮುಖಂಡರು ಹಾಜರಿದ್ದರು.
ಮಧುಗಿರಿಯಲ್ಲಿ ಶಾಸಕ ಕೆ.ಎನ್.ರಾಜಣ್ಣ, ಗುಬ್ಬಿಯಲ್ಲಿ ಎಸ್.ಆರ್.ಶ್ರೀನಿವಾಸ್, ಕೊರಟಗೆರೆಯಲ್ಲಿ ಹುಚ್ಚಯ್ಯ, ಶಿರಾದಲ್ಲಿ ಎಸ್.ಆರ್.ಗೌಡ ನಾಮಪತ್ರ ಸಲ್ಲಿಸಿದ ಪ್ರಮುಖರು.
ತುಮಕೂರು ಗ್ರಾಮಾಂತರದಲ್ಲಿ ಶಬ್ಬೀರ್ ಅಹಮದ್, ಅನ್ವರ್, ಎಂ.ಸೋಮಶೇಖರಯ್ಯ ಪಕ್ಷೇತರರಾಗಿ, ಎಂಇಪಿ ಅಭ್ಯರ್ಥಿಯಾಗಿ ಸುನೀಲ್ ಯಾದವ ಮಂಗಳವಾರ ನಾಮಪತ್ರ ಸಲ್ಲಿಸಿದರು.
ತುಮಕೂರು ನಗರ ಕ್ಷೇತ್ರಕ್ಕೆ ಶಾಸಕ ಡಾ.ರಫೀಕ್ ಅಹಮ್ಮದ್ ಮಂಗಳವಾರ ಸಹ ಮತ್ತೊಂದು ನಾಮಪತ್ರ ಸಲ್ಲಿಸಿದರು. ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದಿಂದ ಬಾಬಾಜಾನ್, ಜೆಡಿಯುನಿಂದ ವೀರಪ್ಪದೇವರು ಆರ್.ಎಸ್, ಸ್ವತಂತ್ರ ಅಭ್ಯರ್ಥಿಗಳಾಗಿ ರೆಹಮತ್ ಷರೀಫ್, ಸೈಯದ್ ನಾಜಿದ್ ಅಹ್ಮದ್, ಆರ್. ನಾಗರಾಜು ನಾಮಪತ್ರ ಸಲ್ಲಿಸಿದರು. ಫೆಡರಲ್ ಕಾಂಗ್ರೆಸ್ ಆಫ್ ಇಂಡಿಯಾದಿಂದ ರೇಶ್ಮಾ ಮೇರಿಯಂ, ಸಾಮಾನ್ಯ ಜನತಾ ಪಕ್ಷದಿಂದ ತಿಪ್ಪೇಸ್ವಾಮಿ, ಕರ್ನಾಟಕ ಜನತಾ ಪಕ್ಷದಿಂದ ರಾಜು, ರಾಷ್ಟ್ರೀಯ ಮಾನವ ವಿಕಾಸ ಪಕ್ಷದಿಂದ ಮಂಜುಳಾ ಉಮೇದುವಾರಿಕೆ ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.