ಮಧುಗಿರಿ: ತುಳಿತಕ್ಕೆ ಒಳಗಾದ ಸುಮುದಾಯಗಳು ದುಶ್ಚಟ ಹಾಗೂ ವೈಷಮ್ಯ ಮರೆತು ಸ್ವಾಭಿಮಾನದಿಂದ ಬದುಕು ನಡೆಸಬೇಕು’ ಎಂದು ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.
ಪಟ್ಟಣದಲ್ಲಿ ತಾಲ್ಲೂಕು ಆಡಳಿತ ಹಾಗೂ ಭೋವಿ ಸಂಘ ಬುಧವಾರ ಆಯೋಜಿಸಿದ್ದ ಸಿದ್ದರಾಮೇಶ್ವರ ಜಯಂತಿ ಉದ್ಘಾಟಿಸಿ ಮಾತನಾಡಿದರು.
‘ತಳ ಸಮುದಾಯಗಳು ಮುಂದುವರಿದ ಸಮುದಾಯಗಳ ಜೊತೆಗೆ ಗುರುತಿಸಿಕೊಳ್ಳುವ ಉದ್ದೇಶದಿಂದ ಮೀಸಲಾತಿ ಕಲ್ಪಿಸಲಾಗಿದೆ. ಚುನಾವಣಾ ಸಮಯದಲ್ಲಿ ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಮತ ಪಡೆಯಲು ಜಾತಿಯನ್ನು ಹುಟ್ಟುಹಾಕುತ್ತಿರುವುದು ವಿಷಾದನೀಯ’ ಎಂದು ಅವರು ಹೇಳಿದರು.
‘ಎಲ್ಲ ಮಹನೀಯರು ಜಯಂತಿಗಳನ್ನು ಸರ್ಕಾರ ಆಚರಿಸುತ್ತಿದೆ. ಅವರ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು’ ಎಂದರು.
ಉಪವಿಭಾಗಾಧಿಕಾರಿ ಡಾ.ವೆಂಕಟೇಶಯ್ಯ ಮಾತನಾಡಿ, ‘ಸಿದ್ದರಾಮೇಶ್ವರರ ಕರ್ಮಯೋಗ ಹಾಗೂ ಕಾಯಕ ಧರ್ಮ ಇಂದಿಗೂ ಪ್ರಸ್ತುತ. ಸಿದ್ದರಾಮೇಶ್ವರರ 38 ಸಾವಿರ ವಚನಗಳಲ್ಲಿ 1500 ಸಾವಿರ ವಚನಗಳು ಮಾತ್ರ ಲಭ್ಯ ಇವೆ. ಬೇರೆ ಸಮುದಾಯಗಳು ಅವರನ್ನು ಹೈಜಾಕ್ ಮಾಡುತ್ತಿವೆ’ ಎಂದರು. ಇದೇ ಸಂದರ್ಭದಲ್ಲಿ ಸಮುದಾಯದ ಮುಖಂಡರನ್ನು ಸನ್ಮಾನಿಸಲಾಯಿತು.
ಸಾಹಿತಿ ಮ.ಲ.ನ ಮೂರ್ತಿ, ಉಪನ್ಯಾಸಕ ಅಶ್ವತ್ಥ್ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಎಲ್.ರಾಧಾ, ಸದಸ್ಯರಾದ ಎಂ.ಕೆ.ನಂಜುಂಡಯ್ಯ, ಮೊಹಮದ್ ಅಯೂಬ್, ಎಂ.ಎಸ್.ಚಂದ್ರಶೇಖರ್, ಎಂ.ಜಿ.ಗೋಪಿನಾಥ್, ಪುಟ್ಟಮ್ಮ, ಅಲೀಂ, ಜುಬೇದಾ, ತಹಶೀಲ್ದಾರ್ ಎಚ್.ಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಸದಸ್ಯ ರಂಗನಾಥ್, ಎಪಿಎಂಸಿ ಅಧ್ಯಕ್ಷ ಪಿ.ಟಿ.ಗೋವಿಂದಯ್ಯ, ಹೊಸಕೆರೆ ಗ್ರಾ.ಪಂ ಅಧ್ಯಕ್ಷೆ ಗಾಯಿತ್ರಿ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಎಚ್.ಸಿ.ಭೈರಪ್ಪ, ಮುಖಂಡರಾದ ಎಂ.ವಿ.ಗೋವಿಂದರಾಜು, ಡಾ.ಭೀಮರಾಜು, ಬಂದ್ರೇಹಳ್ಳಿ ಮಂಜುನಾಥ್, ನಾಗರಾಜು, ಸಿದ್ದಪ್ಪ, ಹನುಮಪ್ಪ, ಸುಬ್ಬರಾಯಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.