ಗುಬ್ಬಿ: ‘ರೈತ ಮುಖಂಡರ ಎದೆಗೆ ಒದೆಯಬೇಕು ಎಂದು ಸಚಿವ ಟಿ.ಬಿ.ಜಯಚಂದ್ರ ಶಿರಾದಲ್ಲಿ ಹೇಳಿದ್ದು ಇದನ್ನು ರೈತ ಸಂಘ ಖಂಡಿಸುತ್ತದೆ’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಗೋವಿಂದರಾಜು ತಿಳಿಸಿದರು. ಪಟ್ಟಣದಲ್ಲಿ ಪ್ರಾಂತ ರೈತ ಸಂಘ ಮತ್ತು ಹಸಿರು ಸೇನೆ ರೈತರ ಸಮಸ್ಯೆಗಳ ಇತ್ಯರ್ಥಕ್ಕಾಗಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
‘ಕಾನೂನು ಸಚಿವರು ಯಾವ ವಿಚಾರವಾಗಿ ಪ್ರಮುಖವಾಗಿ ಕೆಲಸ ಮಾಡಬೇಕಿತ್ತೋ ಆ ವಿಚಾರವಾಗಿ ಕೆಲಸ ಮಾಡುತ್ತಿಲ್ಲ. ರೈತರ ಎದೆಗೆ ಒದೆಯುವ ಹೇಳಿಕೆ ಬಗ್ಗೆ ಕ್ಷಮೆ ಕೇಳದಿದ್ದರೆ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.
‘ಅಕ್ರಮ ನಿವೇಶನಗಳನ್ನು ಸಕ್ರಮ ಮಾಡಬೇಕು. ಈಗಾಗಲೇ ಉಳುಮೆ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ನೀಡಲು ಅಧಿಕಾರಿಗಳು ಚುರುಕು ತೋರಬೇಕು. ಅಕ್ರಮ ಮದ್ಯದ ಅಂಗಡಿ ಗಳನ್ನು ತೆರವು ಮಾಡಲು ಅಬಕಾರಿ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎಂ.ನಿಜಾನಂದಮೂರ್ತಿ ಮಾತನಾಡಿ ‘ ವಿದ್ಯುತ್ ಪರಿವರ್ತಕಗಳು ಸುಟ್ಟುಹೋಗಿವೆ. ಸಕಾಲಕ್ಕೆ ಸಮಸ್ಯೆ ಬಗೆಹರಿಸಲು ಬೆಸ್ಕಾಂ ಸೋತಿದೆ’ ಎಂದರು.
ಪಟ್ಟಣದ ಬಸ್ ನಿಲ್ದಾಣದಿಂದ ತಾಲ್ಲೂಕು ಕಚೇರಿವರೆಗೆ ಜಾಥಾ ನಡೆಸಿದರು. ಮನವಿ ಸ್ವೀಕರಿಸಿದ ತಹಶೀಲ್ದಾರ್ ಜಿ.ವಿ.ಮೋಹನ್ ಕುಮಾರ್, ‘ಎರಡು ತಿಂಗಳಿಗೆ ಒಮ್ಮೆ ರೈತರ ಸಭೆ ನಡೆಸುವೆ. ಅಹವಾಲು ಪಡೆದು ಸಮಸ್ಯೆಗಳನ್ನು ಇತ್ಯರ್ಥ ಮಾಡಲು ಕ್ರಮ ಕೈಗೊಳ್ಳುತ್ತೇನೆ’ ಎಂದು ಭರವಸೆ ನೀಡಿದರು.
ರೈತ ಸಂಘದ ಪದಾಧಿಕಾರಿಗಳಾದ ವೆಂಕಟೇಗೌಡ, ಲೋಕೇಶ್, ಹಸಿರು ಸೇನೆಯ ಕುಮಾರ್, ಶಿವಕುಮಾರ. ಗುರುಚನ್ನಬಸಪ್ಪ, ಮಂಜುನಾಥ್, ಚಂದ್ರಪ್ಪ, ಶಿರಾ ತಾಲ್ಲೂಕು ಘಟಕದ ಅಧ್ಯಕ್ಷ ಲಕ್ಷ್ಮಣ ಗೌಡ, ಶ್ರೀನಿವಾಸ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.