ತುಮಕೂರು:ಮಕ್ಕಳ ಬಾಲ್ಯದ ಜೊತೆಗೆ ಸಾಂಸ್ಕೃತಿಕ ಮತ್ತು ಕ್ರೀಡಾ ವಾತಾವರಣ ಮೂಡಿದರೆ ಅವರ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ ಎಂದುತುಮಕೂರು ವಿವಿಯ ಉಪಕುಲಸಚಿವ ಡಾ.ರಮೇಶ್ ಸಾಲಿಯಾನ್ ಅಭಿಪ್ರಾಯ ಪಟ್ಟರು.
ನಗರದ ಬಾಲಭವನದಲ್ಲಿ ಶಾಂತಲಾ ಪ್ರಶಸ್ತಿ ಪುರಸ್ಕೃತ ಕೆ.ಎಂ.ರಾಮನ್ ಅವರ ಶಿಷ್ಯ ವಿದ್ವಾನ್ ಕೆ.ಆರ್.ಗಿರೀಶ್ ಅವರ ನೇತೃತ್ವದಲ್ಲಿ ನಡೆದ ’ಚಿತ್ ಸಭಾಪತಿ’ ನೃತ್ಯ ರೂಪಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಕ್ಕಳಿಗೆ ಶಾಲೆಯಲ್ಲಿ ಪಾಠ ಪ್ರವಚಗಳ ಜೊತೆಗೆ ಲಲಿತಾ ಕಲೆಗಳಾದ ನೃತ್ಯ ನಾಟಕ, ಸಂಗೀತವನ್ನು ರೂಢಿಸಿಕೊಂಡರೆ ಅವರ ವ್ಯಕ್ತಿಯ ಸಮಗ್ರ ವಿಕಾಸನಕ್ಕೂ ದಾರಿಯಾಗುತ್ತದೆ ಎಂದರು. ಪೋಷಕರು ಮಕ್ಕಳ ಪ್ರತಿಭೆಯನ್ನು ಗುರ್ತಿಸಿ ಪ್ರೋತ್ಸಾಹಿಸಬೇಕು. ಇದರಿಂದ ಅವರ ಪರಿಪೂರ್ಣ ವ್ಯಕ್ತಿತ್ವ ಸಮಾಜಕ್ಕೆ ಪರಿಚಯವಾಗುತ್ತದೆ ಎಂದು ಅವರು ಸಲಹೆ ನೀಡಿದರು.
ಸಾಹಿತಿ ಡಾ.ಕವಿತಾಕೃಷ್ಣ ಮಾತನಾಡಿ, ಕಳೆದ 55 ವರ್ಷಗಳಿಂದ ತುಮಕೂರು ನಗರದಲ್ಲಿ ನೃತ್ಯ ಶಾಲೆ ತೆರೆದು ಸಾವಿರಾರು ಮಕ್ಕಳಿಗೆ ನೃತ್ಯ ಹೇಳಿಕೊಟ್ಟು, ತುಮಕೂರು ಸಾಂಸ್ಕೃತಿಕ ನಗರಿಯಾಗಲು ತಮ್ಮದೇ ಕಾಣಿಕೆ ನೀಡಿರುವ ನಾಟ್ಯಶ್ರೀ ಕೆ.ಎಂ.ರಾಮನ್ ಅವರ ಕೊಡುಗೆ ಆಪಾರ.
ಅವರ ಕುಟುಂಬದ ನಾಲ್ಕು ಜನ ಮಕ್ಕಳು ತಂದೆಯ ನೆರಳಲ್ಲಿಯೇ ನಾಟ್ಯ ಅಭ್ಯಾಸ ಮಾಡಿ, ರಾಜ್ಯದ ವಿವಿಧೆಡೆ ನೃತ್ಯ ಶಾಲೆ ತೆರೆದು, ಸಾವಿರಾರು ಮಕ್ಕಳಿಗೆ ಕಲಿಸಿ, ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡುತ್ತಿದ್ದು, ಇಂದು ಪ್ರದರ್ಶನಗೊಂಡ ಚಿತ್ ಸಭಾಪತಿ ನೋಡುಗರ ಮನಸೂರೆಗೊಂಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ’ಡಾನ್ ಬಾಸ್ಕೋ’ ಶಾಲೆಯ ಮುಖ್ಯ ವ್ಯವಸ್ಥಾಪಕ ಸಿ.ಟಿ.ರೆವರೆಂಡ್ ಫಾದರ್ ಟಾಮಿ, ನಾಟ್ಯಶ್ರೀ ಕೆ.ಎಂ.ರಾಮನ್ ಅವರ ಪುತ್ರಿಯ ಗುಣವತಿ ಪ್ರಭಾಕರ್ ಮತ್ತು ಸತ್ಯವತಿ ಅವರನ್ನು ಅಭಿನಂದಿಸಲಾಯಿತು.
ಹಿರಿಯ ಪತ್ರಕರ್ತ ಎಚ್.ಎಸ್.ರಾಮಣ್ಣ, ಎಚ್.ಎನ್.ಮಲ್ಲೇಶ್, ಉಮಾ, ವಿದ್ವಾನ್ ಕೆ.ಆರ್.ಗಿರೀಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.