ಉಡುಪಿ: ಅಪಘಾತದಲ್ಲಿ ಗಾಯಗೊಂಡು ಮಿದುಳು ನಿಷ್ಕ್ರಿಯಗೊಂಡಿದ್ದ ಬ್ರಹ್ಮಾವರ ಸಮೀಪದ ಬೆಣ್ಣೆಕುದ್ರು ನಿವಾಸಿ ಕಸ್ತೂರಿ (36) ಎಂಬುವರ ಅಂಗಾಂಗಗಳನ್ನು ಗುರುವಾರ ದಾನ ಮಾಡಲಾಗಿದೆ.
ಪತಿ ಭಾಸ್ಕರ್, ಮಗ ಅನಿವಾಶ್ ಹಾಗೂ ಅತ್ತೆ ಗಿರಿಜಾ ಅವರೊಂದಿಗೆ ಕಸ್ತೂರಿ ಅವರು ಡಿ.12ರಂದು ಕಾರಿನಲ್ಲಿ ಹೋಗುವಾಗ ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ತೀವ್ರವಾಗಿ ಗಾಯಗೊಂಡಿದ್ದ ಅವಿನಾಶ್ ಹಾಗೂ ಗಿರಿಜಾ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ತಲೆಗೆ ತೀವ್ರವಾದ ಪೆಟ್ಟು ಬಿದ್ದ ದಂಪತಿಯನ್ನು ಮಣಿಪಾಲದ ಕಸ್ತೂರಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿತ್ತು.
ಕಸ್ತೂರಿ ಅವರ ಮಿದುಳು ನಿಷ್ಕ್ರಿಯಗೊಂಡಿರುವುದನ್ನು ವೈದ್ಯರು ಬುಧವಾರ ಖಚಿತಪಡಿಸಿದ್ದರು. ಆದ್ದರಿಂದ ಅವರ ಅಂಗಾಂಗಗಳನ್ನು ದಾನ ಮಾಡಲು ಸಹೋದರರಾದ ಶೈಲೇಶ್, ಪ್ರತಾಪ್ ಒಪ್ಪಿಗೆ ಸೂಚಿಸಿದ್ದರು. ಮಣಿಪಾಲದಿಂದ ಮಂಗಳೂರಿನವರೆಗೆ ಸಂಚಾರ ಮುಕ್ತ ಮಾರ್ಗ (ಗ್ರೀನ್ ಕಾರಿಡಾರ್) ವ್ಯವಸ್ಥೆ ಕಲ್ಪಿಸಲಾಯಿತು. ಮೂತ್ರಪಿಂಡವನ್ನು ಫಾದರ್ ಮುಲ್ಲರ್ ಆಸ್ಪತ್ರೆ, ಇನ್ನೊಂದನ್ನು ಕಸ್ತೂರಬಾ ಆಸ್ಪತ್ರೆ, ಕಣ್ಣುಗಳನ್ನು ಫಾದರ್ ಮುಲ್ಲರ್ ಆಸ್ಪತ್ರೆಗೆ ಹಾಗೂ ಹೃದಯ ಕವಾಟವನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಸಾಗಿಸಲಾಯಿತು.
ಭಾಸ್ಕರ್ ಅವರ ಸ್ಥಿತಿ ಈಗಲೂ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಕಾರು ಚಾಲಕ ಭಾಸ್ಕರ್ ಅವರು ಕುಟುಂಬದ ಜತೆಗೆ ಖಾಸಗಿ ಕಾರ್ಯಕ್ರಮಕ್ಕೆ ಹೋಗುವಾಗ ಭೀಕರ ಅಪಘಾತ ಸಂಭವಿಸಿತ್ತು.
* *
ಅಂಗಾಂಗಗಳನ್ನು ಮಂಗಳೂರಿಗೆ ಸಾಗಿಸಲು ಅಗತ್ಯ ಇರುವ ವ್ಯವಸ್ಥೆಯನ್ನು ಇಲಾಖೆ ವತಿಯಿಂದ ಕಲ್ಪಿಸಿಕೊಡಲಾಯಿತು.
ಕುಮಾರಚಂದ್ರ,
ಹೆಚ್ಚುವರಿ ಎಸ್ಪಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.