ಉಡುಪಿ: ‘ಹೆದ್ದಾರಿ ಬದಿ ಜೋಪಡಿಗಳಲ್ಲಿ ವಾಸವಿದ್ದ ಸುಡುಗಾಡುಸಿದ್ದರು ಮತ್ತು ಬುಡ್ಗ ಜಂಗಮರಿಗೆ ವ್ಯವಸ್ಥಿತ ರೀತಿಯಲ್ಲಿ ಬಡಾವಣೆ ನಿರ್ಮಿಸಲಾಗಿದ್ದು, ಸ್ವಚ್ಛತೆಯ ಕಡೆಗೆ ಗಮನ ಹರಿಸಬೇಕು’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು.
ಸುಡುಗಾಡು ಸಿದ್ದರು ಮತು ಬುಡ್ಗ ಜಂಗಮದವರಿಗೆ ಕೊಡಂಕೂರು ಎಂಬಲ್ಲಿ ನೂತನವಾಗಿ ನಿರ್ಮಿಸಲಾದ ‘ಪ್ರಮೋದ್ ಮಧ್ವರಾಜ್ ಬಡಾವಣೆ’ಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಮಕ್ಕಳಿಗೆ ತಪ್ಪದೇ ವಿದ್ಯಾಭ್ಯಾಸವನ್ನು ಕೊಡಿಸಬೇಕು, ಸಮಾಜ ಕಲ್ಯಾಣ ಇಲಾಖೆಯಿಂದ ₹50 ಲಕ್ಷ ವೆಚ್ಚದಲ್ಲಿ ಈ ಬಡಾವಣೆಯಲ್ಲಿ ರಸ್ತೆ ನಿರ್ಮಾಣ ಮಾಡಲಾಗುವುದು. ಇಲ್ಲಿನ ನಿವಾಸಿಗಳಿಗೆ ಬಿ.ಪಿ.ಎಲ್ ಕಾರ್ಡ್ ನೀಡುವ ಕುರಿತಂತೆ ಅಧಿಕಾರಿಗಳನ್ನು ಇಲ್ಲಿಗೆ ಕಳುಹಿಸಿ, ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಬೇಕು’ ಎಂದು ಜಿಲ್ಲಾಧಿಕಾರಿಗೆ ಅವರು ತಿಳಿಸಿದರು.
ಸರ್ಕಾರದ ವಸತಿ ಯೋಜನೆಗಳ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು, ಉಡುಪಿ ನಗರಸಭೆ ಆಶ್ರಯದಲ್ಲಿ, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ಸಹಕಾರದೊಂದಿಗೆ ಮತ್ತು ಸರ್ಕಾರೇತರ ಸಂಸ್ಥೆಗಳ ತಾಂತ್ರಿಕ ಸಹಕಾರದೊಂದಿಗೆ ನಿರ್ಮಾಣಗೊಂಡ ಈ ಬಡಾವಣೆಯಲ್ಲಿ ಸುಡುಗಾಡುಸಿದ್ದರು ಮತು ಬುಡ್ಗ ಜಂಗಮದವರಿಗೆ 29 ಮನೆಗಳನ್ನು ನಿರ್ಮಿಸಲಾಗಿದೆ.
ಉಡುಪಿ ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾದವ ಬನ್ನಂಜೆ, ಜಿಲ್ಲಾ ಪಂಚಾಯಿತಿ ಸದಸ್ಯ ಜನಾರ್ಧನ ತೋನ್ಸೆ, ನಗರಸಭೆ ಉಪಾಧ್ಯಕ್ಷೆ ಸಂಧ್ಯಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ಕಕ್ಕುಂಜೆ, ಕೊಡಂಕೂರು ವಾರ್ಡ್ ನಗರಸಭಾ ಸದಸ್ಯೆ ಜಾನಕಿ ಗಣಪತಿ ಶೆಟ್ಟಿಗಾರ್, ನಾರಾಯಣ ಕುಂದರ್, ಯುವರಾಜ್, ಶಾಂತಾರಾಮ್ ಸಲ್ವಾಂಕರ್, ನಾಮ ನಿರ್ದೇಶಿತ ಸದಸ್ಯ ಜನಾರ್ಧನ ಭಂಡಾರ್ಕರ್, ನಗರಸಭೆಯ ಪೌರಾಯುಕ್ತ ಮಂಜುನಾಥಯ್ಯ , ಪ್ರಶಾಂತ್ ಹಾವಂಜೆ , ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಗಣೇಶ್, ಸಮುದಾಯ ಸಂಘಟನಾಧಿಕಾರಿ ನಾರಾಯಣ, ಬಡಾವಣೆ ನಿರ್ಮಿಸಿದ ಕಿನ್ಪ್ರಾಟೆಕ್ ಸಂಸ್ಥೆಯ ಕಾರ್ತಿಕ್ ಶೆಟ್ಟಿ ಅಲೆವೂರು, ಫ್ಲಷ್ ಲಿವಿಂಗ್ ನ ಮೊಹಮ್ಮದ್ ಸೈಫ್ , ಸುಡುಗಾಡು ಸಿದ್ದರು ಮತು ಬುಡ್ಗ ಜಂಗಮ ಸಮುದಾಯದ ಮುಖಂಡರಾದ ರಾಮಯ್ಯ, ದುಗ್ಗಪ್ಪ, ಲಕ್ಷ್ಮಣ ಕರಿ, ಮರಿಸ್ವಾಮಿ ಗದಗ ಇದ್ದರು.
***
ಮಕ್ಕಳಿಗೆ ಶೀಘ್ರದಲ್ಲಿ ಅಂಗನವಾಡಿ ಸೌಲಭ್ಯವನ್ನು ಒದಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಈ ಜನಾಂಗದವರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.
ಪ್ರಿಯಾಂಕ್ ಮೇರಿ ಫ್ರಾನ್ಸಿಸ್, ಜಿಲ್ಲಾಧಿಕಾರಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.