ಉಡುಪಿ: ಸರ್ಕಾರದ ಎಲ್ಲ ಸೇವೆಗಳು ಒಂದೇ ಸೂರಿನಡಿ ಉಚಿತವಾಗಿ ಸಿಗಬೇಕು ಎಂಬ ಕಾರಣಕ್ಕೆ ಕರ್ನಾಟಕ ಒನ್ ಕೇಂದ್ರವನ್ನು ಆರಂಭಿಸಲಾಗಿದೆ ಎಂದು ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಉಡುಪಿಯ ಕುಕ್ಕಿಕಟ್ಟೆಯಲ್ಲಿ ಆರಂಭಿಸಿರುವ ಕರ್ನಾಟಕ ಒನ್ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ಸಾರ್ವಜನಿಕರು ಸರ್ಕಾರದ ವಿವಿಧ ಸೇವೆಗಳನ್ನು ಪಡೆಯಲು, ಕಚೇರಿಯಿಂದ ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಎಲ್ಲಾ ಸೇವೆಗಳು ಒಂದೇ ಕಟ್ಟಡದಲ್ಲಿ ಉಚಿತವಾಗಿ ಸಿಕ್ಕರೆ ಇನ್ನಷ್ಟು ಅನುಕೂಲವಾಗಲಿದೆ ಎಂಬುದು ಕರ್ನಾಟಕ ಒನ್ ಹಿಂದಿನ ರಿಕಲ್ಪನೆ ಎಂದರು.
ಪ್ರಸ್ತುತ ಜಿಲ್ಲೆಯಲ್ಲಿ ಒಂದು ಕೇಂದ್ರವನ್ನು ಮಾತ್ರ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ನಾಲ್ಕು ಕಡೆ ಈ ಕೇಂದ್ರಗಳನ್ನು ತೆರೆಯಲಾಗುತ್ತದೆ ಎಂದು ಅವರು ಹೇಳಿದರು.
ಹಲವಾರು ಸೇವೆಗಳು ಕರ್ನಾಟಕ ಒನ್ ಯೋಜನೆಯಲ್ಲಿ ಸಿಗಲಿವೆ. ವಿದ್ಯುತ್ ಬಿಲ್ ಪಾವತಿ, ನಗರ ಸಭೆ ನೀರಿನ ಶುಲ್ಕ, ಮನೆ ತೆರಿಗೆ, ಅಕ್ರಮ ಸಕ್ರಮ 94ಸಿಸಿ ಅರ್ಜಿಗಳ ಸಲ್ಲಿಕೆ, ಪೊಲೀಸ್ ಪರಿಶೀಲನೆ, ನರ್ಮ್ ಬಸ್ ಪಾಸ್ಗಳು, ಪರಿಶಿಷ್ಟ ಜಾತಿ– ಪಂಗಡದ ವಿದ್ಯಾರ್ಥಿಗಳಿಗೆ ನರ್ಮ್ ಬಸ್ನಲ್ಲಿ ಉಚಿತ ಪ್ರಯಾಣ ಪಾಸ್, ಬಿಎಸ್ಎನ್ಎಲ್ ಶುಲ್ಕ ಪಾವತಿಗೂ ಅವಕಾಶ ಇದೆ.
ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಿವಾನಂದ
ಕಾಪಶಿ, ನಗರಸಭೆ ಸದಸ್ಯ ಶಾಂತರಾಮ್ ಸಾಲ್ವಂಕರ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.