ADVERTISEMENT

ಘನತ್ಯಾಜ್ಯ ನಿರ್ವಹಣೆಗೆ ಪೈಪ್‌ ಕಾಂಪೋಸ್ಟ್‌

​ಪ್ರಜಾವಾಣಿ ವಾರ್ತೆ
Published 23 ಮೇ 2017, 6:05 IST
Last Updated 23 ಮೇ 2017, 6:05 IST
ಶನಿವಾರ ಸಂತೆಕಟ್ಟೆ ನೇಜಾರಿನಲ ಶನಿವಾರ ಏರ್ಪಡಿಸಿದ್ದ ‘ಮನೆ ಪರಿಸರದಲ್ಲಿ ಸ್ವಚ್ಛತಾ ಅಭಿಯಾನ ಸ್ವಚ್ಛತೆಯೊಂದಿಗೆ ಅನುಸಂಧಾನ’ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಗಿಡಕ್ಕೆ ಪೈಪ್‌ ಕಾಂಪೋಸ್ಟ್‌ ಗೊಬ್ಬರ ಹಾಕುವ ಮೂಲಕ ಉದ್ಘಾಟಿಸಿದರು.
ಶನಿವಾರ ಸಂತೆಕಟ್ಟೆ ನೇಜಾರಿನಲ ಶನಿವಾರ ಏರ್ಪಡಿಸಿದ್ದ ‘ಮನೆ ಪರಿಸರದಲ್ಲಿ ಸ್ವಚ್ಛತಾ ಅಭಿಯಾನ ಸ್ವಚ್ಛತೆಯೊಂದಿಗೆ ಅನುಸಂಧಾನ’ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಗಿಡಕ್ಕೆ ಪೈಪ್‌ ಕಾಂಪೋಸ್ಟ್‌ ಗೊಬ್ಬರ ಹಾಕುವ ಮೂಲಕ ಉದ್ಘಾಟಿಸಿದರು.   

ಉಡುಪಿ:  ಮನೆಗಳಲ್ಲಿ ಉತ್ಪತ್ತಿಯಾಗುವ ಜೈವಿಕ ತ್ಯಾಜ್ಯವನ್ನು ಮೂಲದಲ್ಲೇ ವಿಂಗಡಿಸಿ ವಿಲೇವಾರಿ ಮಾಡಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಘನತ್ಯಾಜ್ಯ ನಿರ್ವಹಣೆಯ ಸಮಸ್ಯೆ ಎದುರಾಗದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು.

ಜೇಸಿಐ ಕಲ್ಯಾಣಪುರದ ಆಶ್ರಯದಲ್ಲಿ ಸಂತೆಕಟ್ಟೆ ನೇಜಾರಿನಲ್ಲಿ ಶನಿವಾರ ನಡೆದ ಮನೆ ಪರಿಸರದಲ್ಲಿ ಸ್ವಚ್ಛತಾ ಅಭಿಯಾನ ಸ್ವಚ್ಛತೆಯೊಂದಿಗೆ ಅನುಸಂಧಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ದುರ್ವಾಸನೆಯ ಕಾರಣದಿಂದ ಪ್ರಸ್ತುತ ಹೆಚ್ಚಿನ ಪಂಚಾಯಿತಿಗಳಲ್ಲಿ ದೊಡ್ಡ ಸಂಸ್ಕರಣ ಘಟಕ ಸ್ಥಾಪನೆಗೆ ವಿರೋಧ ವ್ಯಕ್ತವಾಗುತ್ತದೆ.

ಆದರೆ, ಮನೆಯ ಕಸವನ್ನು ಪೈಪ್‌ನಲ್ಲಿ ಹಾಕಿ ಕಾಂಪೋಸ್ಟ್‌ ಮಾಡುವುದರಿಂದ ವಾಸನೆ ಬರುವುದಿಲ್ಲ. ಮಾತ್ರವಲ್ಲ ಅದರಲ್ಲಿ ಸಿಗುವ ಹೆಚ್ಚುವರಿ ಗೊಬ್ಬರವನ್ನು ಮಾರಾಟ ಮಾಡಿ ಆದಾಯವನ್ನೂ ಗಳಿಸಬಹುದು ಎಂದು ಸಲಹೆ ನೀಡಿದರು.

ADVERTISEMENT

ಫಲಾನುಭವಿಗಳಿಗೆ ಕಾಂಪೋಸ್ಟ್‌ ವಿತರಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್‌, ಬಹುತೇಕ ಎಲ್ಲಾ ಕಡೆಗಳಲ್ಲಿ ತ್ಯಾಜ್ಯ ವಿಲೇವಾರಿ ಗಂಭೀರ ಸಮಸ್ಯೆಯಾಗಿದೆ. ಎಲ್ಲೆಂದರಲ್ಲಿ ಕಸ ಬಿಸಾಡುವುದರಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪರಿಸರ ಸಂರಕ್ಷಣೆಗೆ ಹಲವು ಕಾಯ್ದೆಗಳಿದ್ದರೂ, ನಿರೀಕ್ಷಿತ ಮಟ್ಟದಲ್ಲಿ ಪರಿಸರ ರಕ್ಷಣೆ ಆಗುತ್ತಿಲ್ಲ ಎಂದರು.

ಜನರು ಹಸಿ ತ್ಯಾಜ್ಯ, ಒಣ ತ್ಯಾಜ್ಯ ಮತ್ತು ಅಪಾಯಕಾರಿ ತ್ಯಾಜ್ಯವನ್ನು ಒಟ್ಟು ಮಾಡುವುದರಿಂದ ಪಂಚಾಯಿತಿಗಳಿಗೆ ಅದನ್ನು ವಿಭಜಿಸಲು ಕಷ್ಟವಾಗುತ್ತಿದೆ. ಆದ್ದರಿಂದ ಹಸಿ ತ್ಯಾಜ್ಯವನ್ನು ಮನೆಯಲ್ಲೇ ವಿಂಗಡಿಸಿದರೆ, ಒಣ ಕಸವನ್ನು ಸುಲಭವಾಗಿ ವಿಗಂಡಿಸಬಹುದು. ಮನೆಗಳಲ್ಲಿ ಕಸ ವಿಲೇವಾರಿ ಮಾಡಲು ಆರಂಭಿಸಿದರೆ ಸ್ವಚ್ಛ ಭಾರತದ ಯೋಜನೆ ಅನಾಯಾಸವಾಗಿ ಅನುಷ್ಠಾನವಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷೆ ವೆರೋನಿಕ ಕರ್ನೇಲಿಯೊ ಕಾಂಪೋಸ್ಟ್‌ ಪೈಪ್‌ ಘಟಕಕ್ಕೆ ಚಾಲನೆ ನೀಡಿದರು. ಜೇಸಿಐ ಕಲ್ಯಾಣಪುರದ ಅಧ್ಯಕ್ಷ ಪ್ರಶಾಂತ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಜಯಕರ ಸುವರ್ಣ, ಸ್ವಚ್ಛ ಭಾರತ ಅಭಿಯಾನದ ಜಿಲ್ಲಾ ಸಂಯೋಜಕ ಸುಧೀರ್‌, ಕಲ್ಯಾಣಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ಕೋಟ್ಯಾನ್‌, ಸದಸ್ಯ ನಾಗರಾಜ್‌, ಮಾಹಿ ಅಧ್ಯಕ್ಷ ಸತೀಶ್‌ ನಾಯ್ಕ್‌, ನಗರಸಭೆ ಸದಸ್ಯ ಚಂದ್ರಕಾಂತ, ಜೇಸಿಐ ಕಾರ್ಯದರ್ಶಿ ನಿತ್ಯಾನಂದ, ಜೇಸಿರೆಟ್‌ ಅಧ್ಯಕ್ಷೆ ದೇವಿಕಾ ಪ್ರಶಾಂತ್‌ ಉಪಸ್ಥಿತರಿದ್ದರು. ಕಾರ್ಯಕ್ರಮ ನಿರ್ದೇಶಕ ಜಿ.ಎಂ. ಜೋಸೆಫ್‌ ರೆಬೆಲ್ಲೊ ಪ್ರಾಸ್ತಾವಿಕವಾಗಿ ಮಾತನಾಡಿದರು.

* * 

ಹಸಿ ಕಸವನ್ನು ಮನೆಯ ಪಕ್ಕದಲ್ಲೇ ಪೈಪ್‌ ಕಾಂಪೋಸ್ಟ್‌ ಮಾಡುವ ಮೂಲಕ ವಿಲೇವಾರಿ ಮಾಡಿದರೆ,  ದೊಡ್ಡ ಸಂಸ್ಕರಣ ಘಟಕ ಮಾಡಬೇಕಾದ ಅವಶ್ಯಕತೆ ಇಲ್ಲ.
ಪ್ರಿಯಾಂಕ ಮೇರಿ ಫ್ರಾನ್ಸಿಸ್‌,
ಜಿಲ್ಲಾಧಿಕಾರಿ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.