ADVERTISEMENT

ಚಾವಣಿ ಕುಸಿತ: ವಿದ್ಯಾರ್ಥಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2017, 7:20 IST
Last Updated 23 ಜುಲೈ 2017, 7:20 IST

ಬೈಂದೂರು :  ಕಾಲ್ತೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಪ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಚಾವಣಿ ಬುಧವಾರ ರಾತ್ರಿ ಬೀಸಿದ ಗಾಳಿಯಿಂದಾಗಿ ಕುಸಿದ ಕಾರಣ ತರಗತಿಗಳನ್ನು ಸ್ಥಗಿತಗೊಳಿಸಲಾಯಿತು.  ಬದಲಿ ವ್ಯವಸ್ಥೆಯಿಲ್ಲದೆ ಅತಂತ್ರರಾದ ವಿದ್ಯಾರ್ಥಿಗಳು ಶಾಲೆಯ ಮುಂದೆ ಪ್ರತಿಭಟನೆ ನಡೆಸಿದರೆ, ಅಸುರಕ್ಷಿತ ಕಟ್ಟಡಕ್ಕೆ ಮಕ್ಕಳನ್ನು ಕಳುಹಿಸುವುದಿಲ್ಲ ಎಂದು ಪೋಷಕರು ಪಟ್ಟು ಹಿಡಿದಿರುವರು. 

ಇಲ್ಲಿನ ಏಳು ತರಗತಿಗಳನ್ನು ಎರಡು ಕೊಠಡಿಗಳಲ್ಲಿ ಮತ್ತು ಹತ್ತಿರದ ದೇವಾಲಯದಲ್ಲಿ ನಡೆಸಲಾಗುತ್ತಿದೆ. ಶಾಲೆಯ ಎರಡೂ ಕೊಠಡಿಗಳು ಸಂಪೂರ್ಣ ದುಸ್ಥಿತಿಯಲ್ಲಿವೆ.  ಕಳೆದ ನಾಲ್ಕೈದು ವರ್ಷಗಳಿಂದ ಶಾಲಾ ಕಟ್ಟಡಕ್ಕಾಗಿ ಪೋಷಕರು, ಹಳೆವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ನಿರಂತರವಾಗಿ ಹೋರಾಟ ನಡೆಸುತ್ತಲೇ ಬಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ಇದರಿಂದ  ಷೋಷಕರು ಆಕ್ರೋಶಗೊಂಡಿದ್ದಾರೆ. ತಾತ್ಕಾಲಿಕ ಕಟ್ಟಡ ನಿರ್ಮಿಸಿದ ಹೊರತು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಅವರು ಪಟ್ಟು ಹಿಡಿದಿದ್ದಾರೆ. ಹೆಂಚು ರಾತ್ರಿ ವೇಳೆಯಲ್ಲಿ ಬೀಳುವ ಬದಲು ಹಗಲು ಬಿದ್ದಿದ್ದರೆ ಮಕ್ಕಳಿಗೆ ಅಪಾಯ ಸಂಭವಿಸುತ್ತಿತ್ತು ಎಂಬ ಆತಂಕ ತೋಡಿಕೊಳ್ಳುತ್ತಿದ್ದಾರೆ.

ADVERTISEMENT

ಪೋಷಕರು, ಮಕ್ಕಳ ಧರಣಿ : ಶಾಲೆಯ ಅವ್ಯವಸ್ಥೆಯ ಬಗ್ಗೆ ಸಾಕಷ್ಟು ಭಾರಿ ಇಲಾಖೆ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಈವರೆಗೆ ಶಾಲೆಯ ದುಸ್ಥಿತಿ ಮುಂದುವರಿದಿದೆ ಎಂದು ದೂರಿದ ಪೋಷಕರು ಮಕ್ಕಳೊಡನೆ ಸೇರಿ ಗುರುವಾರ ಶಾಲೆಯ ಮುಂದೆ ಧರಣಿ ನಡೆಸಿದರು.

ಸುದ್ದಿ ತಿಳಿದು ಸ್ಥಳಕ್ಕೆ ಬಂದ ಇಲಾಖೆಯ ಉಪನಿರ್ದೇಶಕ ದಿವಾಕರ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಒ. ಆರ್. ಪ್ರಕಾಶ್, ತಾಲೂಕು ಅಕ್ಷರದಾಸೋಹ ಅಧಿಕಾರಿ ಸೀತಾರಾಮ ಶೆಟ್ಟಿ ಹಾಗೂ ಸಿಆರ್‌ಪಿ ಶ್ರೀಕಾಂತ್ ಕಾಮತ್ ಅವರನ್ನು ಪೋಷಕರು ತೀವ್ರತರಾಟೆಗೆ ತೆಗೆದುಕೊಂಡರು. 

ಸದ್ಯಕ್ಕೆ ತಾತ್ಕಾಲಿಕ ಶೆಡ್‌ ನಿರ್ಮಿಸಿಕೊಡುವ ಭರವಸೆ ಅಧಿಕಾರಿಗಳಿಂದ ಬಂದಿತಾದರೂ  ಪಾಲಕರು ಅದಾಗುವ ತನಕ ತನಕ ಮಕ್ಕಳನ್ನು ಶಾಲೆಗೆ ಕಳುಹಿಸದಿರುವ ನಿರ್ಧಾರ ತಳೆದಿರುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.