ADVERTISEMENT

‘ಡಿಸೆಂಬರ್‌ ಅಂತ್ಯಕ್ಕೆ ಅಧ್ಯಯನ ಪೂರ್ಣ’

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2017, 5:32 IST
Last Updated 4 ಡಿಸೆಂಬರ್ 2017, 5:32 IST

ಉಡುಪಿ: ‘ಮಲೆಕುಡಿಯ ಸಮುದಾಯ ಸೇರಿದಂತೆ ಒಟ್ಟು 10 ತಳ ಸಮುದಾಯದ ಅಧ್ಯಯನ ಡಿಸೆಂಬರ್‌ ಅಂತ್ಯಕ್ಕೆ ಪೂರ್ಣವಾಗಲಿದೆ’ ಎಂದು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಎಸ್‌ ಜಾಫೆಟ್‌ ತಿಳಿಸಿದರು.

ರಾಷ್ಟ್ರೀಯ ಕಾನೂನು ಶಾಲೆ ಬೆಂಗಳೂರು, ತಳ ಸಮುದಾಯಗಳ ಅಧ್ಯಯನ ಕೇಂದ್ರ ಮತ್ತು ಮಲೆಕುಡಿಯ ಸಂಘ–ಸಹಯೋದಲ್ಲಿ ಭಾನುವಾರ ಆಯೋಜಿಸಿದ್ದ ಮಲೆಕುಡಿಯ ಸಮುದಾಯ ರಾಜ್ಯ ಮಟ್ಟದ ಸಂಶೋಧನಾ ಸಮಾಲೋಚನಾ ಸಭೆಯನ್ನು ಉದ್ದೇಶಿ ಮಾತನಾಡಿದರು.

ತಳ ಸಮುದಾಯದ ಬಗ್ಗೆ ಬೇರೆ ಬೇರೆ ಅಧ್ಯಯನಗಳು ಆಗಿವೆ, ಅದು ಎಲ್ಲೋ ಗೆದ್ದಲು ಹಿಡಿದುಕೊಂಡು ಕೂತಿವೆ. ತಳಸಮುದಾಯದವರ ಮೂಲಕವೇ ಈ ಬಾರಿ ಅಧ್ಯಯನ ನಡೆಸುತ್ತಿರುವುದರಿಂದ ಜನರ ಸಮಸ್ಯೆ ಹಾಗೂ ಅವರ ಜೀವನ ಶೈಲಿಯನ್ನು ಅರಿತುಕೊಳ್ಳಲು ಸಹಾಯಕವಾಗಿದೆ ಹೇಳಿದರು.

ADVERTISEMENT

ಮಲೆಕುಡಿಯ ಹಾಗೂ ತಳ ಸಮುದಾಯದವರ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಮ್ಮಲಿರುವ ಸಂಪತ್ತನ್ನು ಶೇ 20 ಶ್ರೀಮಂತರು ಶೇ 80ರಷ್ಟು ಬಡಜನರ ಸಂಪತ್ತು ಕಬಳಿಸಿಕೊಂಡಿದ್ದಾರೆ. ಶ್ರೀಮಂತರು ಮತ್ತು ಬಡವರ ಅಂತರ ದಿನೇ ದಿನೇ ಜಾಸ್ತಿಯಾಗುತ್ತಿದೆ ಎಂದರು.

ಕಾರ್ಕಳದ ವಿಶ್ವನಾಥ್‌ ಈದು ಮಾತನಾಡಿ ‘ಸರ್ಕಾರ 2007ರಲ್ಲಿ ಅರಣ್ಯ ಹಕ್ಕು ಕಾಯ್ದೆ ಅಡ್ಡಿಯಲ್ಲಿ ನೀಡಿದ ಹಕ್ಕು ಪತ್ರದಲ್ಲಿ ಎಲ್ಲಾ ರೀತಿಯಾದ ಮೂಲಭೂತ ಸೌಕರ್ಯ ಪಡೆಯಲು ಅರ್ಹರು ಎಂದೂ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೂ ಕೃಷಿಗೆ ಬ್ಯಾಂಕ್‌ಗಳು ಸಾಲ ನೀಡಲು ಹಿಂದೇಟು ಹಾಕುತ್ತಿದೆ.

ಬೇಸಾಯಕ್ಕೆ ತೊಡಕಾಗಿರುವ ಮರದ ಕೊಂಬೆಗಳನ್ನು ಕಡಿಯಲು ಮುಂದಾದರೆ, ಅರಣ್ಯ ಇಲಾಖೆ ಅಧಿಕಾರಿಗಳು ನಿರಂತರವಾಗಿ ನಮ್ಮ ಮೇಲೆ ದೌಜನ್ಯ ನಡೆಸುತ್ತಿದ್ದಾರೆ. ಹೀಗಾದರೇ ನಮ್ಮ ಸಮುದಾಯ ಅಭಿವೃದ್ಧಿಯಾಗುವುದಾರೂ ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಬೇಸಾಯ ಮಾಡಲು ಜಾಗದ ಹಕ್ಕು ಪತ್ರವನ್ನು ಇಟ್ಟುಕೊಂಡು ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸಬೇಕು. ಮಲೆಕುಡಿಯ ಮೋಸ ಮಾಡುವ ಜನಾಂಗವಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅಪಾರ ಜಿಲ್ಲಾಧಿಕಾರಿ ಜಿ. ಅನುರಾಧ, ರಾಜ್ಯ ಮಲೆ ಕುಡಿಯ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ್‌ ಗೌಡ ಈದು, ತಳ ಸಮುದಾಯಗಳ ಅಧ್ಯಯನ ಕೇಂದ್ರ ಸಂಶೋಧನಾ ಸಲಹೆಗಾರ ಡಾ. ಆರ್‌.ವಿ ಚಂದ್ರಶೇಖರ್‌, ಸಮಗ್ರ ಗ್ರಾಮೀಣ ಸಂಯೋಜಕ ಉಡುಪಿ ಅಶೋಕ್‌, ಕುಡುಗು ಮಲೆ ಕುಡಿ ಸಮುದಾಯದ ಅಧ್ಯಕ್ಷ ಸುಧಾಕರ್‌ ಉಪಸ್ಥಿತರಿದ್ದರು.

‘ಜಯ ಖಚಿತವಾಗಿ ಸಿಗುತ್ತದೆ’
ಸಂವಿಧಾನ ಶಿಲ್ಪಿ ಡಾ.ಬಿ.ಆರ್‌ ಅಂಬೇಡ್ಕರ್‌ ಹೇಳಿದಂತೆ ನಮ್ಮ ಸಮಸ್ಯೆಗಳಿಗೆ ಶಿಕ್ಷಣ, ಸಂಘಟನೆಗಳ ಹೋರಾಟದಿಂದ ಪರಿಹಾರ ಕಂಡುಕೊಳ್ಳ ಬೇಕು. ಆದರೆ ನಮ್ಮ ಹೋರಾಟ ಪ್ರಜಾಪ್ರಭುತ್ವದ ಕಾನೂನಿನ ಚೌಕಟ್ಟಿನಲ್ಲೇ ನಡೆಯ ಬೇಕಾಗಿದೆ. ನಿಮ್ಮಗೆ ಇವತ್ತಲ್ಲ ನಾಳೆ ಜಯ ಸಿಗುತ್ತದೆ ಎಂದು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಎಸ್‌ ಜಾಫೆಟ್‌ ತಿಳಿಸಿದರು.

* * 

‘ಮಲೆ ಕುಡಿಯ ಹಾಗೂ ತಳ ಸಮುದಾಯದ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗುತ್ತಿದ್ದರೂ, ಅಭಿವೃದ್ಧಿ ಮಾತ್ರ ಶೂನ್ಯ’.
ವಿಶ್ವನಾಥ್‌ ಈದು, ಕಾರ್ಕಳ ನಿವಾಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.