ADVERTISEMENT

ದೀಪೋತ್ಸವ ಜ್ಞಾನ ಸಂಪಾದನೆಯ ಸಂಕೇತ: ವಿದ್ಯಾಸಾಗರ ತೀರ್ಥ ಶ್ರೀ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2017, 7:18 IST
Last Updated 19 ನವೆಂಬರ್ 2017, 7:18 IST

ಉಪ್ಪೂರು (ಬ್ರಹ್ಮಾವರ): ದೀಪೋತ್ಸವವು ಜ್ಞಾನ ಸಂಪಾದನೆಯ ಸಂಕೇತವಾಗಿದ್ದು, ಅಜ್ಞಾನವನ್ನು ದೂರ ಮಾಡಿ ಜ್ಞಾನದತ್ತ ಕೊಂಡೊಯ್ಯುತ್ತದೆ ಎಂದು ಉಡುಪಿ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಹೇಳಿದರು.

ಉಪ್ಪೂರು ಮಹತೋಭಾರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಬುಧವಾರ ದೀಪೋತ್ಸವ ಹಾಗೂ ರಥೋತ್ಸವದ ಸಂದರ್ಭ ನಡೆದ ಧಾರ್ಮಿಕ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಮಾತನಾಡಿ, ‘ಯುವ ಪೀಳಿಗೆ ಕಾರ್ಯದಕ್ಷತೆ, ಉತ್ತಮ ಚಾರಿತ್ರ್ಯ, ನಿಷ್ಟತೆ ಹೊಂದಿದರೆ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಏರಲು ಸಾಧ್ಯ ಹಾಗೂ ಭ್ರಷ್ಟಾಚಾರವನ್ನು ಹೋಗಲಾಡಿಸಲು ಜನರ ಸಹಕಾರ ಅತ್ಯಗತ್ಯ’ ಎಂದರು. ಉದ್ಯಮಿ ಭುವನೇಂದ್ರ ಕಿದಿಯೂರು, ಜಿಲ್ಲಾ ಪಂಚಾಯಿತಿ ಸದಸ್ಯ ಜನಾರ್ದನ ತೋನ್ಸೆ, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ಉಪ್ಪೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆರತಿ ಉಪಸ್ಥಿತರಿದ್ದರು.

ADVERTISEMENT

ಸಾಧಕರಾದ ಶಿಕ್ಷಕಿ ಅಹಲ್ಯಾ ರಮಾನಂದ ರಾವ್, ಶಿಕ್ಷಕಿ ಸಬಿತಾ ರತ್ನಾಕರ್, ವಿಶ್ವನಾಥ ಆಚಾರ್ಯ, ಕ್ರೀಡಾ ಸಾಧಕರು ಹಾಗೂ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಟಿ. ಜೆ. ಮೆಂಡನ್ ಸ್ವಾಗತಿಸಿದರು. ಸದಸ್ಯ ಯು.ಎಲ್.ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದಪ್ಪ ವಂದಿಸಿದರು. ಕರುಣಾಕರ ರಾವ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.