ADVERTISEMENT

ದೇಸಿ ತಂತ್ರಜ್ಞಾನ, ನೆಲೆಯ ಕಲಾಕೃತಿ ನಿರ್ಮಾಣವಾಗಲಿ: ಜನಾರ್ದನ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 5:08 IST
Last Updated 24 ಮಾರ್ಚ್ 2017, 5:08 IST

ಉಡುಪಿ: ಪ್ರಸ್ತುತ ಕಾರ್ಖಾನೆಯಲ್ಲಿ ತಯಾರಾದ ಹಾಗೆ ಕಲಾಕೃತಿಗಳು ನಿರ್ಮಾಣವಾಗುತ್ತಿವೆ, ದೇಸಿ ತಂತ್ರಜ್ಞಾನ ಹಾಗೂ ನೆಲೆ ಬಳಸಿ ಏಕೆ ಕಲಾಕೃತಿಗಳನ್ನು ನಿರ್ಮಾಣ ಮಾಡಬಾರದು ಎಂದು ಭಾವನಾ ಪ್ರತಿಷ್ಠಾನದ ಜನಾರ್ದನ ಹಾವಂಜೆ ಪ್ರಶ್ನಿಸಿದರು.

ಜಂಗಮ ಮಠದ ಚಿತ್ರಕಲಾ ಮಂದಿರದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಕಲಾ ವಿದ್ಯಾರ್ಥಿಗಳ ವಾರ್ಷಿಕ ಕಲಾ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನೀವು ನಿಮ್ಮ ಕಲಾಕೃತಿಯಲ್ಲಿ ಹೇಗೆ ಹೊರ ಬರುತ್ತೀರ ಎಂಬುದು ಮುಖ್ಯವಾಗುತ್ತದೆ.

ಕ್ವಾನ್ವಸ್‌ನಲ್ಲಿ ಚಿತ್ರಬಿಡಿಸಿದ ಮಾತ್ರಕ್ಕೆ ಯಾರೂ ಕಲಾವಿದರಾಗು ವುದಿಲ್ಲ, ಆ ಮಾಧ್ಯಮವನ್ನು ನಿಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ಬಳಸಿಕೊಂಡಾಗ ನಿಜವಾದ ಕಲಾಕೃತಿ ನಿರ್ಮಾಣವಾಗುತ್ತದೆ ಎಂದರು.

ಯಾವುದೇ ಕಾರಣಕ್ಕೂ ಸ್ವಂತಿಕೆಯನ್ನು ಬಿಡಬೇಡಿ, ವಾಣಿಜ್ಯ ಉದ್ದೇಶಕ್ಕಾಗಿ ಕೆಲಸ, ವೈಯಕ್ತಿಕ ಕೆಲಸದ ಮಧ್ಯೆ ನಿಮ್ಮ ಕಲಾಕೃತಿಗಾಗಿ ಕನಿಷ್ಠ ಒಂದು ಗಂಟೆಯನ್ನಾದರೂ ಮೀಸಲಿಡಿ, ಆಗ ಈ ಕ್ಷೇತ್ರದಲ್ಲಿ ನೀವು ಬೆಳೆಯಲು ಸಾಧ್ಯವಾಗುತ್ತದೆ. ಕಲಾ ವಿದ್ಯಾರ್ಥಿಗ ಳಾಗಿರುವ ನೀವು ಕಾಲೇಜಿನಿಂದ ಹೊರ ಬಂದ ನಂತರ ಎರಡು– ಮೂರು ವರ್ಷದಲ್ಲಿ ನಿಜವಾದ ಕಲಾವಿದರಾ ಗುತ್ತೀರ ಎಂದು ಅವರು ಹೇಳಿದರು.

ಮಣಿಪಾಲದ ಪಿಯುಎಸ್‌ ಪ್ರಾಡಕ್ಟ್‌ನ ಸತೀಶ್ ಚಂದ್ರ ಮಾತನಾಡಿ, ಕಲಾವಿದ ವಿಶೇಷ ತಳಿಯಾಗಿದ್ದು ಸದ್ಯ ಕಲಾವಿದರ ಸಂಖ್ಯೆ ತುಂಬಾ ಕಡಿಮೆ ಇದೆ. ಕಲೆಗೆ ಪ್ರೋತ್ಸಾಹವೂ ನಿರೀಕ್ಷೆಯ ಮಟ್ಟದಲ್ಲಿ ಸಿಗುತ್ತಿಲ್ಲ ಮತ್ತು ಕಲಾ ಗ್ಯಾಲರಿಗಳ ಸಂಖ್ಯೆಯೂ ಕಡಿಮೆ ಇದೆ. ಮಣಿಪಾಲದಲ್ಲಿ ಆರ್ಟ್‌ ಅಂಡ್‌ ಕ್ರಾಫ್ಟ್‌ ಗ್ಯಾಲರಿ ಮಾಡಿ ಕಲಾವಿದರಿಗೆ ಕೆಲಸ ನೀಡಲು ಹಾಗೂ ಕಲಾಕೃತಿಗಳ ಪ್ರದರ್ಶನಕ್ಕೆ ಅವಕಾಶ ನೀಡಲು ಪ್ರಯತ್ನಿಸಲಾಗುವುದು ಎಂದರು.

ಕಲಾವಿದೆ ಪವನ ಆಚಾರ್ಯ, ಚಿತ್ರಕಲಾ ಮಂದಿರದ ಪ್ರಾಂಶುಪಾಲ ರಾಜೇಂದ್ರ ತ್ರಾಸಿ ಉಪಸ್ಥಿತರಿದ್ದರು. ಇದೇ 30ರ ವರೆಗೆ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯ ವರೆಗೆ ಕಲಾಕೃತಿಗಳ ಪ್ರದರ್ಶನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT