ಕಾರ್ಕಳ: ಗಿಡಗಳನ್ನು ನೆಟ್ಟು, ನೀರು ಆಹಾರವನ್ನು ಪಕ್ಷಿಗಳಿಗೆ ಇಟ್ಟು ಮಾನವೀಯತೆ ಮೆರೆಯಬೇಕು ಎಂದು ನಿತ್ಯಾನಂದ ಶೆಟ್ಟಿ ಬದ್ಯಾರು ಹೇಳಿದರು.
ಕೆನರಾ ಬ್ಯಾಂಕ್ ಪ್ರಾಯೋಜಿತ ತಾಲ್ಲೂಕಿನ ಮಿಯ್ಯಾರು ಸಿ.ಇ ಕಾಮತ್ ಕುಶಲಕರ್ಮಿಗಳ ತರಬೇತಿ ಸಂಸ್ಥೆಯಲ್ಲಿ ಅಳಿವಿನಂಚಿನಲ್ಲಿರುವ ಪಕ್ಷಿಸಂಕುಲಗಳ ಉಳಿವಿಗೆ ಸಸ್ಯರಾಶಿಗಳ ಮಹತ್ವ ಜಾಗೃತಿ ಕಾರ್ಯಾಗಾರ ‘ಗುಬ್ಬಚ್ಚಿ ಗೂಡು’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಹಚ್ಚ ಹಸಿರಾಗಿದ್ದ ಕಾಡನ್ನು ಕಡಿದು ಕಾಂಕ್ರೀಟ್ ಕಾಡು ನೆಲೆಯೂರಿ, ಪಕ್ಷಿಗಳು ನೀರು, ಆಹಾರ ಸಿಗದೆ ತಮ್ಮ ಆವಾಸ ಸ್ಥಾನವನ್ನು ಬದಲಾಯಿಸುತ್ತವೆ. ಇದನ್ನು ತಪ್ಪಿಸಿ ಪಕ್ಷಿ, ಪತಂಗಗಳು ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಇರುವಂತೆ ಮಾಡಬೇಕಾಗಿದೆ. ಇಲ್ಲದಿದ್ದರೆ ಪಕ್ಷಿ ಸಂಕುಲ, ಸಸ್ಯರಾಶಿ ವಿನಾಶದಂಚಿಗೆ ಹೋಗುತ್ತವೆ ಎಂದು ಅವರು ಕಾರ್ಯಾಗರದಲ್ಲಿ ಹೇಳಿದರು.
ಮತ್ತೊಬ್ಬ ಸಂಪನ್ಮೂಲ ವ್ಯಕ್ತಿ ರಮ್ಯಾ ಮಾತನಾಡಿ, ಈ ಪರಿಸರವನ್ನು ಹಚ್ಚ ಹಸಿರಿನಿಂದ ಶೋಭಿಸುವಂತೆ ಮಾಡುವುದು ಬುದ್ಧಿವಂತ ಜೀವಿಯೆನಿಸಿದ ಮಾನವನ ಕರ್ತವ್ಯವಾಗಿದೆ. ‘ಎಲ್ಲರೂ ಪರಿಸರ ಪ್ರೇಮಿಗಳಾಗಬೇಕು’ ಎಂಬ ಸಂದೇಶವನ್ನು ಅವರು ಕಾರ್ಯಕ್ರಮದಲ್ಲಿ ತಿಳಿಸಿದರು.
ಶಿಕ್ಷಕರಾದ ಹರೀಶ್ ನಾಯಕ್ ಮತ್ತು ನಾಗೇಶ್ ಆಚಾರ್ಯ ಇದ್ದರು. ಮಣ್ಣಿನ ಗೂಡು ಜತೆಗೆ ಪಕ್ಷಿಗಳಿಗೆ ನೀರಿಡುವ ಸಾಮಾಗ್ರಿಗಳನ್ನು ಉಚಿತವಾಗಿ ನೀಡಿ ಪ್ರಾತ್ಯಕ್ಷಿಕೆ ನಡೆಸಲಾಯಿತು.
ಶಿಕ್ಷಕ ಗುಣವಂತೇಶ್ವರ ಭಟ್ ಪ್ರಾಸ್ತಾವಿಕ ಮಾತನಾಡಿದರು.ಸಂಸ್ಥೆಯ ನಿರ್ದೇಶಕ ಸುರೇಂದ್ರ ಕಾಮತ್ ನಿರೂಪಿಸಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.