ಉಡುಪಿ: ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಪತ್ನಿ ಮತ್ತು ತಾಯಿ ಭೇಟಿಯಾಗಲು ಹೋಗಿದ್ದಾಗ ಪಾಕಿಸ್ತಾನದ ಅಧಿಕಾರಿಗಳು ತಾಳಿ ಬಿಚ್ಚಿಸಿ ಅಪಮಾನಿಸಿರುವುದನ್ನು ಖಂಡಿಸಿ ಬಜರಂಗದಳ, ವಿಶ್ವ ಹಿಂದೂ ಪರಿಷತ್ ಹಾಗೂ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಿದ ಹೋರಾಟಗಾರರು ಆ ದೇಶದ ಧ್ವಜ ಸುಟ್ಟು ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಅಮಾನವೀಯ ವರ್ತನೆಯನ್ನು ಖಂಡಿಸಿದರು.
ಬಜರಂಗದಳದ ವಿಭಾಗ ಸಂಚಾಲಕ ಕೆ.ಆರ್. ಸುನಿಲ್ ಮಾತನಾಡಿ, ಬೇಹುಗಾರಿಕೆ ಆರೋಪದ ಮೇಲೆ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಜಾಧವ್ ಪಾಕಿಸ್ತಾನದ ಜೈಲಿನಲ್ಲಿದ್ದಾರೆ. ವಿನಾಕಾರಣ ಅವರ ಮೇಲೆ ಆರೋಪ ಹೊರಿಸಿ ಜೈಲಿನಲ್ಲಿ ಇಡಲಾಗಿದೆ ಎಂದರು.
ಪತಿ ಭೇಟಿ ಮಾಡಲು ಸುಮಾರು 18 ತಿಂಗಳಿನಿಂದ ಪತ್ನಿ ಅನುಮತಿ ಕೋರುತ್ತಿದ್ದರು. ಆದರೆ, ಪಾಕಿಸ್ತಾನ ನೀಡಿರಲಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ತಾನು ಒಳ್ಳೆಯ ರಾಷ್ಟ್ರ ಎಂದು ಬಿಂಬಿಸಿಕೊಳ್ಳುವ ಸಲುವಾಗಿ ಕೊನೆಗೆ ಅನುಮತಿ ನೀಡಿತ್ತು.
ಆದರೆ ಭೇಟಿಗೂ ಮುನ್ನ ತಾಳಿ ಬಿಚ್ಚಿಸುವ ಮೂಲಕ ಅಪಮಾನ ಮಾಡಿದ್ದಾರೆ. ಆ ಮೂಲಕ ಇಡೀ ರಾಷ್ಟ್ರದ ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ. ಪಾಕಿಸ್ತಾನ ಇಂತಹ ವರ್ತನೆ ಬಿಡಬೇಕು ಎಂದು ಅವರು ಒತ್ತಾಯಿಸಿದರು. ಉಡುಪಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಳಿನಿ ಪ್ರದೀಪ್. ಲೋಕೇಶ್, ಭಾಗ್ಯಶ್ರೀ, ರಮಾ ರಾವ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.