ಉಡುಪಿ: ಪೌರ ಕಾರ್ಮಿಕರು ಸ್ವಚ್ಛ ಭಾರತ್ ಅಭಿಯಾನದ ನಿಜವಾದ ರಾಯಭಾರಿಗಳು ಎಂದು ಬಿಜೆಪಿಯ ಉಡುಪಿ ನಗರ ಘಟಕದ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ ಹೇಳಿದರು.
ಡಾ.ಬಿ.ಆರ್. ಅಂಬೇಡ್ಕರ್ ಅವರ 125ನೇ ಜನ್ಮ ದಿನಾಚರಣೆ ಪ್ರಯುಕ್ತ ಉಡುಪಿ ನಗರ ಬಿಜೆಪಿಯ ವತಿಯಿಂದ ಬೀಡಿನಗುಡ್ಡೆಯ ಪೌರಕಾರ್ಮಿಕರ ಕಾಲೊನಿಯಲ್ಲಿ ಈಚೆಗೆ ಆಯೋಜಿಸಿದ್ದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಉಡುಪಿ ನಗರದ ಸ್ವಚ್ಛತೆಯನ್ನು ಕಾಪಾಡಿ ಸುಂದರ ಉಡುಪಿ ಎಂದು ಹೆಸರು ಗಳಿಸಲು ಹಗಲಿರುಳು ಶ್ರಮಿಸಿದ ಪೌರಕಾರ್ಮಿಕರ ಕಾಲೊನಿಯಲ್ಲಿ ಬಿಜೆಪಿ ಹಮ್ಮಿಕೊಂಡ ಸ್ವಚ್ಛತಾ ಅಭಿಯಾನವು ಪೌರಕಾರ್ಮಿಕರಲ್ಲಿ ಮತ್ತಷ್ಟು ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದರು.
ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯ ಕೆ. ಉದಯಕುಮಾರ್ ಶೆಟ್ಟಿ ಮಾತನಾಡಿದರು. ನಗರಸಭೆಯ ಸದಸ್ಯರಾದ ದಿನಕರ ಶೆಟ್ಟಿ ಹೆರ್ಗ, ಜಯರಾಮ, ಪುರಸಭೆಯ ಮಾಜಿ ಅಧ್ಯಕ್ಷ ಎಂ. ಸೋಮಶೇಖರ್ ಭಟ್, ನಗರ ಬಿಜೆಪಿ ಉಪಾಧ್ಯಕ್ಷರಾದ ಶ್ರೀಶ ಕೊಡವೂರು, ಜಗದೀಶ್ ಆಚಾರ್ಯ, ಹಿಂದುಳಿದ ಮೋರ್ಚಾದ ನಗರ ಅಧ್ಯಕ್ಷೆ ಲೀಲಾ ಆರ್. ಅಮೀನ್, ಪ್ರಭಾಕರ ಪೂಜಾರಿ, ಮಂಜುನಾಥ್ ಹೆಬ್ಬಾರ್, ನಿತ್ಯಾನಂದ ಶೆಟ್ಟಿ ಮೂಡುಬೆಟ್ಟು, ಸತೀಶ್ ಭಾಗವತ್ ಕುಂಜಿಬೆಟ್ಟು, ಶಿವಕುಮಾರ್ ಅಂಬಲಪಾಡಿ, ಸಂಜೀವ ನಾಯಕ್, ದಿವಕರ ಅಮೀನ್, ಪ್ರಭಾಕರ್ ಗುಂಡಿಬೈಲು, ಶೈಲೇಶ್ ಮಣಿಪಾಲ ಉಪಸ್ಥಿತರಿದ್ದರು. ಗಿರೀಶ್ ಅಂಚನ್ ಸ್ವಾಗತಿಸಿದರು, ರಶ್ಮಿತಾ ಬಾಲಕೃಷ್ಣ ಶೆಟ್ಟಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.