ADVERTISEMENT

ಭರವಸೆ ಈಡೇರಿಸಲು ಬಿಜೆಪಿ ವಿಫಲ: ಟೀಕೆ

ನೋಟು ರದ್ದತಿ: ಕೇಂದ್ರದ ಕ್ರಮ ಖಂಡಿಸಿ ಮಹಿಳಾ ಕಾಂಗ್ರೆಸ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2017, 7:40 IST
Last Updated 10 ಜನವರಿ 2017, 7:40 IST
ಉಡುಪಿ: ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನೀಡಿದ ಭರವಸೆಗಳನ್ನು ಈಡೇರಿ ಸುವಲ್ಲಿ ಸಂಪೂರ್ಣ ವಿಫಲವಾಗಿದೆ ಮತ್ತು ನೋಟು ರದ್ದು ಕ್ರಮದಿಂದ ಜನ ಸಾಮಾನ್ಯರು ತೀವ್ರ ತೊಂದರೆ ಅನು ಭವಿಸುವಂತಾಗಿದೆ ಎಂದು ಆರೋಪಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್‌ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿ ಭಟನೆ ನಡೆಸಿತು.
 
ಮಹಿಳಾ ಘಟಕದ ಅಧ್ಯಕ್ಷೆ ವೆರೋ ನಿಕ ಕರ್ನೇಲಿಯೊ ಮಾತನಾಡಿ, ಯಾವುದೇ ತಯಾರಿ ಇಲ್ಲದೆ ₹500 ಮತ್ತು ₹1000 ಮುಖಬೆಲೆಯ ನೋಟು ಗಳನ್ನು ರದ್ದು ಮಾಡಿದ ಪರಿಣಾಮ ಮಧ್ಯಮ ಹಾಗೂ ಬಡ ವರ್ಗದ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೂಲಿ ಕಾರ್ಮಿಕರು ಕೆಲಸ ಇಲ್ಲದೆ ಪರದಾಡುವಂತಾಗಿದೆ. ಪೂರ್ವ ತಯಾರಿ ಮಾಡಿಕೊಳ್ಳದ ಕಾರಣ ಅಗತ್ಯ ಪ್ರಮಾಣದಷ್ಟು ಹಣ ಬ್ಯಾಂಕ್‌ಗಳಿಗೆ ಪೂರೈಕೆಯಾಗಿಲ್ಲ. ಇದರ ಪರಿಣಾಮ ಜನರು ತಮ್ಮದೇ ಹಣ ಪಡೆಯಲು ಸರದಿ ಸಾಲಿನಲ್ಲಿ ನಿಲ್ಲಬೇಕಾಗಿದೆ. ರೈತರ ಬೆಳೆಗೆ ಬೆಲೆ ಇಲ್ಲದೆ ನಷ್ಟ ಅನುಭವಿ ಸುತ್ತಿದ್ದಾರೆ ಎಂದರು.
 
ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನೀಡಿದ ಭರವಸೆಗಳನ್ನು ಈ ವರೆಗೆ ಈಡೇರಿಸಿಲ್ಲ. ಅಗತ್ಯ ವಸ್ತುಗಳ ಬೆಲೆಗಳು ಏರಿಕೆಯಾಗಿ ಜನ ಸಾಮಾನ್ಯರ ಮೇಲೆ ಹೊಡೆದ ಬಿದ್ದಿದೆ. ಆಡಳಿತದಲ್ಲಿ ಅದು ಸಂಪೂರ್ಣ ವಿಫಲವಾಗಿದೆ. ನೋಟು ಬ್ಯಾನ್  ಮಾಡಿದ ನಂತರ ಇಲ್ಲಿಯ ವರೆಗೆ ಎಷ್ಟು ಪ್ರಮಾಣದ ಕಪ್ಪು ಹಣ ವನ್ನು ಪತ್ತೆ ಮಾಡಲಾಗಿದೆ, ನೋಟು ಅಮಾನ್ಯೀಕರಣವಾದ ನಂತರ ಎಷ್ಟು ಉದ್ಯೋಗ ಹಾಗೂ ಜೀವನಾಧಾರಗಳು ನಷ್ಟವಾಗಿ ಹಾಗೂ ಕ್ರಮ ಕೈಗೊಳ್ಳುವ ಮೊದಲು ತಜ್ಞರೊಂದಿಗೆ ಚರ್ಚಿಸ ಲಾಗಿತ್ತೇ ಎಂಬ ಪ್ರಶ್ನೆಗಳಿಗೆ ಮೋದಿ ಅವರು ಉತ್ತರಿಸಬೇಕು. 
 
ನೋಟು ರದ್ದತಿಯ ಆರು ತಿಂಗಳ ಹಿಂದೆ ₹25 ಲಕ್ಷ ಹಾಗೂ ಅದಕ್ಕಿಂತ ಹೆಚ್ಚಿನ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಟ್ಟವರ ಹೆಸರುಗಳನ್ನು ಬಹಿರಂಗಪಡಿ ಸಬೇಕು ಎಂದು ಅವರು ಆಗ್ರಹಿಸಿದರು. 
 
ಹಣ ಪಡೆಯಲು ವಿಧಿಸಿರುವ ಎಲ್ಲ ರೀತಿಯ ನಿರ್ಬಂಧಗಳನ್ನು ಈ ಕೂಡಲೇ ಹಿಂದಕ್ಕೆ ಪಡೆಯಬೇಕು. ಎಲ್ಲ ಠೇವಣಿ ದಾರರಿಗೆ ನೋಟು ರದ್ದಾದ ದಿನದಿಂದ ಇಲ್ಲಿಯ ವರೆಗೆ ವಿಶೇಷ ಶೇ18ರಷ್ಟು ಹೆಚ್ಚುವರಿ ಬಡ್ಡಿ ನೀಡಬೇಕು. ಸಾರ್ವ ಜನಿಕ ವಿತರಣಾ ವ್ಯವಸ್ಥೆಯಲ್ಲಿ ನೀಡುವ ಆಹಾರ ಧಾನ್ಯಗಳ ಬೆಲೆಯನ್ನು ಶೇ50ರಷ್ಟು ಕಡಿತ ಮಾಡಬೇಕು. ಬಿಪಿಎಲ್ ಕುಟುಂಬದ ಮಹಿಳೆಗೆ ₹20 ಸಾವಿರ ನೀಡಬೇಕು. ನರೇಗಾ ಕೆಲಸದ ದಿನಗಳನ್ನು ದುಪ್ಪಟ್ಟು ಮಾಡಬೇಕು, ನವೆಂಬರ್‌ 8ರ ನಂತರ ಕೆಲಸ ಕಳೆದುಕೊಂಡವರನ್ನು ಗುರುತಿಸಲು ವಿಶೇಷ ಆಂದೋಲನ ರೂಪಿಸಬೇಕು. ಅಂಗಡಿ ಮಾಲೀಕರು ಮತ್ತು ಇತರೆ ಸಣ್ಣ ವ್ಯಾಪಾರಿಗಳಿಗೆ ಶೇ 50ರಷ್ಟು ಮಾರಾಟ ಹಾಗೂ ಆದಾಯ ತೆರಿಗೆ ವಿನಾಯಿತಿ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
 
ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ, ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ ರಾಜ್‌, ಜ್ಯೋತಿ ಹೆಬ್ಬಾರ್‌ ಇದ್ದರು.
 
**
ಡಿಜಿಟಲ್‌ ವ್ಯವಹಾರದ ಮೇಲೆ ವಿಧಿಸಿರುವ ಎಲ್ಲ ರೀತಿಯ ತೆರಿಗೆಗಳನ್ನು ಕೇಂದ್ರ ಸರ್ಕಾರ ಈ ಕೂಡಲೇ ರದ್ದುಪಡಿಸಬೇಕು.
-ವೆರೋನಿಕ ಕರ್ನೇಲಿಯೊ
ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.