ADVERTISEMENT

ಸಂಪತ್ತು ಸಮಾನವಾಗಿ ಹಂಚುವ ವ್ಯವಸ್ಥೆ ನಿರ್ಮಾಣವಾಗಲಿ: ಅಮಾನುಲ್ಲಾ ಖಾನ್‌

​ಪ್ರಜಾವಾಣಿ ವಾರ್ತೆ
Published 15 ಮೇ 2017, 6:48 IST
Last Updated 15 ಮೇ 2017, 6:48 IST
ಉಡುಪಿ: ದೇಶದ ಅಭಿವೃದ್ಧಿಯ ಭಾಗವಾಗಿರುವ ಸಾರ್ವಜನಿಕ ರಂಗದ ಉದ್ದಿಮೆಗಳನ್ನು ಸರ್ಕಾರವು ವ್ಯವಸ್ಥಿತ ವಾಗಿ ನಿರ್ನಾಮಗೊಳಿಸಲು ಉದ್ದೇಶಿಸಿ ರುವ ಈ ಕಾಲಘಟ್ಟದಲ್ಲಿ, ಉದ್ದಿಮೆ ಗಳನ್ನು ರಕ್ಷಿಸುವ ಹಾಗೂ ಜನತೆಯ ಸಂವಿಧಾನಬದ್ಧ ಹಕ್ಕುಗಳನ್ನು ಕಾಪಾ ಡುವ ಕೆಲಸವಾಗಬೇಕು ಎಂದು ಅಖಿಲ ಭಾರತ ವಿಮಾ ನೌಕರರ ಸಂಘದ ಅಧ್ಯಕ್ಷ ಅಮಾನುಲ್ಲಾ ಖಾನ್‌ ಕರೆನೀಡಿದರು. 
 
ನವೆಂಬರ್‌ 18ರಿಂದ 21ರ ವೆರೆಗೆ ಉಡುಪಿಯ ಬಾಸೆಲ್‌ ಮಿಷನರಿಸ್‌ ಸ್ಮಾರಕ ಸಭಾಂಗಣದಲ್ಲಿ ನಡೆಯಲಿರುವ ದಕ್ಷಿಣ ಮಧ್ಯ ವಲಯ ವಿಮಾ ನೌಕರರ ಒಕ್ಕೂಟದ 11ನೇ ಮಹಾಅಧಿವೇಶನದ ಸ್ವಾಗತ ಸಮಿತಿ ರಚನೆ ಮತ್ತು ಸಮಾ ಲೋಚನಾ ಸಭೆಯಲ್ಲಿ ನಗರದ ಬ್ರಹ್ಮಗಿರಿ ಯ ಲಯನ್ಸ್‌ ಭವನದಲ್ಲಿ ಶನಿವಾರ ನಡೆಯಿತು.
 
ಈ ಸಂದರ್ಭ ಮಾತನಾಡಿ, ‘ದೇಶದ ಶೇ ಒಂದರಷ್ಟಿರುವ ಶ್ರೀಮಂತರು ಶೇ 60ರಷ್ಟು ದೇಶ ಸಂಪತ್ತನ್ನು ನಿಯಂತ್ರಿಸುತ್ತಿರುವ ಸಂದರ್ಭದಲ್ಲಿ ದೇಶದ ಅಭಿವೃದ್ಧಿಯ ಫಲವನ್ನು ಸಮಸ್ತ ಜನರಿಗೆ ಸರಿಸಮಾನವಾಗಿ ಹಂಚುವ ವ್ಯವಸ್ಥೆ ನಿರ್ಮಾಣವಾಗಬೇಕಾಗಿದೆ. ಆ ನಿಟ್ಟಿನಲ್ಲಿ ಈ ಸಮಾವೇಶ ಪ್ರಸ್ತುತ’ ಎಂದರು.
 
ದಕ್ಷಿಣ ಮಧ್ಯ ವಿಮಾ ನೌಕರರ ಒಕ್ಕೂಟದ ಜಂಟಿ ಕಾರ್ಯದರ್ಶಿ ಜೆ. ಸುರೇಶ್‌ ಮಾತನಾಡಿ, ಸರ್ಕಾರದ ನೂತನ ಉದಾರೀಕರಣ ನೀತಿಗಳು ಮತ್ತು ಕಾರ್ಮಿಕ ಹಕ್ಕುಗಳ ಮೇಲಿನ ಪ್ರಹಾರಗಳ ವಿರುದ್ಧ ಕಾರ್ಮಿಕ ಸಂಘಗಳು ಸಂಘಟಿತರಾಗಿ ಹೋರಾಟ ನಡೆಸಬೇಕು ಎಂದು ಸಲಹೆ ನೀಡಿದರು. 
 
ಮಹಾಅಧಿವೇಶನದ ಸ್ವಾಗತ ಸಮಿತಿಯ ಅಧ್ಯಕ್ಷ ಡಾ.ಕೆ.ರಾಜೇಂದ್ರ ಉಡುಪ ಮಾತನಾಡಿ, ‘ಪ್ರಸ್ತುತ ಸನ್ನಿವೇಶದಲ್ಲಿ ಕಾರ್ಮಿಕ ವರ್ಗಗಳ ಮುಂದಿರುವ ಸವಾಲುಗಳು ಹಾಗೂ ಹೆಚ್ಚುತ್ತಿರುವ ರೋಬೋಟಿಕ್‌ ತಂತ್ರಜ್ಞಾನದ ಪರಿಣಾಮ ಕಾರ್ಮಿಕ ವರ್ಗದ ಅಸ್ತಿತ್ವ ಕವಲು ದಾರಿಯಲ್ಲಿದೆ. 
 
ಈ ಎಲ್ಲ ತಂತ್ರಜ್ಞಾನದ ಅಳವಡಿಕೆ ಯ ವಿರುದ್ಧ ಕಾರ್ಮಿಕ ವರ್ಗಗಳ ಒಗ್ಗಟ್ಟಿನ ಹೋರಾಟ ಅನಿವಾರ್ಯ. ಈ ದಿಸೆಯಲ್ಲಿ ಮಹಾಅಧಿವೇಶನವು ಈ ಎಲ್ಲ ವಿಷಯಗಳ ಬಗ್ಗೆ ಸಮಗ್ರ ಚರ್ಚೆಯನ್ನು ನಡೆಸಿ ಮುಂಬರುವ ಹೋರಾಟಗಳಿಗೆ ಹೊಸ ದಿಕ್ಕು ಮತ್ತು ಆಯಾಮ ನೀಡಲಿ ಎಂದರು. 
 
ಸಂಘದ ಉಡುಪಿ ವಿಭಾಗದ ಅಧ್ಯಕ್ಷ ಕೆ. ವಿಶ್ವನಾಥ ಅಧ್ಯಕ್ಷತೆ ವಹಿಸಿದ್ದರು. ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಜಿಲ್ಲಾ ಸಂಚಾಲಕ ಅದ ಮಾರು ಶ್ರೀಪತಿ ಆಚಾರ್ಯ, ಸಿ.ಐ.ಟಿ. ಯು ಉಡುಪಿ ಜಿಲ್ಲಾಧ್ಯಕ್ಷ ಪಿ. ವಿಶ್ವನಾಥ ರೈ, ಸಿ.ಐ.ಟಿ.ಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. 
 
ಸಂಘದ ಉಡುಪಿ ವಿಭಾಗದ ಪ್ರಧಾನ ಕಾರ್ಯದರ್ಶಿ ಯು. ಗುರುದತ್‌ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಡೆರಿಕ್‌ ರೆಬೆಲ್ಲೊ ನಿರೂಪಿಸಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.