ADVERTISEMENT

ಸಾಹಿತಿಗಳು ರಾಜಕೀಯ ಚಿಂತಕರಾಗಬೇಕು

ಡಾ.ಕೆ.ಎಸ್‌. ನಿಸಾರ್ ಅಹಮ್ಮದ್‌ ಅವರಿಗೆ ಸನ್ಮಾನ: ಮೋಹನ್ ಆಳ್ವ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2017, 8:57 IST
Last Updated 6 ಡಿಸೆಂಬರ್ 2017, 8:57 IST
ಸಾಹಿತಿ ಡಾ.ಕೆ.ಎಸ್‌. ನಿಸಾರ್ ಅಹಮ್ಮದ್‌ ಅವರನ್ನು ಆಳ್ವಸ್‌ ಫೌಂಡೇಶನ್‌ ಅಧ್ಯಕ್ಷ ಡಾ. ಮೋಹನ್‌ ಆಳ್ವ ಸನ್ಮಾನಿಸಿದರು.
ಸಾಹಿತಿ ಡಾ.ಕೆ.ಎಸ್‌. ನಿಸಾರ್ ಅಹಮ್ಮದ್‌ ಅವರನ್ನು ಆಳ್ವಸ್‌ ಫೌಂಡೇಶನ್‌ ಅಧ್ಯಕ್ಷ ಡಾ. ಮೋಹನ್‌ ಆಳ್ವ ಸನ್ಮಾನಿಸಿದರು.   

ಉಡುಪಿ: ‘ಸಾಹಿತಿಗಳು ರಾಜಕೀಯ ಚಿಂತಕರಾಗಬೇಕೇ ಹೊರತು ರಾಜಕೀಯ ಪುಡಾರಿಗಳಾಗಬಾರದು. ಸಮಾಜಕ್ಕೆ ನೈತಿಕತೆ ರಾಜ ಮಾರ್ಗವನ್ನು ತೋರಿಸ ಬೇಕಾದರವರು ದುರ್ಮೂರ್ತಿಗಳಾಗಬಾರದು’ ಎಂದು ಮೂಡಬಿದಿರೆ ಆಳ್ವಸ್‌ ಫೌಂಡೇಶನ್‌ ಅಧ್ಯಕ್ಷ ಮೋಹನ್‌ ಆಳ್ವ ತಿಳಿಸಿದರು.

ರಂಗಸ್ಥಳ ಸಾಂಸ್ಕೃತಿಕ ಸೇವಾ ಮತ್ತು ಸಂಶೋಧನಾ ಟ್ರಸ್ಟ್‌, ಅಮೋಘ ಸಾಂಸ್ಕೃತಿಕ ಮತ್ತು ಸಾಹಿತ್ಯ ಸಂಘಟನೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಸನ್ಮಾನ ಹಾಗೂ ವಿಚಾರಗೋಷ್ಠಿ ಸಾಹಿತಿ ಡಾ.ಕೆ.ಎಸ್‌. ನಿಸಾರ್ ಅಹಮ್ಮದ್‌ ಅವರನ್ನು ಸನ್ಮಾನಿಸಿ ಮಾತನಾಡಿದರು.
‌ ಇಂದು ಜಾತಿ ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸ ನಡೆಯುತ್ತಿದೆ. ಸಮಾಜ ಹಾಗೂ ಧರ್ಮ ಎನ್ನುವ ಎರಡು ವಿಶಾಲ ಪದಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಧರ್ಮವನ್ನು ಪ್ರತಿಪಾದನೆ ಮಾಡುವವರು ಧರ್ಮ ಜಾತಿ ಹೆಸರಿನಲ್ಲಿ ಸಮಾಜವನ್ನು ವಿಂಗಡಿಸುವ ಮೂಲಕ ನಮ್ಮ ನಡುವೆ ಬೃಹತ್‌ ಕಂದಕವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಇಂದಿನ ರಾಜಕಾರಣಿಗಳು ಕೇವಲ ವೋಟ್‌ ಬ್ಯಾಂಕ್‌ ರಾಜಕಾರಣ ಮಾಡುತ್ತಿದ್ದಾರೆ. ಜಾತಿ ಹೆಸರಿನಲ್ಲಿ ವಿಷ ಬೀಜವನ್ನು ನಾಡಿನೆಲ್ಲೆಡೆ ಹರಡಿಸುತ್ತಿದ್ದಾರೆ. ಹೀಗೆ ಮುಂದುವರೆದರೆ ನಮ್ಮ ದೇಶ ಯಾವ ಹಂತಕ್ಕೆ ತಲುಪುತ್ತದೆ ಎನ್ನುವ ಆತಂಕ ಕಾಡುತ್ತಿದೆ ತಿಳಿಸಿದರು.

ADVERTISEMENT

ವಿಶ್ವದಲ್ಲಿ ಅಸಂಖ್ಯಾತ ಅಭಿಮಾನಿಗಳನ್ನು ಗಳಿಸಿರುವ ನಿಸಾರ್ ಅಹಮ್ಮದ್‌ ಅವರನ್ನು ರಾಜ್ಯದ ಕವಿ ಎಂದು ಗುರುತಿಸುತ್ತಾರೆ, ವಿನಃ ಮುಸ್ಲಿಂ ಕವಿ ಎಂದಲ್ಲ. ಅವರ ಕವನಗಳು ಪ್ರಸುತ್ತ ಸನ್ನಿವೇಶಕ್ಕೂ ಪ್ರಸ್ತುತವಾಗಿವೆ. ಅಂದು ಅವರ ಬರೆದ ಕುರಿಗಳು ಸರ್‌ ಕುರಿಗಳಲ್ಲಿ ಇಂದಿನ ರಾಜಕೀಯ ವಿಡಂಬನೆಯನ್ನು ಕಾಣ ಬಹುದಾಗಿದೆ ಎಂದರು.

ಕರ್ನಾಟಕ ಕೊಂಕಣಿ ಅಕಾಡೆಮಿ ಅಧ್ಯಕ್ಷ ಆರ್.ಪಿ ನಾಯಕ್‌, ಅಮೋಘ ಸಾಂಸ್ಕೃತಿಕ ಸಾಹಿತ್ಯಿಕ ಸಂಘಟನೆ ಪೂರ್ಣಿಮಾ, ಕಾರ್ಯದರ್ಶಿ ಮೇಟಿ ಮುದಿಯಪ್ಪ,ಕಿಶನ್‌ ಹೆಗ್ಡೆ, ಉಪಸ್ಥಿತರಿದ್ದರು. ರಂಗ ಸ್ಥಳ ಸಾಂಸ್ಕೃತ ಸೇವಾ ಸಂಶೋಧನಾ ಟ್ರಸ್ಟ್‌ ಯು.ಆರ್‌ ಸಭಾಪತಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.