ADVERTISEMENT

‘ಮಕ್ಕಳು–ಶಿಕ್ಷಣ: ಕಾರಂತರ ಗೌರವ ಅಪಾರ’

ಕಾರಂತ ಥೀಂ ಪಾರ್ಕ್: ‘ತಂಗಾಳಿ’ ಪುಟಾಣಿಗಳ ಹಬ್ಬಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2015, 5:51 IST
Last Updated 23 ನವೆಂಬರ್ 2015, 5:51 IST

ಬ್ರಹ್ಮಾವರ: ಇಂದು ಮಕ್ಕಳಿಗೆ ಜ್ಞಾನ ನೀಡುವಂತಹ ಶಿಕ್ಷಣ ನೀಡಬೇಕು ಎನ್ನುವ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಆದರೆ ಈ ಮಾತು ಕಾರಂತರಿಂದ ಐವತ್ತು ವರ್ಷಗಳ ಹಿಂದೆಯೇ ಬಂದಿರುವುದನ್ನು ಗಮನಿಸಿದರೆ ಕಾರಂತರಿಗೆ ಶಿಕ್ಷಣ ಮತ್ತು ಮಕ್ಕಳ ಮೇಲಿನ ಗೌರವ ಎಷ್ಟಿತ್ತು ಎನ್ನುವುದು ವ್ಯಕ್ತವಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದೇವದಾಸ ಪೈ ಹೇಳಿದರು.

ಕೋಟ ಕಾರಂತ ಥೀಂ ಪಾರ್ಕನಲ್ಲಿ ಭಾನುವಾರ ಕೋಟ ಡಾ.ಶಿವರಾಮ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ, ಕೋಟ ತಟ್ಟು ಗ್ರಾಮ ಪಂಚಾಯಿತಿ, ಉಡುಪಿಯ ಡಾ.ಶಿವರಾಮ ಕಾರಂತ ಟ್ರಸ್ಟ್, ಕೋಟ ದ ಆನಂದ್ ಸಿ. ಕುಂದರ್ ಅಭಿನಂದನಾ ಸಮಿತಿ ಸಾರಥ್ಯದಲ್ಲಿ ನಡೆದ ‘ತಂಗಾಳಿ 2015’ ಪುಟಾಣಿಗಳ ಹಬ್ಬ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಶಿಕ್ಷಣವನ್ನು ನೀಡುವ, ಪಡೆಯುವ ದಾರಿ ವಿಧಾನದ ಬಗ್ಗೆ ಮಕ್ಕಳಿಂದಲೇ ಅಭಿಪ್ರಾಯವನ್ನು ತೆಗೆದುಕೊಳ್ಳುವುದು ಒಳಿತು ಎಂದ ಅವರು, ಗ್ರಾಮೀಣ ಭಾಗದ ಪುಟಾಣಿಗಳಲ್ಲಿರುವ ಪ್ರತಿಭೆ ಅನಾವರಣಗೊಳಿಸಲು ಕಾರಂತ ಥೀಂ ಪಾರ್ಕ್‌ ಅವಕಾಶ ಕಲ್ಪಿಸಿಕೊಡುತ್ತಿರು ವುದು ಶ್ಲಾಘನೀಯ ಎಂದರು.

ಪುಟಾಣಿಗಳ ಹಬ್ಬ ‘ಸಾಂಸ್ಕೃತಿಕ ಸಿರಿ’ ಕಾರ್ಯಕ್ರಮವನ್ನು ದಿವ್ಯಲಕ್ಷ್ಮೀ ಪ್ರಶಾಂತ್ ಉದ್ಘಾಟಿಸಿದರು. ಕೋಟ ತಟ್ಟು ಪಂಚಾಯಿತಿ ಅಧ್ಯಕ್ಷ ಎಚ್. ಪ್ರಮೋದ್ ಹಂದೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಾರ್ವತಿ, ಸುಬ್ರಾ ಯ ಆಚಾರ್ಯ, ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಶೀಲ ಸೋಮಶೇಖರ್ ಮತ್ತಿತ ರರು ಇದ್ದರು.

ಶಿಕ್ಷಕ ಸಾಹಿತಿ ನರೇಂದ್ರ ಕುಮಾರ್ ಕೋಟ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಪ್ರಮೋದ್ ಹಂದೆ ಸ್ವಾಗತಿಸಿದರು. ಕೋಟತಟ್ಟು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮೀರಾ ವಂದಿಸಿದರು. ಅಂಗನವಾಡಿ ಕಾರ್ಯಕರ್ತೆ ಜಯಲಕ್ಷ್ಮೀ ನಿರೂಪಿಸಿದರು. ನಂತರ ಕೋಟ ಆಸುಪಾಸಿನ ಆಹ್ವಾನಿತ ಅಂಗನವಾಡಿ ಮತ್ತು ಶಿಶುಮಂದಿರಗಳ ಪುಟಾಣಿ ಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಇಂದಿನ ವಿಜ್ಞಾನ ಶಿಕ್ಷಕರಲ್ಲಿ ಮಾಹಿತಿಯ ಕೊರತೆ ತುಂಬಾ ಇದೆ. ಇದನ್ನು ನೀಗಿಸಲು ಸರ್ಕಾರ ಪ್ರಯತ್ನಿಸಬೇಕು
– ದೇವದಾಸ ಪೈ,
ಸಹಾಯಕ ನಿರ್ದೇಶಕರು,
ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.