ADVERTISEMENT

‘ರಾಷ್ಟ್ರೀಯ ಹಬ್ಬಗಳು – ನಮ್ಮ ಕರ್ತವ್ಯ’ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2014, 7:08 IST
Last Updated 26 ನವೆಂಬರ್ 2014, 7:08 IST

ಉಡುಪಿ: ಉಪ್ಪೂರು ಜಾತಾಬೆಟ್ಟುವಿನ ಶ್ರೀ ದುರ್ಗಾ ನವೋದಯ ಸ್ವ ಸಹಾಯ ಸಂಘದ ವಾರ್ಷಿಕ ಯೋಜನೆಯಾದ ‘ತಿಂಗಳ ತಿರುಳಿ’ನ ೩ನೇ ಕಾರ್ಯಕ್ರಮದ ಅಂಗವಾಗಿ ‘ರಾಷ್ಟ್ರೀಯ ಹಬ್ಬಗಳು ಮತ್ತು ನಮ್ಮ ಕರ್ತವ್ಯ’ ವಿಷಯದ ಕಾರ್ಯಾಗಾರ ಉಪ್ಪೂರು ಜಾತಾ­ಬೆಟ್ಟುವಿನ ಸರಸ್ವತೀ ಕೃಪಾದಲ್ಲಿ ಇತ್ತೀಚೆಗೆ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಅಜ್ಜರಕಾಡು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ ದೈಹಿಕ ಶಿಕ್ಷಕ ಸೋಮಪ್ಪ ತಿಂಗಳಾಯ, ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವ ಹಿನ್ನೆಲೆಯನ್ನು ಹಾಗೂ  ರಾಷ್ಟ್ರೀಯ ಹಬ್ಬಗಳಂದು ಧ್ವಜಾರೋಹಣ ಮಾಡುವ ಸಂದರ್ಭ, ಧ್ವಜ ಕಟ್ಟುವ ವಿಧಾನವನ್ನು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು.

ಅಂಬಲಪಾಡಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರಮೇಶ ಪುತ್ತೂರು, ಸಂಘದ ಅಧ್ಯಕ್ಷೆ ಅಂಬುಜಾಕ್ಷಿ, ರಾಮನಾಥ ಶೇರ್ವೆಗಾರ,  ಶ್ರೀಶಾರದಾ ಓಂಶಕ್ತಿ, ವಿಘ್ನೇಶ್ವರ ಹಾಗೂ ನವೋದಯ ಸಂಘಗಳ ಸದಸ್ಯೆಯರು ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ರೇಖಾ ಸ್ವಾಗತಿಸಿದರು, ಸದಸ್ಯೆ ಯಶೋದಾ ಧನ್ಯವಾದ ಅರ್ಪಿಸಿದರು.

ಕಾರ್ತಿಕ್‌ಭರ್ಜರಿ ಶತಕ
ಉಡುಪಿ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಶ್ರಯದಲ್ಲಿ ಮಣಿಪಾಲ ಮತ್ತು ಬ್ರಹ್ಮಾವರದಲ್ಲಿ ನಡೆಯುತ್ತಿರುವ ಜಿಲ್ಲಾ ಮಟ್ಟದ ಅಂತರಶಾಲಾ ಕ್ರಿಕೆಟ್‌ ಪಂದ್ಯಾವಳಿಯ ಐದನೇ ದಿನ ನಡೆದ ಲೀಗ್‌ ಪಂದ್ಯದಲ್ಲಿ ಉಡುಪಿಯ ಇಎಂಎಚ್‌ಎಸ್‌ ಹೈಸ್ಕೂಲ್‌ ತಂಡವು ಕಾಪು ತಂಡದ ವಿರುದ್ಧ 198 ರನ್‌ಗಳ ಭಾರಿ ಅಂತರದ ಜಯ ದಾಖಲಿಸಿತು.

ಭರ್ಜರಿ 148 ರನ್‌ ಹೊಡೆದ ಇಎಂ­ಎಚ್‌ಎಸ್‌ ತಂಡದ ಕಾರ್ತಿಕ್ ಗಮನ ಸೆಳೆದರು. ಉಳಿದ ಎರಡು ಪಂದ್ಯಗಳಲ್ಲಿ, ಉಡುಪಿಯ ಸೇಂಟ್‌ ಮೇರಿಸ್‌ ತಂಡವು ತೆಕ್ಕಟ್ಟೆಯ ವಿಶ್ವವಿನಾಯಕ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿತು. ಮಾಧವ ಕೃಪಾ ಮಣಿಪಾಲ ತಂಡ ಒಳಕಾಡು ಪ್ರೌಢಶಾಲೆ ತಂಡವನ್ನು 9 ವಿಕೆಟ್‌ಗಳ ಅಂತರರಿಂದ ಸೋಲಿಸಿ ನಾಕೌಟ್‌ ಹಂತಕ್ಕೆ ಪ್ರವೇಶ ಪಡೆಯಿತು.

ಪುಣ್ಯಶ್ರೀ ಪ್ರಥಮ
ಬೈಂದೂರು :ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಪ್ರಾಥಮಿಕ ವಿಭಾಗದ ಆಂಗ್ಲ ಕಂಠಪಾಠ ಸ್ಪರ್ಧೆಯಲ್ಲಿ ಕಿರಿಮಂಜೇಶ್ವರ ಶುಭದಾ ಆಂಗ್ಲ ಮಾಧ್ಯಮ ಶಾಲೆಯ 4ನೆ ತರಗತಿ ವಿದ್ಯಾರ್ಥಿನಿ ಎಂ. ಪುಣ್ಯಶ್ರೀ ಜೈನ್ ಮೊದಲ ಸ್ಥಾನ ಗಳಿಸಿರುವಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.