ADVERTISEMENT

₹28 ಕೋಟಿಯ ರಸ್ತೆ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 20 ಮೇ 2017, 5:06 IST
Last Updated 20 ಮೇ 2017, 5:06 IST
ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಶುಕ್ರವಾರ ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು ₹28.76 ಕೋಟಿ ವೆಚ್ಚದ 11 ರಸ್ತೆ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಶುಕ್ರವಾರ ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು ₹28.76 ಕೋಟಿ ವೆಚ್ಚದ 11 ರಸ್ತೆ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.   

ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಶುಕ್ರವಾರ ಮಿಂಚಿನ ಸಂಚಾರ ನಡೆಸಿದ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ನಮ್ಮ ಗ್ರಾಮ ನಮ್ಮ ರಸ್ತೆ ಮತ್ತು ಗ್ರಾಮ ಸಡಕ್‌ ಯೋಜನೆಯಡಿ 20.83 ಕಿ.ಮೀ ಉದ್ದದ ಒಟ್ಟು ₹28.76 ಕೋಟಿ ವೆಚ್ಚದ 11 ರಸ್ತೆ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.

ಅವರು ಮಾತನಾಡಿ, ‘ 4 ವರ್ಷಗಳ ಅವಧಿಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ₹35.2ಕೋಟಿ ವೆಚ್ಚದಲ್ಲಿ 57.37 ಕಿ.ಮೀ ಉದ್ದದ 26 ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸ ಲಾಗಿದೆ’ ಎಂದು ಹೇಳಿದರು.

‘ಕ್ಷೇತ್ರದ ಜನತೆಯ ಬೇಡಿಕೆಗೆ ಅನುಗುಣವಾಗಿ ರಸ್ತೆಗಳ ನಿರ್ಮಾಣ ಕಾರ್ಯ ಕೈಗೊಂಡಿದ್ದು, ಉತ್ತಮ ಗುಣ ಮಟ್ಟದ ರಸ್ತೆಗಳನ್ನು ನಿರ್ಮಿಸಲಾಗಿದೆ. ಹಾಗೆಯೇ ಸಂಪರ್ಕ ರಸ್ತೆಗಳು ಹಾಗೂ ಸೇತುವೆಗಳ ನಿರ್ಮಾಣ ಕಾರ್ಯಕ್ಕೆ ಆದ್ಯತೆ ನೀಡಲಾಗಿದೆ. ಕ್ಷೇತ್ರದಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ ನಿರ್ಮಾಣಗೊಂಡಿರುವ ರಸ್ತೆಗಳನ್ನು 5 ವರ್ಷಗಳ ಕಾಲ ವಾರ್ಷಿಕ ನಿರ್ವಹಣೆ ಹಾಗೂ 6ನೇ ವರ್ಷದಲ್ಲಿ ರಸ್ತೆಯ ನವೀಕರಣ ಜವಾಬ್ದಾರಿಯನ್ನು ಸಂಬಂ ಧಪಟ್ಟ ಗುತ್ತಿಗೆದಾರರಿಗೆ ವಹಿಸಲಾಗಿದೆ. ಇದರಿಂದ ಕನಿಷ್ಠ 10 ವರ್ಷಗಳ ಕಾಲ ಜನತೆಗೆ ಉತ್ತಮ ಗುಣಮಟ್ಟದ ರಸ್ತೆ ಸೌಲಭ್ಯ ದೊರೆಯಲಿದೆ’ ಎಂದರು.

ADVERTISEMENT

ರಾಷ್ಟ್ರೀಯ ಹೆದ್ದಾರಿ 66ರಿಂದ ಬ್ರಹ್ಮಾವರ ಕೃಷಿ ಕೇಂದ್ರದ ವರೆಗಿನ ಸುಮಾರು ₹305.30 ಲಕ್ಷದ ರಸ್ತೆ ಕಾಮಗಾರಿ, ₹167.10 ಲಕ್ಷದ ಕೆಮ್ಮಣ್ಣು ಜ್ಯೋತಿ ನಗರದಿಂದ ನೇಜಾರು ರಸ್ತೆ ಕಾಮಗಾರಿ, ₹226.10 ಲಕ್ಷದ ನೇಜಾರು ಜಂಗಮರಬೆಟ್ಟುವಿನಿಂದ ನಿಡಂಬಳ್ಳಿ ಕೆಮ್ಮಣ್ಣು ರಸ್ತೆ ಕಾಮಗಾರಿ, ₹214.60 ಲಕ್ಷದ ರಾಮನ್‌ಕುದ್ರುನಿಂದ ನಂದನ್‌ಕುದ್ರು ನೀಲಾವರ ಲಿಂಕ್‌ ರಸ್ತೆ ಕಾಮಗಾರಿ, ₹184.70 ಲಕ್ಷದ ಬಾಯರ ಬೆಟ್ಟುವಿನಿಂದ ಕಕ್ಕುಂಜೆ ಗೋರ್ಪಳ್ಳಿ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿದರು.

₹259.50 ಲಕ್ಷದ ಸೂರುಂಟೆ ಕಂಬಲಗದ್ದೆ ಎಲ್ಲಂಪಳ್ಳಿ ರಸ್ತೆ ಕಾಮಗಾರಿ, ₹131.20 ಲಕ್ಷದ ಕರ್ಜೆ ಹಲುವಳ್ಳಿ ಹಿಂಕ್ಲಾಡಿ ರಸ್ತೆ ಕಾಮಗಾರಿ, ₹181.80 ಲಕ್ಷದ ಸಾಸ್ತಾವು ಹಲುವಳ್ಳಿ ಕಂಗಿಬೆಟ್ಟು ರಸ್ತೆ ಕಾಮಗಾರಿ, ₹172.70 ಲಕ್ಷದ ಕೆಂಜೂರು ನಾಲ್ಕೂರುರಿಂದ ಚಪ್ಪರ್‌ಮಠ ಮೂಡಬೆಟ್ಟು ರಸ್ತೆ ಕಾಮಗಾರಿ ಹಾಗೂ ಕಳತ್ತೂರು ಸೀತಾನದಿಯಿಂದ ಸಂತೆಕಟ್ಟೆಯ ವರೆಗಿನ ₹159.50 ಲಕ್ಷದ ರಸ್ತೆ ಕಾಮಗಾರಿಗಳಿಗೆ ಸಚಿವರು ಭೂಮಿಪೂಜೆ ಮಾಡಿದರು.

ಇಡೀ ಕ್ಷೇತ್ರದಲ್ಲಿ ನಡೆದ ಎಲ್ಲ ಕಾಮಗಾರಿ ಪ್ರದೇಶಗಳಿಗೆ ಸಚಿವರು ಕೆಎಸ್‌ಆರ್‌ಟಿಸಿಯ ನರ್ಮ್‌ಬಸ್‌ನಲ್ಲಿ ತೆರಳಿ ಭೂಮಿಪೂಜೆ ನೆರವೇರಿಸಿದ್ದು ವಿಶೇಷವಾಗಿತ್ತು.  ಜಿಲ್ಲಾ ಪಂಚಾಯಿತಿ ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಡಾ. ಸುನೀತಾ ನಾಯಕ್‌, ಗೋಪಿ ಕೆ. ನಾಯ್ಕ್‌, ಚಾಂತಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಸ್ವತಿ ನಾಯಕ್‌, ಕೆಡಿಪಿ ಸದಸ್ಯ ಉಮೇಶ್‌ ಚೇರ್ಕಾಡಿ, ವೆರೋನಿಕಾ ಕರ್ನೇಲಿಯೊ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.