ಕಾರ್ಕಳ: ನಗರದ ಮಂಜುನಾಥ ಪೈ ಸಾಂಸ್ಕೃತಿಕ ಸಭಾಭವನದಲ್ಲಿ ಶನಿವಾರ ವಿಕಾಸ ಸೇವಾ ಸಂಸ್ಥೆ ಹಾಗೂ ಮಣಿಪಾಲ ವಿಶ್ವ ವಿದ್ಯಾಲಯ ಮಣಿಪಾಲ ಇವುಗಳ ಸಹಯೋಗದಲ್ಲಿ 962 ಆಟೋ ರಿಕ್ಷಾ ಚಾಲಕರಿಗೆ ತಲಾ ₹ 50ಸಾವಿರ ಚಿಕಿತ್ಸಾ ವೆಚ್ಚದ ಆರೋಗ್ಯ ಸುರಕ್ಷಾ ಕಾರ್ಡ್ ವಿತರಿಸಲಾಯಿತು.
ಮಣಿಪಾಲ ವಿಶ್ವವಿದ್ಯಾಲಯದ ಜನರಲ್ ಮೆನೇಜರ್ ಶ್ರೀಪತಿ ಮಾತನಾಡಿ, ‘ಎಲ್ಲ ರಿಕ್ಷಾ ಚಾಲಕರು ಆರೋಗ್ಯವಂತರಾಗಿ ಸಮಾಜದಲ್ಲಿ ಬಾಳುವಂತಾಗಬೇಕು. ಒಂದು ವೇಳೆ ಚಾಲಕರಿಗೆ ಆರೋಗ್ಯ ವ್ಯತ್ಯಯಗಳಾದಲ್ಲಿ ಮಣಿಪಾಲ ವಿಶ್ವವಿದ್ಯಾಲಯದ ಆರೋಗ್ಯ ಕಾರ್ಡ್ ನೆರವಿಗೆ ಬರಲಿದೆ. ಈ ವರ್ಷ ಸುಮಾರು 962 ಮಂದಿ ಫಲಾನುಭವಿಗಳಿಗೆ ಕಾರ್ಡ್ ನೀಡಲಾಗಿದ್ದು ಮುಂದಿನ ವರ್ಷ ಇನ್ನಷ್ಟು ರಿಕ್ಷಾ ಚಾಲಕರಿಗೆ ಈ ಸೌಲಭ್ಯ ನೀಡಲಾಗುತ್ತದೆ’ ಎಂದರು.
ಆಟೋ ರಿಕ್ಷಾ ಚಾಲಕ ಮಾಲಕರ ಸಂಘಗಳ ಒಕ್ಕೂಟದ ಗೌರವಾಧ್ಯಕ್ಷ ರಘುಪತಿ ಭಟ್ ಕಾರ್ಯಕ್ರಮ ಉದ್ಘಾಟಿಸಿ, ‘ರಿಕ್ಷಾ ಚಾಲಕರಿಗೆ ಆರೋಗ್ಯ ಕಾರ್ಡ್ನ್ನು ವಿತರಿಸುವ ಮೂಲಕ ಕಾರ್ಕಳ ಶಾಸಕರು ಹೊಸ ಹೆಜ್ಜೆ ಇಟ್ಟಿದ್ದಾರೆ. ರಿಕ್ಷಾ ಚಾಲಕರ ಪರವಾಗಿ ಕಾರ್ಕಳ ಶಾಸಕರು ವಿಧಾನಸಭೆಯಲ್ಲಿಯೂ ಮಾತನಾಡಿದ್ದಾರೆ. ಮೀಟರ್ ದರ ಏರಿಸುವಂತೆಯೂ ಮನವಿ ಮಾಡಿದ್ದಾರೆ. ಇದೀಗ ಉಡುಪಿ ನಂತರ ಕಾರ್ಕಳದಲ್ಲಿ ರಿಕ್ಷಾ ಚಾಲಕರಿಗೆ ಈ ಸೌಲಭ್ಯ ವಿತರಣೆಯಾಗಿರುವುದು ಶ್ಲಾಘನೀಯ’ ಎಂದರು.
ಶಾಸಕ ವಿ.ಸುನಿಲ್ ಕುಮಾರ್ ಮಾತನಾಡಿ, ರಿಕ್ಷಾ ಚಾಲಕರಿಗೆ ಮುಂದೆ ತಾಲ್ಲೂಕಿನಲ್ಲಿ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದರು. ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಸುರೇಶ್ ಅಮೀನ್ ಉಪಸ್ಥಿತರಿದ್ದರು. ಪ್ರವೀಣ್ ಸಾಲ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ್ ರಾವ್ ಸ್ವಾಗತಿಸಿದರು. ಸಂಗೀತಾ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.