ಉಡುಪಿ: ಕುಂಭದ್ರೋಣ ಮಳೆಯ ಆರ್ಭಟದ ಮಧ್ಯೆಯೂ ವಿಶ್ವಸುಂದರಿಯನ್ನು ಕಣ್ತುಂಬಿಕೊಳ್ಳಲು ಶನಿವಾರ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ಮಳಿಗೆ ಮುಂದೆ ನೂರಾರು ಮಂದಿ ನೆರೆದಿದ್ದರು.
ಮಧ್ಯಾಹ್ನ 12ರ ಸುಮಾರಿಗೆ ಸುರಿಯುತ್ತಿದ್ದ ಮಳೆಯಲ್ಲಿಯೇ ವೇದಿಕೆಗೆ ಬಂದ ವಿಶ್ವಸುಂದರಿ ಮಾನುಷಿ ಚಿಲ್ಲರ್ಗೆ ಮಹಿಳೆಯರ ಚಂಡೆ ಬಾರಿಸುವ ಮೂಲಕ ಸ್ವಾಗಗತ ಕೋರಿದರು.
ಕ್ರೀಂ ಕಲರ್ ಕ್ರಾಕ್ಟಾಪ್ ಧಿರಿಸಿನಲ್ಲಿ, ಮಿರಮಿರ ಮಿಂಚುತ್ತಿದ್ದ ವಿಶ್ವಸುಂದರಿ ಗಾಳಿಯಲ್ಲಿ ಅಭಿಮಾನಿಗಳತ್ತ ಕೈಬೀಸುತ್ತ ಸಾಗಿದರು. ಬಳಿಕ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ನ ಸ್ಥಳಾಂತರಗೊಂಡ ಬೃಹತ್ ಶೂರೂಂ ಅನ್ನು ಉದ್ಘಾಟಿಸಿದರು.
ನಂತರ ನೂತನ ಶೋರೂಂನಲ್ಲಿ ಆಭರಣ ಖರೀದಿಸಿದ ಹಲವು ಗ್ರಾಹಕರಿಗೆ ಆಭರಣಗಳನ್ನು ಹಸ್ತಾಂತರಿಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಅವರು ಮಾತನಾಡಿದ ಅವರು, ‘ಸಧ್ಯ ಚಲನಚಿತ್ರಗಳಲ್ಲಿ ಅಭಿನಯಿಸುವ ಯಾವುದೇ ಉದ್ದೇಶ ಇಲ್ಲ. ಒಂದು ವರ್ಷದ ಅವಧಿಗೆ ಪ್ರಖ್ಯಾತ ಕಂಪೆನಿಗಳ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಬಳಿಕ ಶಿಕ್ಷಣವನ್ನು ಮುಂದುವರಿಸುವ ಉದ್ದೇಶವಿದೆ’ ಎಂದರು.
ವಾಣಿಜ್ಯ ಚಟುವಟಿಕೆಗಳನ್ನು ಹೊರತುಪಡಿಸಿ, ಮಹಿಳೆಯರ ಆರೋಗ್ಯ ಕ್ಷೇತ್ರದಲ್ಲೂ ಕೆಲಸ ಮಾಡುತ್ತಿದ್ದೇನೆ. ಮಹಿಳೆಯರು ಋತುಸ್ರಾವದ ವೇಳೆ ಎದುರಿಸುವ ಆರೋಗ್ಯ ಸಮಸ್ಯೆಗಳ ಬಗ್ಗೆ ಎಲ್ಲೆಡೆ ಜಾಗೃತಿ ಮೂಡಿಸುತ್ತಿದ್ದೇನೆ ಎಂದರು.
ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಎಂಡಿ ಒ.ಆಷರ್ ಮಾತನಾಡಿ, ‘ವಿಶ್ವಸುಂದರಿ ಮಾನುಷಿ ಚಿಲ್ಲರ್ ಸಂಸ್ಥೆಯ ಬ್ರಾಂಡ್ ಅಂಬಾಸಿಡರ್ ಆಗಿರುವುದು ಹೆಮ್ಮೆ ತಂದಿದೆ. ಮಲಬಾರ್ ಚಿನ್ನಾಭರಣ ಮಾರಾಟ ಸಂಸ್ಥೆಯು ಗುಣಮಟ್ಟದ ಆಭರಣ ಮಾರಾಟ ಕ್ಷೇತ್ರದಲ್ಲಿ ವಿಶ್ವಮಟ್ಟದಲ್ಲಿ ಹೆಸರು ಮಾಡಿದೆ. ಮುಂದೆಯೂ ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ ಸಂಸ್ಥೆಯು ಬದ್ಧವಾಗಿದೆ ಎಂದರು.
ಆಭರಣ ಖರೀದಿಸಿದ ಗ್ರಾಹಕರಿಗೆ ಮಾನುಷಿ ಜತೆ ಫೋಟೊ ತಗೆಸಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಬಳಿಕ ವೇದಿಕೆಯಲ್ಲಿ ಜನರು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ತುಳುವಿನಲ್ಲಿ ಉಡುಪಿ ಪೋದ್ ಬರ್ಪೆ ( ಉಡುಪಿ ಹೋಗಿ ಬರ್ತೇನೆ) ಎಂದು ಹೇಳುವ ಮೂಲಕ ಎಲ್ಲರ ಚಪ್ಪಾಳೆ ಗಿಟ್ಟಿಸಿದರು.
ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ನ ಪ್ರಾದೇಶಿಕ ಮುಖ್ಯಸ್ಥ ಇಫ್ಲೂ ರೆಹಮಾನ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.