ಶಿರಸಿ: ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಿದ ಸಂಸದ ಅನಂತಕುಮಾರ ಹೆಗಡೆ, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಬಿಜೆಪಿ ಕಾರ್ಯಕರ್ತರನ್ನು ಗುರುವಾರ ಇಲ್ಲಿ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದರು.
ತಾಲ್ಲೂಕು ಆಡಳಿತದ ವತಿಯಿಂದ ಮಿನಿ ವಿಧಾನಸೌಧದಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ನಾಡಿಗಗಲ್ಲಿಯ ಪಕ್ಷದ ಕಚೇರಿಯಿಂದ ಕಪ್ಪುಪಟ್ಟಿ ಧರಿಸಿ ಹೊರಟರು. ದೇವಿಕೆರೆ ಬಳಿ ಬರುತ್ತಿದ್ದಂತೆ ಪೊಲೀಸರು ಅವರನ್ನು ತಡೆದರು. ಅದನ್ನು ವಿರೋಧಿಸಿದ ಸಂಸದ ಅನಂತಕುಮಾರ ಹೆಗಡೆ ‘ನಾವು ಘೋಷಣೆ ಕೂಗುವುದಿಲ್ಲ.
ಹೀಗೆ ಸುಮ್ಮನೆ ರಸ್ತೆಯಲ್ಲಿ ಹೋಗಿ ಬರುತ್ತೇವೆ, ಬಿಡಿ’ ಎಂದರು. ಕಪ್ಪುಪಟ್ಟಿ ಧರಿಸಿ ಹೋಗಲು ಪೊಲೀಸರು ಅನುಮತಿ ನಿರಾಕರಿಸಿದಾಗ ಸಂಸದರು ಶರ್ಟ್ ಬಿಚ್ಚಿ ರಸ್ತೆಯ ಮೇಲೆ ಕುಳಿತು ಪ್ರತಿಭಟಿಸಿದರು. ಅವರೊಂದಿಗೆ ಕೆಲವು ಕಾರ್ಯಕರ್ತರು ಸಹ ಅಂಗಿ ತೆಗೆದು ಕುಳಿತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅದೇ ವೇಳೆ ಅಲ್ಲಿಗೆ ಬಂದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಒಳಗೊಂಡು ಎಲ್ಲ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ವಾಹನದಲ್ಲಿ ಲೋಕೋಪಯೋಗಿ ಪ್ರವಾಸಿ ಗೃಹಕ್ಕೆ ಕರೆದೊಯ್ದು 144ನೇ ಸೆಕ್ಷನ್ ಉಲ್ಲಂಘನೆ ಆರೋಪದ ಮೇಲೆ 30 ಜನರ ಮೇಲೆ ಪ್ರಕರಣ ದಾಖಲಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅನಂತಕುಮಾರ ಹೆಗಡೆ ‘ಭ್ರಷ್ಟ ಕಾಂಗ್ರೆಸ್ ಸರ್ಕಾರ ಮಾನವೀಯತೆ, ಹಿಂದೂ ವಿರೋಧಿ ಟಿಪ್ಪು ಜಯಂತಿ ಆಚರಿಸುತ್ತಿದೆ. ಪೊಲೀ ಸರು ಅಮಾಯಕರ ಮೇಲೆ ದೌರ್ಜನ್ಯ ನಡೆಸಿ ನಮ್ಮನ್ನು ಬಂಧಿಸಿದ್ದಾರೆ. ಬಹುಸಂಖ್ಯಾತರ ಭಾವನೆಗಳನ್ನು ತುಚ್ಛೀಕರಿಸಿ ಸರ್ಕಾರ ಪ್ರಜಾಪ್ರಭುತ್ವದ ಧ್ವನಿಯನ್ನು ದಮನಿಸಲು ಹೊರಟಿರು ವುದು ಆಘಾತಕಾರಿಯಾಗಿದೆ’ ಎಂದರು.
ಪೊಲೀಸರು ಪ್ರಕರಣ ದಾಖಲಾದ ಕ್ಷಣದಲ್ಲಿ ಹೊರಟ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ 4ನೇ ವಾರ್ಡಿನಲ್ಲಿ ಜನಸಂಪರ್ಕ ಸಭೆ ನಡೆಸಿದರು.
ಹಳಿಯಾಳ:ಬಿಜೆಪಿ ಕಾರ್ಯರ್ತರ ಬಂಧನ ಬಿಡುಗಡೆ
ಹಳಿಯಾಳ: ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯನ್ನು ವಿರೋಧಿಸಿ ಬಿಜೆಪಿ ತಾಲ್ಲೂಕು ಘಟಕದ ವತಿಯಿಂದ ಕರಾಳ ದಿನ ಆಚರಿಸಲಾಯಿತು.
ಬಿಜೆಪಿ ಮುಖಂಡರು ಕಪ್ಪು ಪಟ್ಟಿ ಧರಸಿ ವನಶ್ರೀ ಸರ್ಕಲ್ ಬಳಿ ಪ್ರತಿಭಟನೆ ನಡೆಸುತ್ತಿದ್ದಂತೆ ಪೋಲಿ ಸರು ಬಿಜೆಪಿ ಮುಖಂಡ, ಕಾರ್ಯಕರ್ತರನ್ನು ಬಂಧಿಸಿ ನಂತರ ಬಿಡುಗಡೆಗೊಳಿಸಿದರು. ಮಾಜಿ ಶಾಸಕ ಸುನೀಲ ಹೆಗಡೆ, ರಾಜು ಧೂಳಿ, ಶಿವಾಜಿ ನರಸಾನಿ, ನಾಗೇಂದ್ರ ಗೌಡಪ್ಪನವರ, ಪ್ರಕಾಶ ಕಮ್ಮಾರ, ಸಂತೋಷ ಘಟಕಾಂಬಳೆ, ರಾಘವೇಂದ್ರ ನಾಯ್ಕ, ಅನಿಲ ಮುತ್ನಾಳ, ವಿಜಯ ಬೊಬಾಟಿ, ಸಿದ್ದು ಪಟ್ಟಣಶೆಟ್ಟಿ, ಉಲ್ಲಾಸ ಬಿಡಿಕರ, ಪ್ರದೀಪ ಹಿರೇಕರ, ಬಂಟಿ ಗಿರಿ, ಅಶೋಕ ಬಂಧಿಸಲ್ಪಟ್ಟರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.