ಮುಂಡಗೋಡ: ‘ತಾಲ್ಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅನ್ನು ಕಟ್ಟಿ ಬೆಳೆಸಿದ, ಸಾಂಸ್ಕೃತಿಕ ರಾಯಭಾರಿ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕರಾಗಿದ್ದ ಎ.ಎಚ್.ದೊಡ್ಮನಿ ಅವರು ನಿಧನರಾದ ದಿನದಂದೇ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ವತಿಯಿಂದ ‘ವರುಷ–ಹರುಷ’ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಿರುವುದು ಸಾಹಿತ್ಯಾಸಕ್ತರಿಗೆ ನೋವು ತಂದಿದೆಯಲ್ಲದೇ, ಅಗಲಿದ ಸಾಹಿತಿಗೆ ಅವಮಾನ ಮಾಡಿದಂತಾಗಿದೆ’ ಎಂದು ಕಸ್ತೂರಿ ಸಿರಿಗನ್ನಡ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಡಿ.ಮುಡೆನ್ನವರ ಪ್ರಕಟಣೆಯಲ್ಲಿ ದೂರಿದ್ದಾರೆ.
‘ಜಿಲ್ಲೆಯಾದ್ಯಂತ ಸಾಹಿತ್ಯ ಕೃಷಿಯನ್ನು ಮಾಡಿದ್ದ ಹಾಗೂ ಮೂರನೇ ತಾಲ್ಲೂಕು ಮಟ್ಟದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಎ.ಎಚ್.ದೊಡ್ಮನಿ ಅವರು, ಇದೇ 6ರಂದು ನಿಧನರಾದ ಸುದ್ದಿ ತಿಳಿದು ಜಿಲ್ಲೆಯ, ತಾಲ್ಲೂಕಿನ ಸಾಹಿತಿಗಳು ದುಃಖದಲ್ಲಿದ್ದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ವತಿಯಿಂದ ಅಂದೇ ಮಧ್ಯಾಹ್ನ ನಡೆಯಬೇಕಿದ್ದ, ವರುಷ–ಹರುಷ ಕಾರ್ಯಕ್ರಮವನ್ನು ಅಗಲಿದ ಸಾಹಿತಿಯ ಗೌರವಾರ್ಥ, ಮುಂದೂಡಬೇಕೆಂದು ಸಾಹಿತ್ಯಾಸಕ್ತರು ಮನವಿ ಮಾಡಿಕೊಂಡರೂ ಸಹಿತ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು, ಸನ್ಮಾನ ಕಾರ್ಯಕ್ರಮವನ್ನೇ ಮೂಲ ಉದ್ದೇಶವಾಗಿಟ್ಟುಕೊಂಡು, ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅವರ ಇಂತಹ ಕೆಟ್ಟ ನಿರ್ಧಾರವನ್ನು ಕಸ್ತೂರಿ ಸಿರಿಗನ್ನಡ ವೇದಿಕೆ ಖಂಡಿಸುತ್ತದೆ. ಅಲ್ಲದೇ ಬಹಿರಂಗವಾಗಿ ಕ್ಷಮೆ ಕೋರಿ, ಅಗಲಿದ ಹಿರಿಯ ಸಾಹಿತಿಯ ಗೌರವವನ್ನು ಎತ್ತಿಹಿಡಿಯಬೇಕು’ ಎಂದು ಎಸ್.ಡಿ.ಮುಡೆನ್ನವರ ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.